ತುಮಕೂರು: ರಾಜ್ಯ ಸರ್ಕಾರದ ಬಳಿ: 19.39 ಲಕ್ಷ ಎಕರೆ ಜಮೀನು, ಲಭ್ಯವಿದ್ದು, ಈ ಜಮೀನನ್ನು ರಾಜ್ಯ ಸರ್ಕಾರ ಖಾಸಗಿ ಸಂಘ, ಸಂಸ್ಥೆ, ಧಾರ್ಮಿಕ ಕೇಂದ್ರ ಟ್ರಸ್ಟ್, ಇತ್ಯಾದಿ ಬೃಹತ್ ಉದ್ಯಮಿಗಳಿಗೆ ಗೋಮಾಳ ಸರ್ಕಾರಿ ಭೂಮಿಯನ್ನು ಗುತ್ತಿಗೆ ಭೋಗ್ಯಕ್ಕೆ ನೀಡಲು ಈಗಾಗಲೇ ಕಂದಾಯ ಸಚಿವರ ನೇತೃತ್ವದಲ್ಲಿ ಉಪ ಸಮಿತಿ ರಚನೆ ಮಾಡಿರುವುದು ಖಂಡನೀಯವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ತುಮಕೂರು ಘಟಕದ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಿ.ಪಿ.ಐ. , ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ ನ ಜಿಲ್ಲಾ ಕಾರ್ಯದರ್ಶಿ ಗಿರೀಶ್, ರಾಜ್ಯಾದ್ಯಂತ ಈ ಹಿಂದೆಯೇ ಲಕ್ಷಾಂತರ ಬಗರ್ ಹುಕುಂ ಸಾಗುವಳಿದಾರರು ತಾವು ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಯ ಹಕ್ಕು ಪತ್ರ ಕೋರಿ ಫಾರ್ಮ್ ನಂಬರ್ 50, 53, ಮತ್ತು 57ರಲ್ಲಿ ಅಕ್ರಮ-ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಇನ್ನೂ ಭೂಮಿ ಮಂಜೂರಾಗಿಲ್ಲ. ಹೀಗಿರುವಾಗ ಇಂತಹ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಸರ್ಕಾರಿ ಭೂಮಿ ಎಂದು ಪರಿಗಣಿಸಿ ಖಾಸಗಿ ಸಂಸ್ಥೆಗಳಿಗೆ ಮಂಜೂರು ಮಾಡಿದ್ದಲ್ಲಿ ಲಕ್ಷಾಂತರ ಕುಟುಂಬಗಳು ಭೂ ರಹಿತವಾಗಿ ಬೀದಿಪಾಲಾಗಲಿದ್ದಾರೆ. ಇದು ಸಾಮಾಜಿಕ ಸಂಘರ್ಷಕ್ಕೂ ಕಾರಣವಾಗಲಿದೆ ಎಂದರು.
ಈಗಾಗಲೇ ರಾಜ್ಯ ಸರ್ಕಾರ ನಿವೇಶನರಹಿತ ಸಮೀಕ್ಷೆ ನಡೆಸಿದ್ದು, ಅದರಂತೆ ಲಕ್ಷಾಂತರ ಕುಟುಂಬಗಳು ಸ್ವಂತ ವಾಸದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆಲ್ಲಾ ಇದುವರೆಗೂ ನಿವೇಶನ ಸಿಕ್ಕಿಲ್ಲ, ರಾಜ್ಯದ ಬಹುತೇಕ ಗ್ರಾಮ ಪಂಚಾಯ್ತಿಗಳು ನಿವೇಶನಕ್ಕಾಗಿ ಭೂಮಿ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿವೆ. ನಿವೇಶನ ನೀಡಲು ಅಗತ್ಯ ಸರ್ಕಾರಿ ಭೂಮಿ ಲಭ್ಯವಿಲ್ಲ ಎಂದು ಕಂದಾಯ ಇಲಾಖೆ ಹೇಳುತ್ತಿದ್ದು, ಅದಕ್ಕೆ ಪರಿಭಾವಿತ ಅರಣ್ಯ (Deemed Forest ) ಕಾರಣ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಖಾಸಗಿ ಸಂಸ್ಥೆಗಳಿಗೆ ಭೂಮಿ ನೀಡುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಕ್ರಮವಾಗುತ್ತದೆ ಎಂದರು.
ಸಿಪಿಐ ಮುಖಂಡ ಕಂಬೇಗೌಡ ಮಾತನಾಡಿ, ರಾಜ್ಯದಲ್ಲಿ ಸರ್ಕಾರದ ಭೂಸ್ವಾಧೀನ ಕ್ರಮದಿಂದ ಭೂಮಿ ಕಳೆದುಕೊಂಡ ಭೂಸಂತ್ರಸ್ಥರಿಗೆ ಬದಲಿ ಭೂಮಿ ನೀಡುವ ನೂರಾರು ಪುನರ್ ವಸತಿ ಯೋಜನೆಗಳ ಪ್ರಕ್ರಿಯೆ ಪೂರ್ಣಗೊಳ್ಳದೆ. ಭೂ ಲಭ್ಯತೆಯ ಅನುಮೋದನೆ ರಾಜ್ಯ ಸರ್ಕಾರವನ್ನು ಎದುರು ನೋಡುತ್ತಿವೆ. ಈ ಹಂತದಲ್ಲಿ ಖಾಸಗಿ ಸಂಘ ಸಂಸ್ಥೆಗಳಿಗೆ ಭೂಮಿ ನೀಡಲು ಉದ್ದೇಶಿಸಿರುವುದು ಅಕ್ರಮ ಆದ್ಯತೆಯಾಗುತ್ತದೆ ಎಂದರು.
ಜಿಲ್ಲಾಧಿಕಾರಿಗಳ ಪರವಾಗಿ ತುಮಕೂರು ತಹಶೀಲ್ದಾರ್ ಮೋಹನ್ ಅವರು ಸಿಪಿಐ ಕಾರ್ಯಕರ್ತರ ಮನವಿಯನ್ನು ಸ್ವೀಕರಿಸಿದರು. ಈ ವೇಳೆ ಸಿಪಿಐ ಸಂಘಟನೆ ಕಾಂತರಾಜು, ರಮೇಶ್, ರಾಮಸ್ವಾಮಿ, ದೊಡ್ಡತಾಯಮ್ಮ, ರವಿಕುಮಾರ್, ಉದಯ್, ವೆಂಕಟೇಶ್ , ಮಾರುತಿ ಸೇರಿದಂತೆ ಇತರರು ಉಪಸ್ಥಿತಿ ಇದ್ದರು.
ವರದಿ: ಎ. ಎನ್. ಪೀರ್, ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB