- ಡಾ.ಜಿ.ಪರಮೇಶ್ವರನ್ನ ಕಾಂಗ್ರೆಸ್ ಪಕ್ಷದ ವೈರಿಗಳೇ ಸೋಲಿಸ್ತಾರೆ: ಸಿಎಂ ಬೊಮ್ಮಾಯಿ
ಕೊರಟಗೆರೆ : ಡಾ.ಜಿ.ಪರಮೇಶ್ವರನ್ನ ಕಾಂಗ್ರೆಸ್ ಪಕ್ಷದವರೇ ವೈರಿಗಳಾಗಿ ಸೋಲಿಸ್ತಾರೇ.. ಅದು ಸ್ವತಃ ಶಾಸಕ ಡಾ.ಜಿ.ಪರಮೇಶ್ವರ್ ಅವರಿಗೂ ಕಟುಸತ್ಯ ಗೊತ್ತಾಗಿದೆ.. ಕೊರಟಗೆರೆ ಕ್ಷೇತ್ರದಲ್ಲಿ 2023ಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿಯೇ ಗೆಲ್ತಾರೇ.. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ 130ಸೀಟು ಬರುವುದು ಗ್ಯಾರಂಟಿ ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಭಾರತೀಯ ಜನತಾ ಪಾರ್ಟಿ ಕೊರಟಗೆರೆ ಮಂಡಲದಿಂದ ಬುಧವಾರ ಏರ್ಪಡಿಸಲಾಗಿದ್ದ ಜನಸಂಕಲ್ಪ ಯಾತ್ರೆಯ ಸಾರ್ಥಕ ಸೇವೆ-ಯುವ ಸಬಲೀಕರಣ ವೇದಿಕೆಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದೇಶದ 20 ರಾಜ್ಯದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಅಧಿಕಾರದಲ್ಲಿದೆ. ಕಾಂಗ್ರೆಸ್ ಪಕ್ಷವು ಕೇವಲ 2 ರಾಜ್ಯದಲ್ಲಿ ಅಧಿಕಾರದಲ್ಲಿದೆ. 2023ಕ್ಕೆ ಅದು ಕಳೆದುಕೊಂಡು ಕಾಂಗ್ರೆಸ್ ಮುಕ್ತ ರಾಷ್ಟ್ರ ಆಗಲಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸುನಾಮಿ ಎದ್ದು ನಿಂತಿದೆ. ಕಾಂಗ್ರೆಸ್ ಪಕ್ಷವು ಈಗಾಗಲೇ ಕೊಚ್ಚಿಹೋಗಿ ರಾಜಕೀಯ ಅಸ್ತಿತ್ವ ಕಳೆದುಕೊಂಡಿದೆ. 2023ಕ್ಕೆ ಜನಸಂಕಲ್ಪ ಯಾತ್ರೆಯು ವಿಜಯ ಸಂಕಲ್ಪ ಯಾತ್ರೆ ಆಗುವ ಭರವಸೆ ನನಗಿದೆ ಎಂದು ಹೇಳಿದರು.
ಕರ್ನಾಟಕ ಸರಕಾರದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಭಾರತ ದೇಶದಲ್ಲಿ ರಾಹುಲ್ ಗಾಂಧಿಯ ಭಾರತ ಜೋಡೋ ನಾಟಕ ನಡೇಯೊಲ್ಲ. ದಲಿತರ ಮತಕ್ಕಾಗಿ ಹತ್ತಾರು ರೀತಿಯ ಡ್ರಾಮಗಳು ಚುನಾವಣೆ ವೇಳೆ ಪ್ರಾರಂಭ ಆಗಿವೆ. 50ವರ್ಷದಿಂದ ಕಾಂಗ್ರೆಸ್ ಪಕ್ಷ ಮಾಡದಿರುವ ಮೀಸಲಾತಿ ಹೆಚ್ಚಳದ ಕೆಲಸವನ್ನು ನಮ್ಮ ಸಿಎಂ ಮಾಡಿದ್ದಾರೆ. ನರೇಂದ್ರ ಮೋದಿಯ ಅಲೆಗೆ ಕಾಂಗ್ರೆಸ್ ಪಕ್ಷವು ಮೂಲೆಗುಂಪಾಗಿದೆ. 2023ಕ್ಕೆ ಕಾಂಗ್ರೆಸ್ ಮುಕ್ತ ಮೋದಿಯ ಕನಸು ನನಸಾಗಲಿದೆ. ಕೊರಟಗೆರೆ ಕ್ಷೇತ್ರದ ಬಿಜೆಪಿ ಪಕ್ಷದ ಧ್ವಜ ಹಾರಬೇಕಿದೆ ಎಂದು ತಿಳಿಸಿದರು.
ಗೃಹಸಚಿವ ಅರಗ ಜ್ಞಾನೇಂದ್ರ ಮಾತನಾಡಿ, 75 ವರ್ಷದಿಂದ ಕಾಂಗ್ರೆಸ್ ಪಕ್ಷವು ದಲಿತರನ್ನು ಭಿಕ್ಷುಕರನ್ನಾಗಿ ಮಾಡಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸತ್ತಾಗ ದೆಹಲಿಯಲ್ಲಿ 1 ಅಡಿ ಜಾಗವನ್ನು ನೀಡದೇ ಅವಮಾನ ಮಾಡಿದೆ. ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ನೀಡುವ 500 ರೂ. ನಮಗೇ ಬೇಡ. ಕೇಂದ್ರದಿಂದ 6 ಸಾವಿರ, ರಾಜ್ಯದಿಂದ 4 ಸಾವಿರ ಸೇರಿ ಪ್ರತಿವರ್ಷ 10 ಸಾವಿರ ರೈತರ ಖಾತೆಗಳಿಗೆ ಜಮಾವಾಗುತ್ತಿದೆ. ಬಿಜೆಪಿಯೇ ಗೆಲ್ಲದಿರುವ ಕೊರಟಗೆರೆ ಕ್ಷೇತ್ರದಲ್ಲಿ ಜನಸಾಗರವೇ ತುಂಬಿದೆ. 2023ಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲ್ಲುವುದು ಖಚಿತವಾಗಿದೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಂಸದ ಬಸವರಾಜು, ಎಂಎಲ್ ಸಿ ರಮೇಶ್ಕುಮಾರ್, ಚಿದಾನಂದಗೌಡ, ಶಿರಾ ಶಾಸಕ ರಾಜೇಶ್ ಗೌಡ, ಮಾಜಿ ಎಂಎಲ್ ಸಿ ಹುಲಿನಾಯ್ಕರ್, ಮಾಜಿ ಸಂಸದ ಮುದ್ದಹನುಮೇಗೌಡ, ದಾವಣಗೆರೆ ಉಸ್ತುವಾರಿ ನವೀನ್, ರೈತಮೋರ್ಚ ಕಾರ್ಯದರ್ಶಿ ಶಿವಪ್ರಸಾದ್, ಕೊರಟಗೆರೆ ಬಿಜೆಪಿ ಪಕ್ಷದ ಆಕಾಂಕ್ಷಿಗಳಾದ ಬಿ.ಹೆಚ್.ಅನಿಲ್ಕುಮಾರ್, ಗಂಗಹನುಮಯ್ಯ, ವೈ.ಹೆಚ್.ಹುಚ್ಚಯ್ಯ, ಡಾ.ಲಕ್ಷ್ಮೀಕಾಂತ, ಮುನಿಯಪ್ಪ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದಲ್ಲಿ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕರವಿ, ಪ್ರಧಾನ ಕಾರ್ಯದರ್ಶಿ ಸ್ವಾಮಿ, ಮಧುಗಿರಿ ಜಿಲ್ಲಾಧ್ಯಕ್ಷ ಟಿ.ಕೆ.ಮಂಜುನಾಥ, ಪ್ರಭಾರಿ ವಿಕಾಸ್ಪುತ್ತೂರು, ಕೊರಟಗೆರೆ ಮಂಡಲ ಅಧ್ಯಕ್ಷ ಪವನಕುಮಾರ್, ಯುವಧ್ಯಕ್ಷ ಗುರುಧತ್ ಮುಖಂಡರಾದ ವೆಂಕಟಾಚಲಯ್ಯ, ಹೇಮಾಲತಾ, ಸುಶಿಲಮ್ಮ, ಮಮತಾ, ದಾಡಿವೆಂಕಟೇಶ್, ಹನುಮಂತರಾಯಪ್ಪ, ರಘು, ಲೊಕೇಶ್, ಸಂಜೀವರೆಡ್ಡಿ, ಸೇರಿದಂತೆ ಇತರರು ಇದ್ದರು.
ಜನಸಂಕಲ್ಪ ಸಮಾವೇಶಕ್ಕೆ ಜನಸಾಗರ..
ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸಾರಥ್ಯದಲ್ಲಿ ಕೊರಟಗೆರೆ ಪಟ್ಟಣದಲ್ಲಿ ನಡೆದ ಜನಸಂಕಲ್ಪ ಯಾತ್ರೆಗೆ 15 ಸಾವಿರಕ್ಕೂ ಅಧಿಕ ಬಿಜೆಪಿ ಪಕ್ಷದ ಕಾರ್ಯಕರ್ತರು ಆಗಮಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ವೇದಿಕೆಯ 5ಸಾವಿರಕ್ಕೂ ಅಧಿಕ ಆಸನಗಳು ಭರ್ತಿಯಾಗಿ ಸುತ್ತಮುತ್ತಲು ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಕಾರ್ಯಕರ್ತರು ಬಿಜೆಪಿ ಪಕ್ಷದ ಪರವಾಗಿ ಘೋಷಣೆಯನ್ನು ಮುಳುಗಿಸಿದರು. ಇತಿಹಾಸದ ಮೊದಲ ಸಲ ಕೊರಟಗೆರೆ ಪಟ್ಟಣವು ಕೇಸರಿಮಯವಾಗಿ ಕಂಗೊಳಿಸುತ್ತಿತ್ತು. ರಸ್ತೆಯುದ್ದಕ್ಕೂ ಬಿಜೆಪಿ ನಾಯಕರ ಸಾವಿರಾರು ಕಟೌಟ್, ಬ್ಯಾನರ್ ಮತ್ತು ಬಿಜೆಪಿ ಪಕ್ಷದ ಬಾವುಟಗಳು ರಾರಾಜಿಸುತ್ತಿದ್ದರು.
ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಲಕ್ಷ್ಮೀಕಾಂತ ಬೆಂಬಲಿಗರ ಹೈಡ್ರಾಮ
ಜನಸಂಕಲ್ಪ ಸಮಾವೇಶದ ವೇಳೆ ಬಿಜೆಪಿ ಆಕಾಂಕ್ಷಿ ಡಾ.ಲಕ್ಷ್ಮೀಕಾಂತ ಬೆಂಬಲಿಗರ ಹೈಡ್ರಾಮವೇ ನಡೆದಿದೆ. ಸಿಎಂ ಬಸವರಾಜು ಬೊಮ್ಮಾಯಿ ಮತ್ತು ಸಚಿವ ಗೋವಿಂದ ಕಾರಜೋಳ ಭಾಷಣದ ವೇಳೆ ಡಾ.ಲಕ್ಷ್ಮೀಕಾಂತ ಬೆಂಬಲಿಗರು ಭಾವಚಿತ್ರ ಹಿಡಿದು ಯುವಕರು ಘೋಷಣೆಗಳು ಕೂಗಿದ್ದಾರೆ. ಭಾಷಣಕ್ಕೆ ಅಡ್ಡಿಯಾದ ವೇಳೆ ಗೋವಿಂದ ಕಾರಜೋಳ ಸುಮ್ಮನಿರಲು 5 ಬಾರಿ ಮನವಿ ಮಾಡಿದ್ದಾರೆ. ನಂತರವು ಸಹ ಘೋಷಣೆ ಹೆಚ್ಚಾದ ಹಿನ್ನಲೆ ವೇದಿಕೆ ಮೇಲೆಯೇ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ನ್ನು ಕರೆದು ಕ್ಲಾಸ್ ತೆಗೆದುಕೊಂಡು ಬೆಂಬಲಿಗರನ್ನು ಸುಮ್ಮನಿರುವಂತೆ ಖಡಕ್ ಎಚ್ಚರಿಕೆ ನೀಡಿದ ಘಟನೆ ನಡೆಯಿತು.
ಶಾಸಕರ ನಿರ್ಲಕ್ಷದಿಂದ ಕೊರಟಗೆರೆ ಕ್ಷೇತ್ರದ ಅಭಿವೃದ್ದಿಯು ಕುಂಠಿತವಾಗಿದೆ. ಕೊರಟಗೆರೆ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಸಿಎಂ ಬೊಮ್ಮಾಯಿ ಸಾಹೇಬ್ರು ಭರವಸೆ ನೀಡಿದ್ದಾರೆ. ಕೊರಟಗೆರೆಯಲ್ಲಿ ಜನಸಂಕಲ್ಪ ಯಾತ್ರೆಯ ಸಮಾವೇಶವು ಯಶಸ್ವಿಕಂಡಿದೆ. 2023ಕ್ಕೆ ಬಿಜೆಪಿ ಪಕ್ಷವು ಕೊರಟಗೆರೆ ಕ್ಷೇತ್ರದಲ್ಲಿ ಜಯಬೇರಿ ಭಾರಿಸಲಿದೆ. ಸಮಾವೇಶ ಯಶಸ್ವಿಗೆ ಕಾರಣರಾದ ಮುಖಂಡರು ಮತ್ತು ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದ.
-ಬಿ.ಹೆಚ್.ಅನಿಲ್ಕುಮಾರ್. ಬಿಜೆಪಿ ಆಕಾಂಕ್ಷಿ. ಕೊರಟಗೆರೆ
ನಾವು ಎತ್ತಿನಹೊಳೆ ಯೋಜನೆ ಪ್ರಾರಂಭ ಮಾಡಿದ್ವಿ ಕಾಂಗ್ರೆಸ್-ಜೆಡಿಎಸ್ ಪಕ್ಷದವ್ರು ನಿಲ್ಲಿಸಿದ್ರು. ಪ್ರಧಾನಿಮೋದಿ ಸಂಕಲ್ಪದಂತೆ 2 ವರ್ಷದಲ್ಲಿ 10 ಕೋಟಿ ಮನೆಗಳಿಗೆ ನೀರು ಕೊಟ್ಟಿದ್ದೇವೆ. ಎಸ್ಸಿ-ಎಸ್ಟಿಗೆ ಮೀಸಲಾತಿ ಹೆಚ್ಚಳ ಮತ್ತು ರೈತರ ಮಕ್ಕಳಿಗೆ ವಿದ್ಯಾನಿಧಿ ಪ್ರಾರಂಭ ಮಾಡಿದ್ದೇವೆ. ಜನವರಿ ಮಾಹೆಯಲ್ಲಿ 1ಲಕ್ಷ ಉದ್ಯೋಗ ಸೃಷ್ಟಿ ಮಾಡ್ತೀವಿ. ಕಾಂಗ್ರೆಸ್ ಪಕ್ಷದ್ದು ಸೋನಿಯಾ ಗಾಂಧಿಕೀ ಜೈ. ಬಿಜೆಪಿ ಪಕ್ಷದ್ದೂ ಭಾರತ್ ಮಾತಾಕೀ ಜೈ. ಯಾವ ಪಕ್ಷ ನಿಮಗೇ ಬೇಕೊ ನೀವೇ ಯೋಚನೆ ಮಾಡಿ.
-ಬಸವರಾಜು ಬೊಮ್ಮಾಯಿ. ಸಿಎಂ. ಕರ್ನಾಟಕ..
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz