ಕೊರಟಗೆರೆ : ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರನ್ನು ಜನಸಾಮಾನ್ಯರಿಗೆ ಒದಗಿಸುವಲ್ಲಿ ಗ್ರಾಮ ಪಂಚಾಯತಿ ವಿಫಲವಾಗಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲ್ಲೂಕಿನ ಸಿ.ಎನ್.ದುರ್ಗ ಹೋಬಳಿಯ ಬುಕ್ಕಪಟ್ಟಣ ಗ್ರಾ.ಪಂ. ವ್ಯಾಪ್ತಿಯ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆಯಿದ್ದು, ಜನರು ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಖಾಲಿ ಕೊಡಗಳೊಂದಿಗೆ ಮಹಿಳೆಯರು, ಸುತ್ತ ಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ಬಾರಿ ವರುಣನ ಕೃಪೆಯಿಂದ ಸಾಕಷ್ಟು ಮಳೆಯಾಗಿ ಕೆರೆ–ಕಟ್ಟೆಗಳು ತುಂಬಿದ್ದವು, ಗ್ರಾಮ ಪಂಚಾಯಿತಿಯು ಸಮರ್ಪಕವಾಗಿ ನೀರು ಸರಬರಾಜು ಮಾಡದೆ ನಿರ್ಲಕ್ಷ್ಯ ವಹಿಸಿದ ನಡೆಗೆ ಗ್ರಾಮದ ಮಹಿಳೆಯರು ಹಾಗೂ ಊರಿನ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಆಕ್ರೋಶ ಹೊರಹಾಕಿದ ಘಟನೆ ನಡೆಯಿತು.
ಗ್ರಾಮದ ಮಹಿಳೆ ಲಕ್ಷಮ್ಮ ಮಾತನಾಡಿ, ನಮಗೆ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರು, ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ, ಗ್ರಾ.ಪಂ.ನವರು ಟ್ಯಾಂಕರ್ ಗಳ ಮುಖಾಂತರ ಕಲುಶಿತ ನೀರನ್ನು ಸರಬರಾಜು ಮಾಡಿದ್ದಾರೆ. ಆ ನೀರು ಕುಡಿದ ನಮಗೆಲ್ಲರಿಗೂ ಆರೋಗ್ಯದಲ್ಲಿ ಏರು–ಪೇರು ಉಂಟಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ನಮ್ಮ ಸಮಸ್ಯೆಯನ್ನು ಗಮನಹರಿಸಿ, ಬಗೆಹರಿಸಿಕೊಡಬೇಕು ಎಂದು ಮನವಿ ಮಾಡಿದರು.
ಬುಕ್ಕಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರ, ಗೊಲ್ಲರಹಟ್ಟಿಗಳಲ್ಲಿ ನೀರು ಸರಬರಾಜು ಮಾಡುತ್ತಿದ್ದಾರೆ, ಆದರೆ ಇದೆ ಗ್ರಾಮದ ಕಾಲೋನಿಗಳಿಗೆ ಕುಡಿಯುವ ನೀರು ಕೊಡದೆ ಬೇರೆ ಯಾವುದೋ ನೀರನ್ನು ತಂದು ಕಾಲೋನಿಗಳಲ್ಲಿ ಬಿಡುತ್ತಿದ್ದಾರೆ. ಅದರಿಂದ ಮನೆಯ ಕುಟುಂಬದವರು ಖಾಯಿಲೆಗೆ ತುತ್ತಾಗುತ್ತಿದ್ದಾರೆ. ನಮ್ಮ ಚಿಕಿತ್ಸೆಗೆ ದುಡ್ಡು ಕೊಡುವವರು ಯಾರು? ಎಂದು ಮೂಲಭೂತ ಸೌಕರ್ಯದಿಂದ ವಂಚಿತರಾದ ಗ್ರಾಮದ ರಂಗಮ್ಮ ಅಸಾಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಕರ್ನಾಟಕ ದಲಿತ ಸರ್ವೋದಯ ಸಮಿತಿ ತಾ.ಅಧ್ಯಕ್ಷ ಹರೀಶ್ ಬಿ.ಸಿ., ದೊಡ್ಡಕಾಯಪ್ಪ, ರತ್ನಮ್ಮ, ರೇಣುಕಮ್ಮ, ಕೆಂಪರಾಜು, ಮಣ್ಣಮ್ಮ, ರತ್ನಮ್ಮ, ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA