ಕುಣಿಗಲ್: ತಾಲ್ಲೂಕಿನಲ್ಲಿ ಶಾಸಕರು ತುಘಲಕ್ ದರ್ಬಾರ್ ನಡೆಸುತ್ತಿದ್ದು, ಅಧಿಕಾರಿಗಳು ಶಾಸಕರ ಮರ್ಜಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ಆರೋಪಿಸಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಮಲ್ಲಾಘಟ್ಟದಲ್ಲಿ 9 ಎಕರೆ ಜಮೀನನ್ನು ಆಶ್ರಯ ನಿವೇಶನಗಳ ಹಂಚಿಕೆಗೆ ಮೀಸಲಿಟ್ಟು 20 ವರ್ಷ ಕಳೆದಿವೆ. ಪುರಸಭೆ ವ್ಯಾಪ್ತಿಯಲ್ಲಿ ಸುಮಾರು ನಾಲ್ಕು ಸಾವಿರ ಆಶ್ರಯ ನಿವೇಶನ ಆಕಾಂಕ್ಷಿಗಳು ಹತ್ತು ಹಲವು ಬಾರಿ ಅರ್ಜಿಗಳನ್ನು ಸಲ್ಲಿಸಿ ಹತ್ತಾರು ವರ್ಷದಿಂದ ಕಾಯುತ್ತಿದ್ದಾರೆ. ಆದರೆ ಶಾಸಕ ರಂಗನಾಥ್ ಆರು ಮಂದಿ ಅನರ್ಹರಿಗೆ ಯಾವುದೇ ಮಾನದಂಡಗಳನ್ನು ಪರಿಪಾಲಿಸದೆ ಮಂಜೂರು ಮಾಡಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಶಾಸಕರ ಬಲವಂತಕ್ಕೆ ಮಾಡಲಾಗಿದೆ ತಮ್ಮದೇನು ಪಾತ್ರವಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ಈ ಹಿಂದೆ ಈ 6 ಮಂದಿ ಆಶ್ರಯ ನಿವೇಶನಗಳಿಗೆ ಮೀಸಲಿಟ್ಟ ಜಾಗದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಸೂಚನೆ ಮೇರೆಗೆ ಮನೆಗಳನ್ನು ನಿರ್ಮಿಸುತ್ತಿದ್ದು, ತಡೆದ ಸಮಯದಲ್ಲಿ ಅಧಿಕಾರಿಗಳು ನಿರುತ್ತರರಾಗಿದ್ದರು. ಆಶ್ರಯ ನಿವೇಶನ ಹಂಚಿಕೆಗೆ ಇರುವ ಮಾನದಂಡಗಳನ್ನು ಅನುಸರಿಸದೆ 6 ಮಂದಿಗೆ ಹಂಚಿಕೆ ಮಾಡಿರುವುದು ಖಂಡನೀಯ ಎಂದರು.
ತಾಲ್ಲೂಕಿನ ಹುಲಿವಾನ ಗ್ರಾಮದಲ್ಲಿ 150 ವರ್ಷಗಳಿಂದಲೂ ಗ್ರಾಮಸ್ಥರು ಸ್ಮಶಾನಕ್ಕೆ ಬಳಕೆ ಮಾಡುತ್ತಿದ್ದ ಎರಡು ಎಕರೆ ಜಮೀನನ್ನು ಸರ್ಕಾರ ಸ್ಮಶಾನಕ್ಕಾಗಿ ಮಂಜೂರು ಮಾಡಿದ್ದರೂ, ಈ ಜಾಗಕ್ಕೆ ಹೊಂದಿಕೊಂಡಂತೆ ಕಾಂಗ್ರೆಸ್ ಮುಖಂಡರೊಬ್ಬರು ಮನೆ ನಿರ್ಮಿಸಿಕೊಂಡಿದ್ದಾರೆ.
ಶಾಸಕರು ಪ್ರಭಾವ ಬೀರಿ ಚಕ್ಕುಬಂದಿಯನ್ನೇ ಬದಲಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ ಪರಿಣಾಮ ಸ್ಮಶಾನ ಜಾಗದ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟ ಆದೇಶ ಬಂದಿದ್ದರೂ ಕ್ರಮ ತೆಗೆದುಕೊಂಡಿಲ್ಲ. ಅಧಿಕಾರಿಗಳು ಶಾಸಕರ ಸೂಚನೆಯಂತೆ ಕಾರ್ಯನಿರ್ವಹಿಸಿ ಸ್ಮಶಾನದ ಜಾಗಕ್ಕೂ ವಿವಾದ ಸೃಷ್ಟಿಸುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತರಿಕೆರೆ ಪ್ರಕಾಶ್, ಕೆ.ಎಲ್.ಹರೀಶ್, ರಂಗಸ್ವಾಮಿ, ಜಗದೀಶ್, ಎಡೆಯೂರು ದೀಪೂ, ಮನೋಜ್ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


