ತಿಪಟೂರು: ಸಮಾಜದಲ್ಲಿನ ಸಾಮರಸ್ಯ ಹಾಗೂ ಸೌಹಾರ್ದದ ಕೊರತೆಯಿಂದ ರಾಜ್ಯದಲ್ಲಿ ವೀರಶೈವ ಸಮಾಜ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಿನಿಂದ ನಡೆದರೆ ನಮ್ಮನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ಬಾಳೆಹೊನ್ನೂರು ರಂಬಾಪುರಿ ಮಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಪಿ.ಜಿ.ಎಂ ಕಲ್ಯಾಣ ಮಂಟಪದಲ್ಲಿ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮದ ಆದರ್ಶಗಳನ್ನು ತಿಳಿದು ಸಮಾಜ ಕಟ್ಟುವ ಕೆಲಸವಾಗಬೇಕು. ಸಮುದಾಯದ ಜನ ಒಗ್ಗೂಡಿ ಗಟ್ಟಿ ಹೆಜ್ಜೆ ಇಡಬೇಕು. ಸ್ವಾಭಿಮಾನ, ಸಂಘಟನೆಯ ವೈಫಲ್ಯದಿಂದಾಗಿ ಸಮಾಜ ಛಿದ್ರವಾಗುತ್ತಿದೆ. ಸಂಘಟನೆಗೆ ಅಸಾಧ್ಯವಾದದ್ದನ್ನು ಸಾಧ್ಯಮಾಡುವ ಶಕ್ತಿಯಿದೆ ಎಂದು ಹೇಳಿದರು.
ಇಂದು ಬಸವಣ್ಣನ ಹೆಸರು ಹೇಳುವವರು ವೀರಶೈವ, ಲಿಂಗಾಯತ ಬೇರೆ ಎಂದು ಹೇಳಿ ದ್ವಂದ್ವ ಹುಟ್ಟು ಹಾಕಿ, ಕಲುಷಿತ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಲಕ್ಷ ಲಕ್ಷ ಖರ್ಚು ಮಾಡಿ ಶಿಕ್ಷಣ ನೀಡಿದರೂ ಇಂದು ವೃದ್ಧಾಶ್ರಮಕ್ಕೆ ತಂದೆ ತಾಯಿಗಳನ್ನು ಸೇರಿಸುತ್ತಿದ್ದಾರೆ. ಅಂತಹವರಿಗೆ ಧರ್ಮಾಚರಣೆ, ಸಂಸ್ಕಾರಗಳನ್ನು ಕಲಿಸಬೇಕಿದೆ. ವಿದ್ಯಾರ್ಥಿಗಳು ವಿತ್ಯ ಕನಸು ಕಾಣುತ್ತಾ ಸ್ಪಷ್ಟ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕಿದ ಎಂದರು.
ಶಾಸಕ ಕೆ.ಷಡಕ್ಷರಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದಲ್ಲಿ ಸ್ವಲ್ಪ ಗೊಂದಲವಿದ್ದು, ಸಮೀಕ್ಷೆ ಸಂದರ್ಭದಲ್ಲಿ ಸಮಾಜದ 52 ಜನ ಶಾಸಕರ ಸಭೆ ನಡೆಸಲಾಗಿತ್ತು, ಗೊಂದಲಗಳನ್ನು ಮಠ ಮಾನ್ಯರ ಹಿರಿಯರು ಬಗೆಹರಿಸಬೇಕಿತ್ತು. ಮೊದಲು ನಾವು ಹಿ೦ದೂಗಳಾಗಿದ್ದು ನಂತರ ಸಮಾಜ, ಒಳಪಂಗಡಗಳು ನಮೂದಿಸಬೇಕಿತ್ತು ಎಂದರು.
ಕಾರ್ಯಕ್ರಮದಲ್ಲಿ ಡಿ.ಬಿ.ಎಸ್.ಗುರುಸಿದ್ದಪ್ಪ ಚಾರಿಟೀಸ್ ಟ್ರಸ್ಟ್ನಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ನಡೆಯಿತು.
ಬೆಸ್ಕಾಂ ಇಂಜಿನಿಯರ್ ಕೆ.ಎಸ್.ಎಂ.ಸ್ವಾಮಿ, ನಗರಸಭೆ ಪ್ರಭಾರ ಅಧ್ಯಕ್ಷ ಮೇಘಾಶ್ರೀ ಭೂಷಣ್, ನಿಕಟ ಪೂರ್ವ ಅಧ್ಯಕ್ಷ ಯಮುನಾ ಧರಣೀಶ್, ನಗರಸಭಾ ಸದಸ್ಯರಾದ ಸಂಗಮೇಶ್, ಶಶಿಕಿರಣ್, ಪದ್ಮ ತಿಮ್ಮೇಗೌಡ, ಅಶ್ವಿನಿ ದೇವರಾಜ, ಯೋಗೀಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಖಿಲ್ ರಾಜಣ್ಣ, ಹಾಸನ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ನವಿಲೆ ಪರಮೇಶ್, ತುಮಕೂರು ಜಿಲ್ಲಾ ವೀರಶೈವ ಸಂಘದ ಅಧ್ಯಕ್ಷ ಪರಮೇಶ್, ಜಿಲ್ಲಾ ನೌಕರ ಸಂಘದ ಅಧ್ಯಕ್ಷ ರಮೇಶ್, ಬಿಮೊ ತಾರಾಮಣಿ, ರಾಜ್ಯಾಧ್ಯಕ್ಷ ಸೋಮಶೇಖರ, ಕಾರ್ಯದರ್ಶಿ ಪ್ರಸನ್ನಕುಮಾರ್, ಮಾದಿಹಳ್ಳಿ ಪ್ರಕಾಶ್, ಜಲಾಕ್ಷಮ್ಮ, ಮಂಗಳ ಗೌರಮ್ಯ, ತಾಲ್ಲೂಕು ಸಂಘದ ಕಾರ್ಯದರ್ಶಿ ಎಸ್.ಆರ್.ಸ್ವಾಮಿ, ಖಚಾಂಚೆ ಚಿದಾನಂದ್ ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC