ತುಮಕೂರು: ಮುಂಬರುವ ಬಜೆಟ್ ಅಧಿವೇಶನದಲ್ಲಿ ನೇರ ನೇಮಕಾತಿ, ಪದೋನ್ನತಿ, ಬ್ಯಾಕ್ ಲಾಗ್, ಕೆಪಿಎಸ್ ಸಿ, ಬಿಡಿಎ ಹಾಗೂ ಸರ್ಕಾರಿ ಗುತ್ತಿಗೆ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಇಂದು ಒಳಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಗರದ ಟೌನ್ ಹಾಲ್ನಲ್ಲಿ ಸಮಾವೇಶಗೊಂಡ ಸಾವಿರಾರು ಒಳಮೀಸಲಾತಿ ಹೋರಾಟ ಸಮಿತಿಯ ಸದಸ್ಯರುಗಳು, ಬಿಜೆಎಸ್ ವೃತ್ತದಿಂದ ಅಶೋಕ ರಸ್ತೆಯ ಮೂಲಕ ಚರ್ಚ್ ಸರ್ಕಲ್, ಕೋಡಿ ಸರ್ಕಲ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತುಮಕೂರು ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಡಾ.ವೈ.ಕೆ. ಬಾಲಕೃಷ್ಣ, ಮಾದಿಗ ಸಮುದಾಯ ಕಳೆದ 35 ವರ್ಷಗಳ ನಿರಂತರ ಹೋರಾಟದ ಫಲವಾಗಿ ಸುಪ್ರೀಂಕೋರ್ಟ್ನ 7 ನ್ಯಾಯಾಧೀಶರ ಪೀಠದ ತೀರ್ಪಿನಂತೆ, ರಾಜ್ಯ ಸರ್ಕಾರ ನ್ಯಾ.ನಾಗಮೋಹನ್ ದಾಸ್ರವರ ಸಮಿತಿ ವರದಿಯನ್ನು ಆಧರಿಸಿ ಒಳಮೀಸಲಾತಿಯನ್ನು ಘೋಷಣೆ ಮಾಡಿದೆ. ನಾವು ಯಾರ ಪಾಲನ್ನು ಕೇಳುತ್ತಿಲ್ಲ, ನಮ್ಮ ಪಾಲಿನ ಹಕ್ಕನ್ನು ಎಲ್ಲಾ ರಂಗದಲ್ಲಿಯೂ ನೀಡಿ ಎಂದು ಕೇಳುತ್ತಿದ್ದೇವೆ. ಇದು ನಮ್ಮ ನ್ಯಾಯಸಮ್ಮತ ಬೇಡಿಕೆಯಾಗಿದೆ. ಮಾದಿಗರು ಮತ್ತು ಹೊಲೆಯರ ಮೇಲೆ ರಾಜ್ಯ ಸರ್ಕಾರ ಪರಸ್ಪರ ದೋಷಾರೋಪಣೆ ಮಾಡುವುದನ್ನು ಬಿಟ್ಟು, ಸುಪ್ರೀಂಕೋರ್ಟ್ನ ತೀರ್ಪಿನ ಅನ್ವಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಎಲ್ಲಾ 101 ಜಾತಿಗಳಿಗೂ ಅನ್ಯಾಯವಾಗದಂತೆ, ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಈ ಬಜೆಟ್ ಅಧಿವೇಶನದಲ್ಲಿ ಸಂಪೂರ್ಣ ಒಳಮೀಸಲಾತಿ ಜಾರಿ ಘೋಷಿಸಬೇಕು. ನಮ್ಮ ತಾಳ್ಮೆ ಪರೀಕ್ಷೆ ಮಾಡಲು ಸರ್ಕಾರ ಹೋಗಬಾರದು ಎಂಬ ಎಚ್ಚರಿಕೆಯನ್ನು ನೀಡಿದರು.
ಕರ್ನಾಟಕ ಮಾದಾರ ಮಹಾಸಭಾದ ಜಿಲ್ಲಾಧ್ಯಕ್ಷ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಮಾತನಾಡಿ, 2024ರ ಆಗಸ್ಟ್ 1ರ ಸುಪ್ರೀಂಕೋರ್ಟ್ನ ತೀರ್ಪಿನ ಪ್ರಕಾರ, ರಾಜ್ಯದಲ್ಲಿ ನ್ಯಾ. ನಾಗಮೋಹನ್ ದಾಸ್ ಸಮಿತಿ ಮಾಡಿ, ವರದಿ ಪಡೆದು, 6:6:5 ವರ್ಗೀಕರಿಸಿ ಜಾರಿಗೊಳಿಸಲು ಮುಂದಾಗಿದೆ. ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಒಳಮೀಸಲಾತಿ ನಿಗದಿಯಾಗಿರುವುದು ಜನಸಂಖ್ಯೆಯ ಜೊತೆಗೆ, ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿಂದುಳಿದಿರುವ ಆಧಾರದಲ್ಲಿ. ಆದರೆ ಕೆಲವರು ತಪ್ಪು ಮಾಹಿತಿ ನೀಡಿ, ದಶಕಗಳ ಹೋರಾಟವನ್ನು ಮಣ್ಣು ಪಾಲು ಮಾಡಲು ಹೊರಟಿದ್ದಾರೆ. ಇದಕ್ಕೆ ನಾವು ಎಂದಿಗೂ ಆಸ್ಪದ ನೀಡುವುದಿಲ್ಲ, ಇಲ್ಲಿ ಪಕ್ಷ ಮುಖ್ಯವಲ್ಲ, ಸಮುದಾಯ ಮುಖ್ಯ. ಹಾಗಾಗಿ ಯಾರ ವಿರುದ್ಧ ಹೋರಾಟಕ್ಕೂ ನಾವು ಸಿದ್ದರಿದ್ದೇವೆ ಎಂಬುದನ್ನು ಸರ್ಕಾರದ ಗಮನಕ್ಕೆ ತರಬಯಸುತ್ತೇನೆ ಎಂದರು.
ಚಿಂತಕರಾದ ಕೆ. ದೊರೈರಾಜು ಮಾತನಾಡಿ, ಸುಪ್ರೀಂಕೋರ್ಟ್ನ ಆದೇಶದ ಅನ್ವಯ ನ್ಯಾ. ನಾಗಮೋಹನ್ ದಾಸ್ ಸಮಿತಿ ರಚಿಸಿ, ಅದರ ವರದಿಯನ್ನು ಪಡೆದುಕೊಂಡು, ಪರಿಶಿಷ್ಟ ಜಾತಿಗಳನ್ನು ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆಯ ಆಧಾರದಲ್ಲಿ ಮಾಡಿದ ವರ್ಗೀಕರಣವನ್ನು ಒಪ್ಪಿಕೊಂಡಿರುವ ಸರ್ಕಾರ ಅದನ್ನು ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದೆ. ಬೊಮ್ಮಾಯಿ ಅವರ ಸರ್ಕಾರ ಹೆಚ್ಚು ಮಾಡಿದ ಮೀಸಲಾತಿ ಪ್ರಮಾಣ ಹಾಗೂ ಒಳಮೀಸಲಾತಿಯನ್ನು ಸಂವಿಧಾನದ 9ನೇ ಷೆಡ್ಯೂಲ್ಗೆ ಸೇರಿಸುವುದು, ಶಾಶ್ವತ ಆಯೋಗ ರಚನೆ ಮುಂತಾದ ವಿಚಾರಗಳನ್ನು ಸರ್ಕಾರ ಬಜೆಟ್ ಅಧಿವೇಶನದಲ್ಲಿ ಜಾರಿಗೆ ತರುವ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.
ಹೋರಾಟದಲ್ಲಿ ಕೈಜೋಡಿಸಿ: ಜಿ.ಪಂ. ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಸಿದ್ದರಾಮಯ್ಯ ಅವರ ಮೇಲಿನ ನಂಬಿಕೆಯನ್ನು ಇಡೀ ಮಾದಿಗ ಸಮುದಾಯ ಕಳೆದುಕೊಂಡಿದೆ. ಒಂದು ಸಮುದಾಯದ ಮಂತ್ರಿಗಳ ಕೈಗೊಂಬೆಯಾಗಿ ನಮಗೆ ಅನ್ಯಾಯ ಮಾಡುತ್ತಿದೆ. ನ್ಯಾ. ಸದಾಶಿವ ಆಯೋಗದ ವರದಿಯನ್ನು ವಿರೋಧಿಸಿದ ಸಮುದಾಯವೇ ನ್ಯಾ. ನಾಗಮೋಹನ್ ದಾಸ್ ಸಮಿತಿಯ ಒಳಮೀಸಲಾತಿಯ ಸಂಪೂರ್ಣ ಜಾರಿಗೆ ಅಡ್ಡಿಪಡಿಸುತ್ತಿದೆ. ಹಾಗಾಗಿ ಮಾದಿಗ ಸಮುದಾಯದ ಪ್ರತಿಯೊಬ್ಬರು ಈ ಹೋರಾಟದಲ್ಲಿ ಕೈಜೋಡಿಸಿ, ಹೋರಾಟಕ್ಕೆ ತಮ್ಮ ತನು, ಮನ, ಧನದ ಸಹಾಯದ ಮೂಲಕ ಹೋರಾಟವನ್ನು ಉಗ್ರ ಸ್ವರೂಪಕ್ಕೆ ತೆಗೆದುಕೊಂಡು ಹೋಗಲು ಸಹಕಾರ ನೀಡಬೇಕಾಗಿದೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಗಂಗಹನುಮಯ್ಯ, ಹೋರಾಟಗಾರಾದ ಡಾ. ಅರುಂಧತಿ, ಪಾವಗಡ ಶ್ರೀರಾಮ್ ಸೇರಿದಂತೆ ಹಲವರು ಮಾತನಾಡಿದರು.
ಮುಖಂಡರಾದ ವಾಲೇಚಂದ್ರಯ್ಯ, ಹನುಮಂತರಾಯಪ್ಪ, ಕೊಟ್ಟಶಂಕರ್, ರಂಗಸ್ವಾಮಯ್ಯ ಸಿದ್ದಾಪುರ, ದೊಡ್ಡೇರಿ ಕಣ್ಮಯ್ಯ, ನರಸೀಯಪ್ಪ, ಕೋಡಿಯಾಲ ಮಹದೇವ್, ಉದ್ಯಮಿ ಡಿ.ಟಿ. ವೆಂಕಟೇಶ್, ಹೊಳಕಲ್ಲು ಅಂಜನಪ್ಪ, ಸಿ. ಗಂಗರಾಜು, ಡಾ. ಲಕ್ಷ್ಮೀಕಾಂತ್, ನವೀನ್ ಪೂಜಾರಹಳ್ಳಿ, ಶಿರಾ ರಾಜಸಿಂಹ, ಕುಣಿಗಲ್ ಶಿವಶಂಕರ್ ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


