ತುಮಕೂರು: ದೃಢನಿರ್ಧಾರ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಐಎಎಸ್ ನಂತಹ ಸಂಕೀರ್ಣ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬಹುದು. ಈ ಪ್ರಕ್ರಿಯೆಯಲ್ಲಿ ಯಾವುದೇ ಸಣ್ಣಪುಟ್ಟ ಆಕರ್ಷಣೆಗಳಿಗೆ ಒಳಗಾಗಿ ದಾರಿತಪ್ಪಬಾರದು ಎಂದು ಬೆಂಗಳೂರಿನ ಇನ್ ಸೈಟ್ಸ್ ಅಕಾಡೆಮಿ ಸಂಸ್ಥಾಪಕ ವಿನಯ್ ಕುಮಾರ್ ಜಿ.ಬಿ. ತಿಳಿಸಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ವೃತ್ತಿಮಾರ್ಗದರ್ಶನ ಮತ್ತು ನೇಮಕಾತಿ ಘಟಕವು ಮಂಗಳವಾರ ಹಮ್ಮಿಕೊಂಡಿದ್ದ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳ ಕುರಿತ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನೇಕ ಗ್ರಾಮೀಣ ಯುವಕರು ಬಡತನದಲ್ಲೇ ಹುಟ್ಟಿರುತ್ತಾರೆ. ಆದರೆ ಬಡತನದಲ್ಲೇ ಜೀವನ ಕಳೆಯಬೇಕಾಗಿಲ್ಲ. ಅವರು ಐಎಎಸ್ನಂತಹ ಉನ್ನತ ಕನಸುಗಳನ್ನು ಕಟ್ಟಿಕೊಂಡು ನನಸಾಗಿಸಲು ದೃಢನಿರ್ಧಾರ ಮಾಡಬೇಕು. ಅಭಿವೃದ್ಧಿಶೀಲ ದೇಶ ಅಭಿವೃದ್ಧಿ ಹೊಂದಿದ ದೇಶವಾಗಿ ಬದಲಾಗಬೇಕಾದರೆ ಅವರ ಕೊಡುಗೆ ಮುಖ್ಯ ಎಂದರು.
ಯುಪಿಎಸ್ಸಿ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಹಿಂದೆ ಯುವಕರು ದೆಹಲಿಯಂತಹ ದೂರದ ಪ್ರದೇಶಗಳಿಗೆ ಹೋಗಬೇಕಿತ್ತು. ಈಗ ಸಮೀಪದ ಬೆಂಗಳೂರಿನಲ್ಲೇ ಉತ್ಕೃಷ್ಟ ಸೌಲಭ್ಯಗಳಿವೆ. ಐಎಎಸ್ ಆಕಾಂಕ್ಷಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಿಣಿ, ನಾಗರಿಕ ಸೇವಾ ಪರೀಕ್ಷೆಗಳನ್ನು ತೇರ್ಗಡೆಯಾಗುವುದು ದೇಶಸೇವೆ ಮಾಡಲು ಇರುವ ಒಂದು ಅಪೂರ್ವ ಅವಕಾಶ. ಪದವಿ ವಿದ್ಯಾರ್ಥಿಗಳು ವ್ಯಾಸಂಗದ ಸಮಯದಿಂದಲೇ ಸರಿಯಾಗಿ ಯೋಜನೆ ಹಾಕಿಕೊಂಡು ಮುಂದುವರಿದರೆ ಉನ್ನತ ಹುದ್ದೆಗಳನ್ನು ಪಡೆಯುವುದು ಕಷ್ಟವಲ್ಲ ಎಂದರು.
ಐಎಎಸ್ ನಂತಹ ಪರೀಕ್ಷೆಗಳನ್ನು ತೇರ್ಗಡೆಯಾಗುವುದರಲ್ಲಿ ಕನ್ನಡಿಗರ ಪ್ರಮಾಣ ಕಡಿಮೆಯಿತ್ತು. ಇತ್ತೀಚಿನ ವರ್ಷಗಳಲ್ಲಿ ಅನೇಕ ಮಂದಿ ಕನ್ನಡಿಗರು ಐಎಎಸ್ನಲ್ಲಿ ಉತ್ತಮ ರ್ಯಾಂಕ್ ಗಳಿಸುತ್ತಿದ್ದಾರೆ. ಈ ಪ್ರಮಾಣ ದುಪ್ಪಟ್ಟಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್ ತೇಜಸ್ ಮಾರ್ಗದರ್ಶನ ನೀಡಿದರು. ವೃತ್ತಿ ಮಾರ್ಗದರ್ಶನ ಘಟಕದ ಸಂಚಾಲಕ ಡಾ.ಸಿಬಂತಿ ಪದ್ಮನಾಭ ಕೆ. ವಿ., ಸದಸ್ಯರಾದ ಡಾ. ವೇಣುಗೋಪಾಲ ಬಿ.ಎಸ್., ಡಾ. ಸುಬ್ರಹ್ಮಣ್ಯ ಶರ್ಮಾ ವಿ., ಡಾ. ಮೋಹನ್ ಪ್ರಕಾಶ್, ಪ್ರಹ್ಲಾದ ಜಿ., ಹೇಮಂತ್ ಕುಮಾರ್ ಕೆ.ಪಿ., ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಮೌಳಿ, ಡಾ. ಸಿ. ಶೋಭಾ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW