ನಾಸಿಕ್: ರಾಮಮಂದಿರ ನಿರ್ಮಾಣ ಮಾಡಿದ ಮಾತ್ರಕ್ಕೆ ಜನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುತ್ತಾರೆ ಎಂದಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂದು ಊಹಿಸಲು ಸಾಧ್ಯವಿಲ್ಲ, ರಾಮ ಮಂದರ ನಿರ್ಮಿಸಿದ ಮಾತ್ರಕ್ಕೆ ಜನರು ಬಿಜೆಪಿಗೆ ಮತ ಹಾಕುತ್ತಾರೆ ಎಂದರ್ಥವಲ್ಲ ಎಂದು ಅವರು ಹೇಳಿದರು.
ಮರಾಠಾ ಮೀಸಲಾತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮರಾಠಾ ಸಮುದಾಯದವರ ಮೀಸಲಾತಿ ವಿಚಾರ ಬಿಟ್ಟು ಎಲ್ಲಾ ಬೇಡಿಕೆಗಳನ್ನು ಸ್ವೀಕರಿಸಲಾಗಿದೆ ಎಂದರು.
ಟೋಲ್ ಪ್ಲಾಜಾಗಳಲ್ಲಿ ಹಣ ಸಂಗ್ರಹದ ಕುರಿತು ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಭೇಟಿಯಾಗುತ್ತಿದ್ದೇನೆ. ಎಲ್ಲಾ ಕಡೆ ಟೋಲ್ ಹಣವನ್ನು ಪಡೆಯುತ್ತಾರೆ. ಅದರ ವಿರುದ್ಧವಾಗಿ ನಾನು ಮಾತನಾಡುತ್ತಿಲ್ಲ. ಆದರೆ ಅದರ ವ್ಯವಹಾರದಲ್ಲಿ ಪಾರದರ್ಶಕತೆ ಇರಬೇಕು. ಸರ್ಕಾರದ ಬೊಕ್ಕಸಕ್ಕೆ ಆ ಹಣ ಹೋದರೆ ಒಳ್ಳೆಯದು. ಬದಲಾಗಿ ಟೋಲ್ ಸಂಗ್ರಹಿಸುವವರ ಜೇಬಿಗೆ ಅಥವಾ ರಾಜಕೀಯ ಪಕ್ಷದ ಉಪಯೋಗಕ್ಕೆ ಹೋದರೆ ಅದು ತಪ್ಪು ಎಂದು ಹೇಳಿದರು.


