ಮಧುಗಿರಿ: ಪರಿಶಿಷ್ಟ ಜಾತಿ ನಿಂದನೆ ಪ್ರಕರಣದ ಅಡಿಯಲ್ಲಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಂದು ಕೊರತೆ ಸಭೆಯಲ್ಲಿ ದಲಿತಪರ ಸಂಘಟನೆಗಳ ಹೋರಾಟ ಹಾಗೂ ಒತ್ತಾಯದ ಧ್ವನಿಯ ಮೇರೆಗೆ ಸಹ ಶಿಕ್ಷಕ ಕೆ ಸಿ ಜೀವನ್ ಪ್ರಕಾಶ್ ರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾದ ಕೆ.ಜಿ. ರಂಗಯ್ಯ ಅಮಾನತುಗೊಳಿಸಿದರು.
ಉಪ ನಿರ್ದೇಶಕರಾದ ಕೆ.ಜಿ.ರಂಗಯ್ಯ ಮಾಧ್ಯಮದೊಂದಿಗೆ ಮಾತನಾಡಿ, ಕೆ.ಸಿ.ಜೀವನ್ ಪ್ರಕಾಶ್ ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಪದ್ಮಪುರ ಸಿರಾ ತಾಲ್ಲೂಕು ಇವರು ಈ ಹಿಂದೆ ಪರಿಶಿಷ್ಟ ಜಾತಿ ಸಮುದಾಯದ ಬಗ್ಗೆ ಉದ್ದೇಶಪೂರ್ವಕ ಜಾತಿನಿಂದನೆ ಮಾಡಿ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಬೇರೆ ಶಿಕ್ಷಕರ ಹತ್ತಿರ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿ ಮಾತನಾಡಿ, ಸಂಭಾಷಣೆಯನ್ನು ಸಾರ್ವಜನಿಕವಾಗಿ ಮೊಬೈಲ್ ವಾಟ್ಸಪ್ ಮೂಲಕ ಹರಿಬಿಟ್ಟಿದ್ದು ಸಮುದಾಯವನ್ನೇ ಅವಹೇಳನಕಾರಿಯಾಗಿ ಮಾನಹಾನಿ ಮಾಡಿದ್ದು, ಈ ವಿಷಯಕ್ಕೆ ಸಂಬಂಧಿಸಿ ಶಿಕ್ಷಕ ಕೆ.ಸಿ.ಜೀವನ್ ಪ್ರಕಾಶ್ ಮೇಲೆ ಸಿರಾ ಟೌನ್ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಆರೋಪದ ಮೇಲೆ ಪ್ರಥಮ ವರ್ತಮಾನ ವರದಿ ( ಸಂಖ್ಯೆ : 0227/2022) ರಡಿ ಪ್ರಕರಣ ದಾಖಲಾಗಿದೆ.
ಈ ಶಿಕ್ಷಕನ ಕರ್ತವ್ಯ ಲೋಪ, ಬೇಜವಾಬ್ದಾರಿತನ ಹಾಗೂ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯ ದುರ್ವರ್ತನೆಯಿಂದ ಸಾರ್ವಜನಿಕ ಆರೋಪಕ್ಕೆ ಗುರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ, ಈ ಹಿನ್ನಲೆಯಲ್ಲಿ ನಾಗರಿಕ ಸೇವಾ ನಿಯಮ (ನಡೆತೆ ) ನಿಯಮ 2021 ರ ನಿಯಮ 3 (1) (2)( 3) ರ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ ಹಾಗೂ ಮೇಲಿನ ಎಲ್ಲಾ ಆರೋಪಗಳು ಮೇಲ್ನೋಟಕ್ಕೆ ನೈಜ ವೆಂದು ಕಂಡು ಬಂದ ಹಿನ್ನೆಲೆಯಲ್ಲಿ ನಿಮ್ಮ ಮೇಲಿನ ಆರೋಪಗಳ ಬಗ್ಗೆ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಮಾಧ್ಯಮ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಸುರೇಶ್ ಆಚಾರ್, ತಾಲೂಕು ಪಂಚಾಯಿತಿ ಎ ಡಿ ಎ ಗುರುಮೂರ್ತಿ, ಆಹಾರ ಶಿರಸ್ತಿದಾರ್ ಗಣೇಶ್, ದಲಿತಪರ ಸಂಘಟನೆಗಳ ಅಧ್ಯಕ್ಷರಾದ ದೊಡ್ಡೇರಿ, ಡಾ. ಮಹಾರಾಜು, ಬಾಲಕೃಷ್ಣ, ಮಂಜುನಾಥ್, ಮಹಾಲಿಂಗಯ್ಯ ಹಾಗೂ ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz