ಪಾವಗಡ : ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಹತ್ಯೆಯನ್ನು ಖಂಡಿಸಿ, ರಾಷ್ಟ್ರೀಯ ಹಿಂದು ಪರಿಷತ್ ಪ್ರಧಾನ ಕಾರ್ಯದರ್ಶಿಯಾದ ಅನಿಲ್ ಯಾದವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಬಜರಂಗದಳ ಹಾಗೂ ಶ್ರೀರಾಮಸೇನೆಯ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ಪ್ರವಾಸಿ ಮಂದಿರದಿಂದ ಶನಿಮಹಾತ್ಮ ವೃತ್ತದ ವರೆಗೂ ತೆರಳಿ ರಸ್ತೆಯುದ್ದಕ್ಕೂ ಜೈಶ್ರೀರಾಮ್ ಎಂಬ ಹರ್ಷೋದ್ಗಾರವನ್ನು ಮೊಳಗಿಸಿದರು. ಬಳಿಕ ಗ್ರೇಟ್ 2 ತಹಶೀಲ್ದಾರ್ ಸುಮತಿರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅನಿಲ್ ಯಾದವ್, ಹಿಂದೂ ಧರ್ಮದ ರಕ್ಷಣೆಯ ಮೂಲ ಮಂತ್ರವನ್ನು ಜಪಿಸುತ್ತ ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷದ ಆಡಳಿತದ ಅವಧಿಯಲ್ಲಿ ನಮ್ಮ ಹಿಂದೂ ಕಾರ್ಯಕರ್ತರ ಹತ್ಯೆ ಆಗಿರುವುದು ಖಂಡನೀಯ . ಈಗಲಾದರೂ ಪಕ್ಷವು ಎಚ್ಚೆತ್ತುಕೊಂಡು ಶೀಘ್ರವಾಗಿ ಎಲ್ಲಾ ಕೊಲೆಗಡುಕರನ್ನು ಬಂಧಿಸಿ ಗಲ್ಲಿಗೇರಿಸಬೇಕು. ಈ ಕೊಲೆಯ ಹಿಂದಿರುವ ಸಂಘಟನೆಗಳನ್ನು ಗುರುತಿಸಿ ಕಾನೂನಿನಡಿಯಲ್ಲಿ ಕ್ರಮಕೈಗೊಳ್ಳಬೇಕು. SDPI ,PFI,CFI ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು ಮತ್ತು ಮೃತಪಟ್ಟ ಕುಟುಂಬದವರಿಗೆ 50 ಲಕ್ಷ ರೂಪಾಯಿಗಳ ಪರಿಹಾರವನ್ನು ಸರ್ಕಾರ ತಕ್ಷಣವೇ ನೀಡಬೇಕೆಂದು ಒತ್ತಾಯಿಸಿದರು.
ಶ್ರೀರಾಮಸೇನೆಯ ಸಂಚಾಲಕ ರಾಮಾಂಜಿ ಮಾತನಾಡಿ, ಹರ್ಷನ ಕೊಲೆ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಹಾಗೂ ಹಿಜಾಬ್ ವಿಚಾರ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು, ಕೋರ್ಟ್ ಮಧ್ಯಂತರ ಆದೇಶದ ಮೇರೆಗೆ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಎಂಬ ನಿಯಮವಿದ್ದು, ಕೆಲವು ಮುಸ್ಲಿಂ ಸಂಘಟನೆಗಳ ಕುಮ್ಮಕ್ಕಿನಿಂದ ಮುಸ್ಲಿಂ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹಿಂದೂ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಪ್ರವೀಣ್ ಮಾತನಾಡಿ, ಹಿಂದೂ ಧರ್ಮದ ರಕ್ಷಣೆಗಾಗಿ ಪ್ರತಿಯೊಬ್ಬರೂ ಟೊಂಕಕಟ್ಟಿ ನಿಲ್ಲುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇಲ್ಲದಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಹಿಂದೂಗಳು ಭಾರತ ದೇಶದಲ್ಲಿ ಅಲ್ಪಸಂಖ್ಯಾತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಆದ್ದರಿಂದ ಹರ್ಷನ ಕೊಲೆಯ ವಿಚಾರದಲ್ಲಿ ರಾಜಕೀಯ ಪಕ್ಷಗಳು ಮತಬ್ಯಾಂಕಿನ ರಾಜಕಾರಣ ಮಾಡದೆ ಸರಿಯಾದ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಮಂಜುನಾಥ, ನಾಗಲಮಡಿಕೆ ಹೋಬಳಿ ಅಧ್ಯಕ್ಷ ವಿಜಯ್, ಪೆದ್ದರೆಡಿ,ರಾಮಮೋಹನ್, ತಿಮ್ಮರಾಜ್, ಬಜರಂಗದಳ ತಾಲ್ಲೂಕು ಸಂಚಾಲಕ ಸುಮನ್, ನಾಗಭೂಷಣ, ಬಾಬು, ಗುರು, ನರೇಶ್, ಕೃಷ್ಣಗಿರಿ ದಿವಾಕರ್, ಸೀನ ಹಾಗೂ ಇನ್ನು ಹಲವರು ಹಾಜರಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ., ಪಾವಗಡ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB