ತುಮಕೂರು: ಹಿಂದೂ ಮುಸ್ಲಿಂರ ನಡುವಿನ ಬಾಂಧವ್ಯ ಸೋದರತೆ, ಭಾವೈಕ್ಯತೆ ಸಾರುವ ಪರಂಪರೆಯನ್ನು ಇಂದು ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಿಂದ ಶಾಂತಿ ಕದಡುವಂತಾಗುತ್ತಿದೆ, ಬದಲಿಗೆ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಬಿ.ಕಲ್ಕೆರೆ ಅಲ್ಲಮ ಪ್ರಭು ಪೀಠಾಧ್ಯಕ್ಷರಾದ ತಿಪ್ಪೇರುದ್ರ ಸ್ವಾಮೀಜಿ ಅಭಿವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಶನಿವಾರ ನಡೆದ ಹಿಜಾಬ್ ಹಾಗೂ ಕೇಸರಿ ಶಾಲು, ಶಾಲಾ ಕಾಲೇಜು ತೆರೆಯುವ ಕುರಿತಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಜಾಬ್ ಹಾಗೂ ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದೆಲ್ಲೆಡೆ ಉದ್ವಿಗ್ನ ವಾತಾವರಣ ತಾರಕಕ್ಕೇರಿರುತ್ತಿದೆ. ಪರಿಣಾಮ ಹಿಂದೂ ಮುಸ್ಲಿಂ ನಡುವೆ ಸೋದರ ಸಮಾನತೆ ಭಾವನೆಗೆ ಧಕ್ಕೆಯುಂಟಾಗುತ್ತಿದೆ. ಅಲ್ಲದೆ ಬಂಗಾರದಂತಹ ಭವಿಷ್ಯ ಕಟ್ಟಿಕೊಳ್ಳುವ ಮಕ್ಕಳ ಬದುಕಲ್ಲಿ ಹಿಜಾಬ್ , ಸಮವಸ್ತ್ರದ ಕಿಡಿ ಬರೆ ಎಳೆದಂತಾಗುತ್ತಿದೆ. ವಿಚಾರದಲ್ಲಿ ಈ ಸ್ವಾರ್ಥ ರಾಜಕೀಯ ನಾಯಕರ ಹಸ್ತಕ್ಷೇಪವಿದೆ ಎಂದು ಆರೋಪಿಸಿದರು.
ಈಗಾಗಲೇ ಕೊರೊನಾ ಎಂಬ ಮಹಾಮಾರಿ ಅಟ್ಟಹಾಸದಿಂದ ನಲುಗಿದ್ದ ಮಕ್ಕಳು ಶಾಲೆ ಕಾಲೇಜುಗಳಿಂದ ದೂರ ಉಳಿಯಬೇಕಾಯಿತು. ಪೋಷಕರು ಪ್ರತಿದಿನ ಗೊಂದಲಕ್ಕೀಡಾಗುವ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂದು ಹಿಜಾಬ್ ಹಾಗೂ ಸಮವಸ್ತ್ರ ಧರಿಸುವ ಕುರಿತಾದ ವಿಚಾರದಲ್ಲಿ ಹಿಂದೂ ಮುಸ್ಲಿಂ ಧರ್ಮಗಳ ಸಾಂಪ್ರಾದಾಯಿಕ ಆಚಾರ ವಿಚಾರಗಳು, ಶಾಲಾ ಮಕ್ಕಳಲ್ಲಿ ಕೋಮುಗಲಭೆಯಂತಹ ಅಹಿತಕರ ಘಟನೆಗಳು ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಂಡ್ಯದಲ್ಲಿ ಜೈ ಶ್ರೀರಾಮ್ ಹಾಗೂ ಅಲ್ಲಾ ಹು ಅಕ್ಬರ್ ಎಂಬ ಘೋಷಣೆ ಪ್ರತಿ ಘೋಷಣೆಗಳ ಕಾವು ಇನ್ನಷ್ಟು ಅಶಾಂತಿ ಉಲ್ಬಣಗೊಳ್ಳುವಂತೆ ಮಾಡಿತು. ಇದು ಅಷ್ಟು ಆರೋಗ್ಯಕರವಲ್ಲ, ಧರ್ಮಗಳ ಹಾಗೂ ಜನರ ನಡುವೆ ಶಾಂತಿ ಸೌಹಾರ್ಧತೆಯನ್ನು ಕದಡುತ್ತದೆ ಎಂದರು.
ಬುದ್ಧ ಬಸವ, ಅಂಬೇಡ್ಕರ್ , ಷರೀಪರು ಸಮಾನತೆಯನ್ನು ಸಾರಿದ ಮಹನೀಯರು ಅಂತಹವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಸರ್ವರು ಸಮಾನರಂತೆ ಸಮವಸ್ತ್ರ ಧರಿಸಬೇಕು, ಪರೀಕ್ಷಾ ಹಿತಾದೃಷ್ಟಿಯಿಂದ ಶಾಲೆಗಳಿಗೆ ಶಾಂತಿ, ಸೌಹಾರ್ದತೆಯ ಭಾವನೆಯಿಂದ ಬರುವಂತಾಗಬೇಕಿದೆ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲಿಂಗಾಯುತ ಧರ್ಮ ಹಿತಾರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಪ್ರಶಾಂತ್, ರೈತ ಮುಖಂಡ ಪಂಚಾರಕ್ಷರಯ್ಯ, ಹೊನಸಿಗೆರೆ ಶಿವಕುಮಾರ ಸ್ವಾಮಿ ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB