ಬಾಗಲಕೋಟೆ: ಒಂದು ಇಲಾಖೆಯಲ್ಲಿನ ತಪ್ಪಿಗೆ ಇಡೀ ಸರ್ಕಾರವನ್ನೇ ದೂಷಿಸುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನವನಗರದಲ್ಲಿ ನಿರ್ಮಿಸಿರುವ ನೂತನ ಸಮುದಾಯ ಭವನ “ಧಾತ್ರಿ” ಮಂಗಲ ಭವನ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪ, ಕಾಂಗ್ರೆಸ್ ನಾಯಕರ ಬಹಿರಂಗ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು.
ಇಡೀ ವಸತಿ ಇಲಾಖೆ ಹಾಗೂ ಸರ್ಕಾರವನ್ನೇ ದೂಷಣೆ ಮಾಡುವ ಬದಲು, ಇಲಾಖೆಯ ಯಾವ ವಿಭಾಗದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದರೆ ನಾವು ಕ್ರಮ ಕೈಗೊಳ್ಳಬಹುದು. ನೀವು ಪೊಲೀಸ್ ಇಲಾಖೆಗೆ ದೂರು ಕೊಟ್ಟರೂ ಎಫ್ ಐಆರ್ ಮಾಡಿ ನಾವು ತನಿಖೆ ಮಾಡುವುದಾಗಿ ಹೇಳಿದ್ದೇನೆ ಎಂದರು.
ರಾಜು ಕಾಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದಿರುವ ಬಗ್ಗೆ ಪ್ರತಿಕ್ರಿಯಿಸಿ, “ನಾವು ಅದನ್ನು ಪರಿಶೀಲಿಸುತ್ತೇವೆ. ಯಾವ ಸಂದರ್ಭದಲ್ಲಿ 13 ಕೋಟಿ ರೂ ಕಾಮಗಾರಿ ಮಂಜೂರಾಗಿಲ್ಲ ಅಂತ ಹೇಳಿದ್ದಾರೆ. ಅದನ್ನು ಪರಿಶೀಲನೆ ಮಾಡಿ, ಆದಷ್ಟೂ ಬೇಗ ಸರಿ ಮಾಡಿಕೊಡುತ್ತೇವೆ ಎಂದರು.
ಗಣಿ ಹಗರಣದ ಬಗ್ಗೆ ಸಚಿವ ಎಚ್.ಕೆ.ಪಾಟೀಲ್ ಸಿಎಂಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿ, ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಆಗಿದೆ ಅಂತಾ ಆ ಪತ್ರದಲ್ಲಿ ಬರೆದಿಲ್ಲ. ಆ ಪತ್ರದ ಕಾಪಿ ನನ್ನ ಹತ್ರ ಇದೆ. ರಾಜ್ಯದಲ್ಲಿ ನಡೆದಿದ್ದ 1.50 ಲಕ್ಷ ಕೋಟಿ ರೂ. ಗಣಿ ಹಗರಣ ಬಗ್ಗೆ ಅದರಲ್ಲಿ ಬರೆದಿದೆ. ಆ ಹಗರಣದ ಹಣದಲ್ಲಿ ಅನೇಕ ಪ್ರಾಪರ್ಟಿಗಳನ್ನು ಮಾಡಿದ್ದಾರೆ. ಅನೇಕ ರೀತಿಯಲ್ಲಿ ಉಪಯೋಗ ಮಾಡಿಕೊಂಡಿದ್ದಾರೆ. ಅವುಗಳನ್ನು ಮುಟ್ಟುಗೋಲು ಹಾಕಬೇಕು ಎಂದು ಪತ್ರ ಬರೆದು ಸಲಹೆ ಕೊಟ್ಟಿದ್ದಾರೆ. ಅದನ್ನು ನಾವು ಸಂಪುಟದಲ್ಲಿ ಚರ್ಚೆ ಮಾಡಿ, ಸಿಎಂ ಅಧ್ಯಕ್ಷತೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW