- ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ಕೊರಟಗೆರೆ: ನಿಮ್ಮ ಆಧಾರ್ ಕಾರ್ಡು ಮನೆಗೆ ಇನ್ನೂ ಬಂದಿಲ್ವಾ.. ಬ್ಯಾಂಕು ಚೆಕ್ ಬುಕ್ ನಿಮ್ಮ ಕೈಗೆ ಇನ್ನೂ ಸೇರಿಲ್ವಾ.. ರಿಜಿಸ್ಟರ್ ಪೋಸ್ಟ್–ಸ್ಪೀಡ್ ಪೋಸ್ಟ್ ಮನೆಗೆ ಬರ್ತಾ ಇಲ್ವಾ.. ಕೆಲಸದ ಆಹ್ವಾನದ ತುರ್ತುಕರೆ ನಿಮಗೇ ಬರೋದೇ ಇಲ್ಲ ಬಿಡಿ.. ಯಾಕೆ ಗೊತ್ತಾ ಮಲ್ಲೇಕಾವು ಅಂಚೆ ಕಚೇರಿಯ ಅಂಚೆ ಪಾಲಕ ಕಳೆದ 45ದಿನಗಳಿಂದ ಕಚೇರಿಗೆ ಬಂದೇ ಇಲ್ವಂತೆ..!!
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಮಲ್ಲೇಕಾವು ಗ್ರಾಮದ ಅಂಚೆ ಕಚೇರಿಯ ಅಂಚೆ ಪಾಲಕ ನಾಗೇಂದ್ರ ಎಂಬಾತ ಕಳೆದ 45 ದಿನಗಳಿಂದ ಕರ್ತವ್ಯಕ್ಕೆ ಗೈರುಹಾಜರಿಯಾಗಿದ್ದು, ಹತ್ತಾರು ಗ್ರಾಮಗಳಿಗೆ ತುರ್ತುಸೇವೆ ನೀಡಬೇಕಾದ ಅಂಚೆ ಪಾಲಕ ಗೈರಾದ ಹಿನ್ನೆಲೆಯಲ್ಲಿ ನೂರಾರು ಸಮಸ್ಯೆಗಳು ಸೃಷ್ಟಿಯಾಗಿವೆ.
ಬ್ಯಾಂಕ್ ಬೆಕ್, ಆಧಾರ್ ಕಾರ್ಡು, ಕೋರ್ಟ್ ನೊಟೀಸ್, ಎಟಿಎಂ ಕಾರ್ಡು, ರೇಷನ್ ಕಾರ್ಡು, ಎಲ್ ಐಸಿ ಬಾಂಡ್, ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಜಾಬ್ ನೊಟೀಸ್, ಕೊರಿಯರ್, ಪಾರ್ಸಲ್ ಗಳು, ಹತ್ತಾರು ಗ್ರಾಮದ ನೂರಾರು ಜನ ಗ್ರಾಹಕರ ಕೈಸೇರದೇ ಕಳೆದ 45 ದಿನಗಳಿಂದ ಮಲ್ಲೇಕಾವು ಅಂಚೆ ಕಚೇರಿಯಲ್ಲಿ ಧೂಳು ಹಿಡಿಯುತ್ತಿದ್ದು ಕರ್ತವ್ಯಲೋಪ ಪ್ರಶ್ನಿಸುವ ಅಂಚೆ ನಿರೀಕ್ಷಕರು ನಿರ್ಲಕ್ಷ ವಹಿಸಿದ್ದಾರೆ.
ಅಂಚೆ ಪಾಲಕ ಕಚೇರಿಗೆ ಬರೋದೆ ಇಲ್ವಂತೆ:
ಮಲ್ಲೇಕಾವು ಅಂಚೆ ಇಲಾಖೆಯ ಅಂಚೆ ಪಾಲಕನ ತಂದೆಯ ಕೆಲಸವನ್ನು ಮಗ ನಾಗೇಂದ್ರನಿಗೆ ನೀಡಲಾಗಿದೆ. ನಾಗೇಂದ್ರ ತನ್ನ ಕೆಲಸವನ್ನೇ ಮರೆತು ಸಂಬಳ ಪಡೆಯುವುದಕ್ಕೇ ಮಾತ್ರ ಸೀಮಿತ ಆಗಿದ್ದಾರೆ.
ಅಂಚೆ ಇಲಾಖೆಯ ದಾಖಲೆಗಳು ತನ್ನ ಮನೆಯಲ್ಲಿಯೇ ಶೇಖರಣೆ ಮಾಡಿ ಕೊಂಡಿರುವ ಆರೋಪವು ಸಹ ಇದೆ. 30 ದಿನದ ಹಿಂದೆಯೇ ತನಿಖೆ ನಡೆಸಿರುವ ಅಂಚೆ ನಿರೀಕ್ಷಕ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಪರಿಣಾಮ ಸಮಸ್ಯೆಯು ದ್ವಿಗುಣವಾಗಿದೆ.
ಮಲ್ಲೇಕಾವು ಅಂಚೆ ಉಪಕಚೇರಿಯ ಚನ್ನರಾಯನದುರ್ಗ, ಬೇಂಡೋಣಿ, ಮಲ್ಲೇಕಾವು, ಗೌರಿಗಲ್ಲು, ದೊಗ್ಗನಹಳ್ಳಿ, ಹಂಚಿಮಾರನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ತುರ್ತುಸೇವೆ ನೀಡಬೇಕಾದ ಇಲಾಖೆಯು ಮೌನಕ್ಕೆ ಶರಣಾಗಿದೆ. ಅಂಚೆ ಆಯುಕ್ತರು ಮತ್ತು ಜಿಲ್ಲಾ ಅಧಿಕ್ಷಕರು ಕೊರಟಗೆರೆ ಅಂಚೆ ನಿರೀಕ್ಷಕ ಹರ್ಷ ಮತ್ತು ಮಲ್ಲೇಕಾವು ಅಂಚೆ ಪಾಲಕ ನಾಗೇಂದ್ರ ಮೇಲೆ ಕರ್ತವ್ಯಲೋಪದ ಅಡಿಯಲ್ಲಿ ತುರ್ತು ಕ್ರಮ ಕೈಗೊಳ್ಳಬೇಕಿದೆ.
ಅಂಚೆ ನಿರೀಕ್ಷಕನ ದಿವ್ಯ ನಿರ್ಲಕ್ಷ:
ಕೊರಟಗೆರೆಯ 16 ಅಂಚೆ ಉಪಕಚೇರಿಗಳಿಗೆ ಹರ್ಷ ಎಂಬುವರೇ ಅಂಚೆ ನಿರೀಕ್ಷಕ. ತುಮಕೂರು ನಗರಕ್ಕೆ ಮಾತ್ರ ಸೀಮತವಾಗಿದ್ದು, ಕೊರಟಗೆರೆಗೆ ಸದಾ ಗೈರು. ಇವರು ಕೊರಟಗೆರೆಗೆ ಬರೋದು ಯಾರಿಗೂ ಗೊತ್ತಾಗಲ್ಲ–ಮತ್ತೇ ಹೋಗುವ ದಿನಚರಿಯೇ ತಿಳಿಯೊಲ್ಲ. ಮಲ್ಲೇಕಾವು ಕಚೇರಿಗೆ 30ದಿನದ ಹಿಂದೆಯಷ್ಟೆ ಭೇಟಿ ನೀಡಿ ಹತ್ತಾರು ಸಮಸ್ಯೆಯನ್ನು ಕಣ್ಣಾರೇ ಕಂಡ್ರು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ. ಅಂಚೆ ಇಲಾಖೆಯು ಇವರ ಮೇಲೆ ಮೊದಲು ಶಿಸ್ತು ಕ್ರಮ ಜರುಗಿಸಬೇಕಿದೆ.
ಅಂಚೆ ಇಲಾಖೆಯಲ್ಲಿ ಮೇಲ್ವಿಚಾರಕ ತನಿಖೆ:
ಕೊರಟಗೆರೆ ಅಂಚೆ ನಿರೀಕ್ಷಕ ಹರ್ಷ ಗೈರು ಹಾಜರಿಯಲ್ಲಿ ನೆಪಮಾತ್ರಕ್ಕೆ ಶಿವಕುಮಾರ್ ಮತ್ತು ಮಂಜುನಾಥ ತಂಡದಿಂದ ತನಿಖೆ ನಡೆದಿದೆ. ತನಿಖೆಯ ವೇಳೆ ತಿಂಗಳಿಂದ ಧೂಳು ಹಿಡಿಯುತ್ತಿದ್ದ ಗ್ರಾಹಕರ ನೂರಾರು ದಾಖಲೆಗಳು ದೊರೆತಿವೆ. ತಿಂಗಳ ಹಿಂದೆಯೇ ತನಿಖೆ ನಡೆಸಿದ ಅಂಚೆ ನಿರೀಕ್ಷಕರ ತನಿಖೆಯು ಎಲ್ಲಿಗೇ ಬಂತು ಎಂಬುದೇ ಯಕ್ಷಪ್ರಶ್ನೆಯಾಗಿ ಜನರ ಮುಂದೆ ಉಳಿದಿದೆ.
ಅಂಚೆ ಇಲಾಖೆ ಮೂಲಕ ಜನರಿಗೆ ತಲುಪುವ ಯಾವುದೇ ದಾಖಲೆ ನಿಗದಿತ ಸಮಯಕ್ಕೆ ಸಿಗುತ್ತಿಲ್ಲ. ಅಂಚೆ ಪಾಲಕ ಕಳೆದ 45ದಿನಗಳಿಂದ ಗೈರು ಹಾಜರಾಗಿ ಸಮಸ್ಯೆ ಸೃಷ್ಟಿಯಾಗಿದೆ. ನೂರಾರು ಜನರ ದಾಖಲೆಗಳು ಅಂಚೆ ಇಲಾಖೆಯಲ್ಲಿ ಕೊಳೆಯುತ್ತಿವೆ. ಕೊರಟಗೆರೆಯ ಅಂಚೆ ನಿರೀಕ್ಷಕರಿಗೆ ಸ್ಥಳೀಯರು ದೂರು ನೀಡಿದ್ರು ಪ್ರಯೋಜನ ಆಗಿಲ್ಲ.
–ರಾಘವೇಂದ್ರ, ಸ್ಥಳೀಯ ನಿವಾಸಿ, ಸಿ.ಎನ್.ದುರ್ಗ
ಮಲ್ಲೇಕಾವು ಅಂಚೆ ಪಾಲಕ ಗೈರು ಹಾಜರಿಯ ಬಗ್ಗೆ ಈಗಾಗಲೇ ತನಿಖೆ ನಡೆದಿದೆ. ಅಂಚೆ ಪಾಲಕ ನಾಗೇಂದ್ರಗೆ ಕಾರಣ ಕೇಳಿ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ. ತನಿಖೆಯಲ್ಲಿ ಲೋಪದೋಷ ಕಂಡುಬಂದರೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ತುರ್ತುಸೇವೆಗೆ ಸಮಸ್ಯೆ ಆಗದಂತೆ ಕ್ರಮಕ್ಕೆ ಈಗಾಗಲೇ ಅಂಚೆ ನಿರೀಕ್ಷಕರಿಗೆ ಸೂಚಿಸಿದ್ದೇನೆ.
–ಗೋವಿಂದರಾಜು, ಅಧೀಕ್ಷಕ, ಅಂಚೆ ಇಲಾಖೆ, ತುಮಕೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1