ತುಮಕೂರು: ಮಗು ಮಾತಾಡುವ ಮೊದಲು ನೋಡಿ ಕಲಿಯುತ್ತದೆ, ನೋಟದ ಮೂಲಕವೇ ತನ್ನ ಸುತ್ತಲನ್ನು ಗ್ರಹಿಸುತ್ತದೆ. ಸಮಾಜದ ಬಗ್ಗೆ ಸ್ಪಷ್ಟ ನೋಟ–ಗ್ರಹಿಕೆ ಇದ್ದಾಗ ಪರಿಣಾಮಕಾರಿ ಪತ್ರಕರ್ತ ಹುಟ್ಟುತ್ತಾನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ಮಾಧ್ಯಮ ಹಬ್ಬ “ಇಂಪ್ರೆಷನ್ –2025” ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮದ ಕುರಿತು ಚರ್ಚಿಸಲು, ಇದನ್ನು ಅಧ್ಯಯನ ಮಾಡುವ ಯುವ ಮನಸ್ಸುಗಳೊಂದಿಗೆ ಸಂವಾದ ನಡೆಸಲು, ಇಂತಹ ಮಾಧ್ಯಮ ಹಬ್ಬದಲ್ಲಿ ಭಾಗವಹಿಸುತ್ತಿರುವುದು ನನಗೆ ಹೆಮ್ಮೆ ಮತ್ತು ಸಂತೋಷದ ವಿಚಾರ. ಹೊಸ ಪತ್ರಕರ್ತರಲ್ಲಿ ಅಧ್ಯಯನಶೀಲತೆ ಮತ್ತು ಗ್ರಹಿಕೆಯ ಕೊರತೆ ಇರುವುದನ್ನು ನಾನು ಗಮನಿಸಿದ್ದೇನೆ. ಪತ್ರಕರ್ತರಾಗುವವರಿಗೆ ಮಗುವಿನ ಮನಸ್ಸು ಮುಖ್ಯ. ಪ್ರತಿಯೊಂದು ಮಗುವೂ ಮಾತಾಡುವ ಮೊದಲು ನೋಟದ ಮೂಲಕವೇ ತಿಳಿಯುತ್ತದೆ, ಅರಿಯುತ್ತದೆ, ಗ್ರಹಿಸುತ್ತದೆ. ಹೀಗಾಗಿ ನೋಟದ ಮೂಲಕ ಕಲಿಯುವುದು ಸಹಜವಾದ, ನೈಸರ್ಗಿಕವಾದ ಪ್ರಕ್ರಿಯೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ ಪದೇ ಕುವೆಂಪು ಅವರ ಒಂದು ಮಾತನ್ನು ನೆನಪಿಸಿಕೊಳ್ಳುತ್ತಾರೆ. “ಮಗು ಹುಟ್ಟುವಾಗ ವಿಶ್ವ ಮಾನವನಾಗಿ ಹುಟ್ಟುತ್ತದೆ. ಬೆಳೆಯುತ್ತಾ ಅಲ್ಪ ಮಾನವನನ್ನಾಗಿ ಮಾಡಲಾಗುತ್ತದೆ”. ಪತ್ರಕರ್ತರಾಗುವವರು ಪೂರ್ವಾಗ್ರಹ ಮುಕ್ತ ಮಗುವಿನ ಮನಸ್ಸಿನಿಂದ ಸಾಮಾಜಿಕ ವ್ಯವಸ್ಥೆಯನ್ನು, ಸಾಮಾಜಿಕ ತಾರತಮ್ಯಗಳನ್ನು ಇರುವುದನ್ನು ಇರುವ ಹಾಗೆ ಗಮನಿಸಬೇಕು. ಹೀಗಾದಾಗ ಮಾತ್ರ ಸಾಮಾಜಿಕ ಸಮಸ್ಯೆಗಳು ಮತ್ತು ಈ ಸಮಸ್ಯೆಗಳಿಗೆ ಕಾರಣವಾದ ಸಂಗತಿಗಳ ಬಗ್ಗೆ ಸ್ಪಷ್ಟ ಗ್ರಹಿಕೆ ಬರುತ್ತದೆ. ಈ ಸ್ಪಷ್ಟತೆಯೇ ಪರಿಣಾಮಕಾರಿ ಪತ್ರಕರ್ತನನ್ನು ರೂಪಿಸುತ್ತದೆ. ಇದರಿಂದಾಗಿ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಹೆಚ್ಚು ಅನುಕೂಲ ಮತ್ತು ಮಹತ್ವ ಸಿಗುತ್ತದೆ ಎಂದರು.
ಇತ್ತೀಚಿನ ದಶಕಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನದ ಕಾರಣಕ್ಕೆ ಕ್ರಾಂತಿಕಾರಿ ಬದಲಾವಣೆಗಳು ಸಂಭವಿಸುತ್ತಿವೆ. ಮುದ್ರಣ ಮಾಧ್ಯಮದಿಂದ ಡಿಜಿಟಲ್ ಮಾಧ್ಯಮವನ್ನೂ ದಾಟಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಡೆಗೆ ಧಾವಿಸಿ ಬಂದಿದ್ದೇವೆ. ಈ ಬದಲಾವಣೆಯು ಮಾಹಿತಿ ಹರಿವಿನ ವೇಗವನ್ನು ಹೆಚ್ಚಿಸಿದೆ, ಆದರೆ ಅದೇ ವೇಳೆ ಸುಳ್ಳು ಸುದ್ದಿ, Clickbait, ದ್ವೇಷ ಭಾಷೆ ಇತ್ಯಾದಿಗಳ ಹೊಸ ಹೊಸ ಸವಾಲುಗಳನ್ನೂ, ಅಪಾಯಗಳನ್ನೂ ಮನುಷ್ಯ ಜಗತ್ತಿನ ಮುಂದಿಟ್ಟಿದೆ. ಇಂತಹ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಮಾಧ್ಯಮ ಶಿಕ್ಷಣವು ನೈತಿಕತೆ ಮತ್ತು ಜವಾಬ್ದಾರಿಯನ್ನೂ ಜೊತೆಗೆ ಕಲಿಸಬೇಕಾಗಿದೆ. ಮೊದಲು ಸತ್ಯ, ನಂತರ ವೇಗ ಎಂಬ ನುಡಿಯು ಈಗ ಇನ್ನೂ ಹೆಚ್ಚು ಪ್ರಸ್ತುತವಾಗಿದೆ. Chat GPT ಇರಬಹುದು ಅಥವಾ AI ಯುಗದಲ್ಲಿ ನಿಮ್ಮತನವನ್ನು ಕಳೆದುಕೊಳ್ಳದೆ ಕಾರ್ಯನಿರ್ವಹಿಸಿದರೆ, ಕೃತಕತೆ ಇಲ್ಲದ ಯಶಸ್ಸು ಸಾಧ್ಯ ಎಂದವರು ಅಭಿಪ್ರಾಯಪಟ್ಟರು.
ತುಮಕೂರು ವಿವಿ ಕುಲಪತಿಗಳಾದ ಪ್ರೊ.ಎಂ.ವೆಂಕಟೇಶ್ವರಲು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶ ಖಾನಂ, ಕಾರ್ಯದರ್ಶಿ ಸಹನಾ ಎಂ., ಪ್ರಜಾ ಪ್ರಗತಿ ಸಂಪಾದಕರಾದ ನಾಗಣ್ಣ, ಸಿಂಡಿಕೇಟ್ ಸದಸ್ಯರಾದ ಮನೋಜ್, ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ.ಸತೀಶ್ ಗೌಡ, ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ದಾಕ್ಷಾಯಿಣಿ ಅವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW