- ಗಣೇಶ್ ಕೆ.ಪಿ., ಪುತ್ತೂರು
ತುಮಕೂರು ತಾಲೂಕು ಮಲ್ಲೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಬಾಣಂತಿ, ಮಗುವನ್ನ ಊರ ಹೊರಗಿಟ್ಟಿದ್ದ ಘಟನೆ ಸಾಕಷ್ಟು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಧಿಕಾರಿಗಳ ಗಮನಕ್ಕೂ ಬಂದಿತ್ತು. ಇಷ್ಟಾಗಿದ್ದರೂ ತಾಯಿ ಮತ್ತು ಮಗುವಿನ ರಕ್ಷಣೆಗೆ ಮುಂದಾಗದೇ ಇರುವುದು ಜಿಲ್ಲಾಡಳಿತ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಬೇಜವಾಬ್ದಾರಿಯಾಗಿದೆ. ಇದೀಗ ಮಗು ಸಾವನ್ನಪ್ಪಿದ್ದು, ಇದನ್ನು ಸಾವು ಎನ್ನಬೇಕೋ, ಕೊಲೆ ಎನ್ನಬೇಕೋ? ಎನ್ನುವ ಪ್ರಶ್ನೆಗೆ ಜಿಲ್ಲಾಡಳಿತ ಉತ್ತರಿಸಬೇಕಿದೆ.
ಮಹಿಳೆಯರನ್ನು ನಿಕೃಷ್ಟವಾಗಿ ಕಾಣುವ ಆಚರಣೆಗಳು ಈ ಸಮುದಾಯದಲ್ಲಿದೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಸರಿಯಾದ ಕಾನೂನು ಕ್ರಮಕೈಗೊಳ್ಳದೇ ಇರುವುದರಿಂದ ಇಂದಿಗೂ ಈ ಸಾಮಾಜಿಕ ಪಿಡುಗು ಕಾಡುಗೊಲ್ಲ ಸಮುದಾಯ ಮಹಿಳೆಯರನ್ನು ಪ್ರಾಣಿಗಿಂತಲೂ ಹೀನವಾಗಿ ಕಾಣುವಂತಹ ಸಂದರ್ಭವನ್ನು ಸೃಷ್ಟಿಸಿದೆ.
ಮಹಿಳೆ ಹಾಗೂ ನವಜಾತ ಶಿಶುವನ್ನು ಹೊರಗೆ ಇಟ್ಟಿರುವ ವಿಚಾರದ ಬಗ್ಗೆ “ನಮ್ಮತುಮಕೂರು” ಮಾಧ್ಯಮ ಸವಿವರವಾದ ವರದಿಯನ್ನು ಪ್ರಕಟಿಸಿತ್ತು. ಈ ವರದಿ ಇಡೀ ರಾಜ್ಯದಲ್ಲೇ ಸಂಚಲನವನ್ನು ಸೃಷ್ಟಿಸಿತ್ತು. ರಾಜ್ಯದಲ್ಲಿ ವ್ಯಾಪಕವಾಗಿ ಈ ಘಟನೆ ಟೀಕೆಗೆ ಗುರಿಯಾಗಿತ್ತು. ಇಷ್ಟೆಲ್ಲ ನಡೆದರೂ ಆ ಮಹಿಳೆ ಹಾಗೂ ಮಗುವಿನ ರಕ್ಷಣೆಗೆ ತುಮಕೂರು ಜಿಲ್ಲಾಡಳಿತ ಮುಂದಾಗದೇ ಇರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.
ನವಜಾತ ಶಿಶು ಹಾಗೂ ಬಾಣಂತಿ ಮಹಿಳೆ ತನ್ನ ಗಂಡನ ಮನೆಯಲ್ಲಿ ಬೆಚ್ಚಗಿನ ಮನೆಯೊಳಗೆ ಆರೈಕೆ ಪಡೆಯಬೇಕಿತ್ತು. ಆದರೆ ಗ್ರಾಮಸ್ಥರು ಇಲ್ಲಿನ ದೇವರಿಗೆ ಸೂತಕದವರು ಒಳಗೆ ಬಂದರೆ ಆಗುವುದಿಲ್ಲ ಎಂಬ ಕಾರಣ ನೀಡಿ, ಗುಡಿಸಲೊಂದರಲ್ಲಿ ಮಹಿಳೆ ಮತ್ತು ಶಿಶುವನ್ನು ಪ್ರಾಣಿಗಿಂತಲೂ ಹೀನಾಯವಾಗಿ ಕೂಡಿಟ್ಟ ಸ್ಥಿತಿಯಲ್ಲಿಟ್ಟು ಆ ಶಿಶುವಿನ ಸಾವಿಗೆ ಕಾರಣವಾಗಿದ್ದಾರೆ. ಇಷ್ಟಾದರೂ ಘಟನೆಗೆ ಕಾರಣವಾದವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಬಾಣಂತಿ ಹಾಗೂ ಶಿಶುವನ್ನು ಊರ ಹೊರಗೆ ಇಟ್ಟು ಶಿಶುವಿನ ಮರಣಕ್ಕೆ ಕಾರಣವಾಗಿರುವುದು ಕೊಲೆಗೆ ಸಮಾನವಾದ ಕೃತ್ಯವಾಗಿದೆ. ಈ ಘಟನೆಗೆ ಕಾರಣರಾದವರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಕೊಲೆ ಹಾಗೂ ಮಹಿಳಾ ದೌರ್ಜನ್ಯದಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ತವರು ಜಿಲ್ಲೆಯಲ್ಲೇ ಇಂತಹದ್ದೊಂದು ಘಟನೆಯಾಗಿದೆ. ಬಾಣಂತಿ ಹಾಗೂ ನವಜಾತ ಶಿಶು ಅಸಹಾಯಕವಾಗಿದ್ದಾರೆ ಎನ್ನುವುದು ರಾಜ್ಯಾದ್ಯಂತ ಸುದ್ದಿಯಾಗಿದ್ದರೂ ಸಚಿವರಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ತಿಳಿದಿಲ್ಲವೇ? ಇನ್ನಾದರೂ ಈ ಶಿಶುವಿನ ಸಾವಿಗೆ ಕಾರಣವಾದವರ ಮೇಲೆ ಕೇಸು ದಾಖಲಿಸಿ, ಮುಂದೆ ಇಂತಹ ಘಟನೆಯಾಗದಂತೆ ಹಾಗೂ ಕಾಡುಗೊಲ್ಲ ಸಮುದಾಯದ ಮಹಿಳೆಯರಿಗೆ ಸಾಮಾಜಿಕ ನ್ಯಾಯ ಒದಗಿಸಲು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಮುಂದಾಗುತ್ತದೆಯೇ? ತುಮಕೂರು ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ.
10 ದಿನಗಳ ಹೆಣ್ಣು ಮಗು ದೊಡ್ಡವರ ಅಜ್ಞಾನಕ್ಕೆ ಬಲಿಯಾಗಿದೆ. ಮಕ್ಕಳಲ್ಲಿ ದೇವರನ್ನು ಕಾಣುವ ಬಸವಣ್ಣ ನಾಡಿನಲ್ಲಿ ಇಂತಹ ಅನಿಷ್ಠ ಸಂಪ್ರದಾಯ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಬಾಣಂತಿ ಮಹಿಳೆ ಊರಿನ ಒಳಗೆ ಬಂದ್ರೆ ದೇವರಿಗೆ ಆಗೋದಿಲ್ಲ ಎನ್ನುವುದಾಗಿದ್ದರೆ, ದೇವರನ್ನು ಊರಿನ ಹೊರಗಿಟ್ಟು ಪೂಜೆ ಮಾಡಿ, ಬಾಣಂತಿಯರನ್ನು ಊರಿನೊಳಗೆ ಕರೆದುಕೊಂಡು ಬಂದು ಅವರ ರಕ್ಷಣೆ ಮಾಡಬೇಕಿರುವುದು ಜಿಲ್ಲಾಡಳಿತ ಆಗಿದೆ. ಇನ್ನಾದರೂ ಸರ್ಕಾರ ಈ ಬಗ್ಗೆ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/F93PYUrewdsCfgROQBejv5
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ: https://www.youtube.com/channel/UCtrQuDOToxHu8dzMaHjoYXA