ತುಮಕೂರು: ಜ್ಯುವೆಲರಿ ಶಾಪ್ ಗೆ ನುಗ್ಗಿ ಕಳವು ಮಾಡಿದ್ದ ಆರೋಪಿಗಳನ್ನು ಕೃತ್ಯ ನಡೆದ 12 ಗಂಟೆಯೊಳಗೆ ಸಿರಾ ಉಪವಿಭಾಗ ವ್ಯಾಪ್ತಿಯ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಕೆ.ವಿ. ಅಶೋಕ್ ಅವರು ಭಾನುವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಸಿರಾ ತಾಲ್ಲೂಕು ಕಳ್ಳಂಬೆಳ್ಳ ಠಾಣಾ ಸರಹದ್ದಿನ ಬೆಂಚೆಗೇಟ್ನಲ್ಲಿರುವ ಶ್ರೀ ಜಗದಾಂಭ ಜ್ಯುವೆಲರ್ ಶಾಪ್ಗೆ ರಾಜಸ್ಥಾನ ಮೂಲದ ನಾಲ್ವರು ಸುಲಿಗೆಕೋರರು ನುಗ್ಗಿ ವ್ಯಾಪಾರದಲ್ಲಿ ನಿರತರಾಗಿದ್ದ ಅಜ್ಜು ನಾತಿದೇವಿ, ಮಮ್ಮುಗೆ ದಿನೇಶ್ ಎಂಬುವರ ಕಣ್ಣಿಗೆ ಕಾರದಪುಡಿ ಎರಚಿ ಶಟರ್ ಕ್ಲೋಸ್ ಮಾಡಿ 20 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಗೋಲ್ಡ್ ಕವರಿಂಗ್ ಆಭರಣ ದೋಚಿ ಜೀಪ್ನಲ್ಲಿ ಪರಾರಿಯಾಗಿದ್ದರು. ಅಂಗಡಿ ಮಾಲೀಕರ ದೂರು ಹಾಗೂ ಸ್ಥಳೀಯರ ಮಾಹಿತಿ ಆಧರಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ಕಳ್ಳಂಬೆಳ್ಳ ಪಿಎಸ್ ಐ ಭೈರೇಗೌಡ, ಸಿರಾ ಗ್ರಾಮಾಂತರ ಸಿಪಿಐ ಡಿ.ಜಿ. ಶ್ರೀನಿವಾಸ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬೆನ್ನಟ್ಟಿದ್ದರು. ಸಿರಾ ನಗರದಲ್ಲಿ ಒಂದು ಸಾರ್ವಜನಿಕ ಬಂದೋಬಸ್ತ್ ಉಸ್ತುವಾರಿಯಲ್ಲಿದ್ದ ಎಎಸ್ಪಿ ಗೋಪಾಲ್, ಡಿವೈಎಸ್ಪಿ ಬಿ.ಕೆ. ಶೇಖರ್ ಅವರು ಪ್ರೊಬೆಷನರಿ ಐಪಿಎಸ್ ಅಧಿಕಾರಿ ರಾನುಗುಪ್ತ ಮಾರ್ಗದರ್ಶನದಲ್ಲಿ ಜೊತೆಗೂಡಿದ್ದು ಎಲ್ಲಾ ಪೊಲೀಸ್ ಠಾಣೆಗೂ ವಿಷಯ ಮುಟ್ಟಿಸಿ ನಾಕಾಬಂಧಿ ಹಾಕಿದರು. ಈ ಹಂತದಲ್ಲಿ ಸುಲಿಗೆಕೋರರು ತಾವರೆಕೆರೆ ಬಲೆ ಹಾಕಿದ್ದ ಬ್ಯಾರಿಕೇಡ್ ನೋಡಿ ವಾಪಸ್ ತಿರುಗಲು ಮುಂದಾದ ವೇಳೆ ಎಎಸ್ಪಿ ಅವರ ವಾಹನಕ್ಕೂ 5 ಅಡಿ ಅಂತರದಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸುವ ಸನ್ನಿವೇಶ ಸೃಷ್ಟಿಯಾಯಿತು. ಆದರೆ ಅದೃಷ್ಟವಶಾತ್ ಯಾವುದೇ ಘಟನೆ ನಡೆಯಲಿಲ್ಲ. ಸುಲಿಗೆಕೋರರನ್ನು ಬೆನ್ನುತ್ತುವ ಜೊತೆಗೆ ಮಧ್ಯೆ ಬೀಟ್ ಸಿಬ್ಬಂದಿ, ಗ್ರಾಮಸ್ಥರ ಸಹಕಾರದೊಂದಿಗೆ ಭುವನಹಳ್ಳಿ, ಸೋರೆಕುಂಟೆ, ಮೇಕೆಹಳ್ಳಿ, ಕಂಚಪ್ಪನಹಳ್ಳಿ, ತಿತ್ತಾಗಾನಹಳ್ಳಿ, ನಿಂಬೆಮರದಹಳ್ಳಿ ರಸ್ತೆಗಳನ್ನು ಬ್ಲಾಕ್ ಮಾಡಿದ ಪರಿಣಾಮ ದಿಕ್ಕುತೋಚದಂತಾದ ಆರೋಪಿಗಳು ಮುಡಿಗೇರೆ ಕಾವಲನ ಮೇಕೆಹಳ್ಳಿ ಅರಣ್ಯ ಪ್ರದೇಶಕ್ಕೆ ನುಗ್ಗಿದರು.
ಅರಣ್ಯಕ್ಕೆ ತೆರಳಿದ ಕ್ಷಿಪ್ರ ಕಾರ್ಯಾಚರಣೆ ತಂಡದ ಪೊಲೀಸರು ಭಾನುವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆವರೆಗೆ ಕೂಂಬಿಂಗ್ ನಡೆಸಿ ವಾಹನ, ಮೊಬೈಲ್ ಟ್ರ್ಯಾಕಿಂಗ್, ಡ್ರೋನ್ ಸಾಧನದ ಮೂಲಕ ರಾಜಸ್ಥಾನ ಮೂಲದ ನಾಲ್ವರು ಆರೋಪಿಗಳಾದ ಅರವಿಂದ್ ಕುಮಾರ್ (28), ಡುಂಗರ್ಸಿಂಗ್ (24), ಮಹೇಂದರ್ಸಿಂಗ್ (32) ಹಾಗೂ ಮಧುಸಿಂಗ್ (28) ಅವರನ್ನು ಸೆರೆಹಿಡಿದು ಬಂಧಿತರಿಂದ 14 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ, 3.25 ಲಕ್ಷ ಮೌಲ್ಯದ ಬೆಳ್ಳಿ ಪರಿಕರಗಳು, 2.75 ಲಕ್ಷ ಮೌಲ್ಯದ ಚಿನ್ನಲೇಪಿತ ಬೆಳ್ಳಿ ಆಭರಣಗಳು, ಕೃತ್ಯಕ್ಕೆ ಬಳಸಿದ್ದ ಆರ್ಜೆ 16 ಯುಯು 7398 ಸಂಖ್ಯೆಯ ಬುಲೆರೋ ವಾಹನ, 1 ಒಪ್ಪೋ, 1 ಐಫೋನ್ ಕಂಪನಿಯ ಮೊಬೈಲ್ ಸೇರಿ ಒಟ್ಟು 26 ಲಕ್ಷ ಮೌಲ್ಯದ ಆಭರಣ, ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಸ್ಪಿ ವಿವರಿಸಿದರು.
ಆರೋಪಿತರ ವಿರುದ್ಧ ಬೇರೆಡೆ ದೂರುಗಳು ದಾಖಲಾಗಿದೆಯೇ ಎಂಬುದರ ತನಿಖೆ ನಡೆಸಲಾಗುತ್ತಿದೆ ಎಂದ ಎಸ್ಪಿ ಕೆ.ವಿ.ಅಶೋಕ್ ಅವರು ಸುಲಿಗೆಕೋರರು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವವರಾಗಿದ್ದು, ಶುಕ್ರವಾರವೇ ಜಿಲ್ಲೆಗೆ ಆಗಮಿಸಿ ಶನಿವಾರ ವಾಚ್ ಮಾಡಿ ಭಾನುವಾರ ಮಧ್ಯಾಹ್ನ ಕೃತ್ಯವೆಸಗಿದ್ದಾರೆ. ಆದರೆ ಕೃತ್ಯವೆಸಗಿದ 12 ತಾಸಿನೊಳಗೆ ಪೊಲೀಸರು ಯಶಸ್ವಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದು, ಕಾರ್ಯಾಚರಣೆ ತೊಡಗಿದ ಪೊಲೀಸ್ ಅಧಿಕಾರಿಗಳಿಗೆ ಸಿರಾ ಠಾಣೆ ಪಿ.ಐ.ಪ್ರವೀಣ್ಕುಮಾರ್, ರೇಣುಕಾಯಾದವ್ ಗುಬ್ಬಿ ವೃತ್ತದ ರಾಘವೇಂದ್ರ ಚೆಳೂರು ಠಾಣೆಯ ಮಾಳಪ್ಪ, ಎಎಸ್ ಐಗಳಾದ ನರಸಿಂಹಯ್ಯ, ನರಸಿಂಹಮೂರ್ತಿ, ಹುಚ್ಚೀರಣ್ಣ ಹಾಗೂ ಪೊಲೀಸರು ಸಾಥ್ ಕೊಟ್ಟಿದ್ದು, ಸುಲಿಗೆಕೋರರನ್ನು ಪತ್ತೆಹಚ್ಚಿದ ಪೊಲೀಸ್ ತಂಡದ ಕಾರ್ಯ ಶ್ಲಾಘನೀಯ. ಕಾರ್ಯಾಚರಣೆ ಬಗ್ಗೆ ಕೇಂದ್ರ ವಲಯ ಐಜಿಪಿ ಸಹ ಅಭಿನಂದಿಸಿರುವುದಾಗಿ ಎಸ್ಪಿ ತಿಳಿಸಿದರು. ಆರೋಪಿಗಳ ಪತ್ತೆ ಹಚ್ಚಿದ ಪೊಲೀಸರಿಗೆ ಪ್ರಶಂಸಾ ಪತ್ರವನ್ನು ವಿತರಿಸಲಾಯಿತು.
ಸೂಕ್ತ ಭದ್ರತೆಯೊಂದಿಗೆ ವ್ಯವಹರಿಸಿ: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಗನಕ್ಕೇರುತ್ತಿರುವುದರಿಂದ ಚಿನ್ನ ಬೆಳ್ಳಿ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಎಚ್ಚರಿಕೆಯಿಂದ ಅಗತ್ಯ ಭದ್ರತಾ ವ್ಯವಸ್ಥೆ ಮಾಡಿಕೊಂಡು ವ್ಯಾಪಾರ ಮಾಡುವಂತೆ ಇದೇ ವೇಳೆ ಎಸ್ಪಿ ಸಲಹೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಎಎಸ್ಪಿಗಳಾದ ಪುರುಷೋತ್ತಮ್, ಗೋಪಾಲ್, ಸಿರಾ ಉಪವಿಭಾಗ ಡಿವೈಎಸ್ಪಿ ಶಬೀರ್, ಪ್ರೊಬೆಷನರಿ ಐಪಿಎಸ್ ರಾನಿಗಪ್ಪ ಹಾಗೂ ಸಿಪಿಐ ಶ್ರೀನಿವಾಸ್ ಸೇರಿ ಪತ್ತೆ ತಂಡದ ಪೊಲೀಸರು ಪಾಲ್ಗೊಂಡಿದ್ದರು.
ಸುದ್ದಿಗೋಷ್ಠಿಯಲ್ಲಿ ಬೆಂಚೆಗೇಟ್ ಜ್ಯುವೆಲರಿ ಶಾಪ್ ಸುಲಿಗೆ, ಆರೋಪಿಗಳ ಬಂಧನ ಕುರಿತು ಎಸ್ಪಿ ಕೆ.ವಿ. ಅಶೋಕ್ ಮಾಹಿತಿ ನೀಡಿದರು. ಎಎಸ್ ಪಿಗಳು ಹಾಗೂ ಪತ್ತೆ ತಂಡದ ಪೊಲೀಸರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


