ಪಾವಗಡ: ತಾಲ್ಲೂಕು ಕಚೇರಿ ಆವರಣದಲ್ಲಿರುವ ಪಾವನ ಗಂಗಾ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು ಪರಿಣಾಮವಾಗಿ ತಾಲ್ಲೂಕು ಕಚೇರಿಗಳಿಗೆ ಕೆಲಸದ ನಿಮಿತ್ತ ಆಗಮಿಸುವ ಜನರಿಗೆ ಕನಿಷ್ಠ ಪಕ್ಷ ಕುಡಿಯುವ ನೀರಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ. ಈ ಕೂಡಲೇ ಪಾವನ ಗಂಗಾ ನೀರಿನ ಘಟಕ ದುರಸ್ತಿಗೊಳಿಸುವಂತೆ ಪಾವಗಡ ಗ್ರೇಡ್ 2 ತಹಸೀಲ್ದಾರ್ ರವರಿಗೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಕನ್ನಮೇಡಿ ಕೃಷ್ಣಮೂರ್ತಿ, ಪ್ರತಿಷ್ಠಿತ ಇನ್ಫೋಸಿಸ್ ಫೌಂಡೇಶನ್ ಪಟ್ಟಣದ ಹಲವು ಕಡೆಗಳಲ್ಲಿ ಪಾವನ ಗಂಗಾ ಹೆಸರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿರುವುದು ಸ್ವಾಗತರ್ಹ. ಆದರೆ ಲಕ್ಷಾಂತರ ರೂ.ಗಳು ವ್ಯಹಿಸಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿ, ಕೆಲವು ತಿಂಗಳುಗಳು ಮಾತ್ರ ಇದು ಕಾರ್ಯ ನಿರ್ವಹಿಸಿವೆ. ನೀರಿನ ಘಟಕ ಕೆಟ್ಟು ನಿಂತು ಬಹಳ ದಿನಗಳು ಕಳೆದರೂ, ಇದರ ಸಂಪೂರ್ಣ ಉಸ್ತುವಾರಿ ವಹಿಸಿರುವ ಪಾವಗಡ ಖಾಸಗಿ ಸಂಸ್ಥೆಯಾಗಲಿ, ಸಂಬಂಧ ಪಟ್ಟ ಇಲಾಖೆಯಾಗಲಿ, ನೀರಿನ ಘಟಕವನ್ನು ಸರಿಪಡಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
ಕಡಮಲಕುಂಟೆ ಹನುಮಂತರಾಯಪ್ಪ ಮಾತನಾಡಿ, ಪ್ರತಿನಿತ್ಯ ಸಾವಿರಾರು ನಾಗರಿಕರು, ವೃದ್ಧರು, ಮಹಿಳೆಯರು, ಮಕ್ಕಳು ಸರ್ಕಾರಿ ಕಚೇರಿ ಕೆಲಸ ನಿಮಿತ್ತ ಆಗಮಿಸುತ್ತಿದ್ದು ಶುದ್ಧ ಕುಡಿಯುವ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಪಾವಗಡ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕೂಡ ಪಾವನ ಗಂಗಾ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ವಿದ್ಯಾರ್ಥಿಗಳು ಮನೆಗಳಿಂದ ನೀರು ತರುವ ಸ್ಥಿತಿ ಬಂದೊದಗಿದೆ. ಆದ್ದರಿಂದ ಈ ಕೂಡಲೇ ಸಂಬಂಧ ಪಟ್ಟ ಘಟಕದ ಉಸ್ತುವಾರಿ ವಹಿಸಿರುವವರು ಅಥವಾ ಸಂಬಂಧ ಪಟ್ಟ ಇಲಾಖೆ ಈ ಕೂಡಲೇ ಸರಿಪಡಿಸಿ ನಾಗರಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಯುವ ಮುಖಂಡ ಅನಿಲ್, ನಾಗರಾಜ, ದಲಿತ ಮುಖಂಡರುಗಳಾದ ಕನ್ನ ಮೇಡಿ ಕೃಷ್ಣ ಮೂರ್ತಿ, ಮಂಜುನಾಥ್, ರಮೇಶ್, ಹನುಮಂತರಾಯಪ್ಪ ಹಾಗೂ ಹೆಲ್ಪ್ ಸೊಸೈಟಿ ಪದಾಧಿಕಾರಿಗಳು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy