ಕೊರಟಗೆರೆ : ಗ್ರಾಮೀಣ ಭಾಗದಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿ ಅದನ್ನು ನಿರ್ವಹಿಸುವುದು ಬಹಳ ಕಷ್ಠ. ಡಯಾಲಿಸಿಸ್ ಸೆಂಟರ್ ಕೊರಟಗೆರೆ ಜನತೆಯ ಆಸ್ತಿ, ಇದನ್ನು ನೀವೇ ಕಾಪಾಡಿಕೊಳ್ಳಬೇಕು ಎಂದು ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದ ಸ್ವಾಮೀಜಿ ತಿಳಿಸಿದರು.
ಸಿದ್ದರಬೆಟ್ಟ ರೋಟರಿ ಸಂಸ್ಥೆ ಮತ್ತು ರೇಣುಕಾ ಆಸ್ಪತ್ರೆ ಸಹಯೋಗದಲ್ಲಿ ನೂತನವಾಗಿ ಆರಂಭಿಸಿದ ರೋಟರಿ–ರೇಣುಕಾ ಡಯಾಲಿಸಿಸ್ ಸೆಂಟರ್ನ್ನು ಶ್ರೀಗಳು ತಮ್ಮ ಅಮೃತ ಹಸ್ತದಿಂದ ಚಾಲನೆ ನೀಡಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ರಾಮಕೃಷ್ಣ ಆಶ್ರಮದಿಂದ ಈಗಾಗಲೇ ಮಧುಗಿರಿಯಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿ ಪ್ರತಿನಿತ್ಯ ಹತ್ತಾರು ಮಂದಿ ರೋಗಿಗಳಿಗೆ ಹಾರೈಕೆ ಮಾಡುತ್ತಿದ್ದು, ಉಚಿತವಾಗಿ 30 ಸಾವಿರ ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ, 650 ಮಂದಿ ಅಂಗವಿಕಲರಿಗೆ ಚಿಕಿತ್ಸೆ, ಇಲ್ಲಿಯವರೆಗೂ ತುಮಕೂರು ವಿವಿಯಲ್ಲಿ 8.60 ಲಕ್ಷ ಮಂದಿ ವಿದ್ಯಾರ್ಥಿಗಳಿಗೆ ಆಹಾರ ಒದಗಿಸಿದ್ದು, 4 ಕೋಟಿಗೂ ಅಧಿಕ ಹಣ ಖರ್ಚಾಗಿದೆ. ಆಧ್ಯಾತ್ಮಿಕ ಶಕ್ತಿ, ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ಶ್ರೀಮಠ ಸಾಗುತ್ತಿದೆ ಎಂದು ಹೇಳಿದರು.
ಸಿದ್ದರಬೆಟ್ಟ ಶ್ರೀಮಠದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಒಳ್ಳೆಯ ಹೃದಯ ವ್ಯಕ್ತಿತ್ವದ ಗಣ್ಯ ವ್ಯಕ್ತಿಗಳಿದ್ದಾರೆ. ಸಂಸ್ಥೆಯಿಂದ ಪ್ರಾರಂಭಿಸಿದ ಕಾಮಧೇನು ಯೋಜನೆಯು 220 ಕುಟುಂಬಗಳಿಗೆ ಬೆಳಕನ್ನು ಚೆಲ್ಲಿದೆ. ಸಂಸ್ಥೆ ಅಧ್ಯಕ್ಷ ರಘು ಬೆಂಗಳೂರಿನ ಕಿಡ್ನಿ ಫೌಂಡೇಶನ್ ಸಹಕಾರದಿಂದ ರೇಣುಕಾ ಆಸ್ಪತ್ರೆ ವೈದ್ಯ ಡಾ.ಮಲ್ಲಿಕಾರ್ಜುನ್ ಸಹಯೋಗದಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿ ಬಡಜನರಿಗೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ನೀಡಲು ಸಂಸ್ಥೆ ಮುಂದಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಎಲೆರಾಂಪುರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ರೇಣುಕಾ ಆಸ್ಪತ್ರೆಯ ಡಾ.ಮಲ್ಲಿಕಾರ್ಜುನ್ ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಣೆಗೆ ಸಂಜೀವಿನಿ ಔಷಧಿಯಂತೆ ಕೆಲಸ ಮಾಡುತ್ತಾರೆ. ಡಯಾಲಿಸಿಸ್ ಚಿಕಿತ್ಸೆ ರೋಗಿಗಳ ಬದುಕು ನಿಜಕ್ಕೂ ಕಷ್ಠಕರ. ಡಯಾಲಿಸಿಸ್ ಕೇಂದ್ರ ನಿರ್ವಹಣೆಯು ಆ ಕ್ಷಣದಲ್ಲಿ ಹುಟ್ಟಿದ ಮಗುವನ್ನು ಹಾರೈಕೆ ಮಾಡಿದ್ದಂತೆ. ಆದ್ದರಿಂದ ಡಯಾಲಿಸಿಸ್ ಕೇಂದ್ರ ನಡೆಯುವುದೇ ಬೇಡ, ಮನುಕುಲ ಆದಷ್ಟು ಒತ್ತಡ ಬದುಕನ್ನು ಕಡಿಮೆ ಮಾಡಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.
ತಹಶೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಮನುಷ್ಯನು ಆಡಂಬರದ ಬದುಕಿಗೆ ಅವಕಾಶ ನೀಡಬಾರದು. ರೋಟರಿ ಸಂಸ್ಥೆಯು ಡಯಾಲಿಸಿಸ್ ಕೇಂದ್ರ ಸ್ಥಾಪಿಸಿ ಬಡ ರೋಗಿಗಳ ಸಂಕಷ್ಟಕ್ಕೆ ನೆರವಾಗಿದೆ. ಕೊರಟಗೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಪರಮ ಪೂಜ್ಯರ ಅಮೃತ ಹಸ್ತದಿಂದ ಡಯಾಲಿಸಿಸ್ ಕೇಂದ್ರ ಇಂದು ಲೋಕಾರ್ಪಣೆಗೊಂಡಿದೆ. ಆರೋಗ್ಯವಂತ ಬದುಕಿಗೆ ಪ್ರತಿಯೊಬ್ಬರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲ ಮಹದೇವ್ಪ್ರಸಾದ್, ರೋಟರಿ ಅಧ್ಯಕ್ಷ ರಘು ಕೆ.ಎನ್, ಬೆಂಗಳೂರು ಕಿಡ್ನಿ ಫೌಂಡೇಶನ್ ಡಾ.ಪಿ.ಶ್ರೀರಾಮ್, ಆರ್ಟಿಎನ್ ವಸಂತ್ ಚಂದ್ರ, ಡಾ. ಮಲ್ಲಿಕಾರ್ಜುನ್, ರೇಣುಕಾ, ಡಾ.ಆತ್ಮರಾಮ್ ಶೆಟ್ಟಿ, ಡಾ.ಲತಾ, ಗಂಗಾಧರ ಶಾಸ್ತ್ರಿ, ಬಾಲಾಜಿ ದರ್ಶನ್ ಸೇರಿದಂತೆ ಇತರರು ಇದ್ದರು.
ರೋಟರಿ ಸಂಸ್ಥೆಯು ಸಾಮಾಜಿಕ ಕಳಕಳಿಯನ್ನು ಒತ್ತು ಗ್ರಾಮೀಣ ಭಾಗದ ಜನರಿಗೆ ಕಾಮಧೇನು ಯೋಜನೆ, ಬೋರ್ವೆಲ್ ರಿಚಾರ್ಜ್, ಡಯಾಲಿಸಿಸ್ ಸೆಂಟರ್ ಸ್ಥಾಪಿಸುವ ಉದ್ದೇಶವಿತ್ತು. ಬೆಂಗಳೂರಿನ ಕಿಡ್ನಿ ಪೌಂಡೇಷನ್ ಜೊತೆ ಹಲವು ಸಂಸ್ಥೆಗಳ ಸಹಕಾರದಿಂದ ಬಡ ಜನರ ಅನುಕೂಲಕ್ಕೆ ರೇಣುಕಾ ಆಸ್ಪತ್ರೆ ಸಹಯೋಗದಲ್ಲಿ ಡಯಾಲಿಸಿಸ್ ಸೆಂಟರ್ ಸ್ಥಾಪಿಸಿ ಶ್ರೀಗಳ ಅಮೃತ ಹಸ್ತಾದಿಂದ ಲೋಕಾರ್ಪಣೆ ಗೊಳಿಸಿದೆ. ನನ್ನ ಅವಧಿಯ ಸಾಮಾಜಿಕ ಕಾರ್ಯಕ್ರಮವು ಮನಸ್ಸಿಗೆ ಹರ್ಷ ನೀಡಿದೆ.
— ರಘು ಕೆ.ಎನ್, ಅಧ್ಯಕ್ಷ, ಸಿದ್ದರಬೆಟ್ಟ ರೋಟರಿ ಸಂಸ್ಥೆ.
30 ಲಕ್ಷ ವೆಚ್ಚದ ಡಯಾಲಿಸಿಸ್ ಯಂತ್ರ ಲೋಕಾರ್ಪಣೆ:
ಬೆಂಗಳೂರಿನ ಕಿಡ್ನಿ ಫೌಂಡೇಶನ್ ಸಹಕಾರದಿಂದ ಸಿದ್ದರಬೆಟ್ಟ ರೋಟರಿ–ರೇಣುಕಾ ಡಯಾಲಿಸಿಸ್ ಸೆಂಟರ್ನ್ನು ಕೊರಟಗೆರೆಯ ರೇಣುಕಾ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿದ್ದು, ಪಾವಗಡ ಶ್ರೀ ಜಪಾನಂದ ಸ್ವಾಮೀಜಿ, ಸಿದ್ದರಬೆಟ್ಟ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರ ಹನುಮಂತನಾಥ ಸ್ವಾಮೀಜಿಯವರ ಅಮೃತ ಹಸ್ತಾದಿಂದ 30 ಲಕ್ಷ ವೆಚ್ಚದ ಡಯಾಲಿಸಿಸ್ ಯಂತ್ರವನ್ನು ಲೋಕಾರ್ಪಣೆಗೊಳಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW