ಕೊರಟಗೆರೆ: 18ನೇ ಶತಮಾನದ ಆದಿ ಭಾಗದಲ್ಲಿ ಕೊರಟಗೆರೆ ಪ್ರಾಂತ್ಯಕ್ಕೆ ದೊರೆಯಾಗಿದ್ದ ಕುರಂಗರಾಜ ದಕ್ಷಿಣ ಭಾರತದ ಮೊದಲ ದಲಿತ ಜನಾಂಗದ ನಾಯಕ ಎಂದು ಕವಿಗಳಾದ ಡಾ.ಶಿವಣ್ಣ ತಿಮ್ಲಾಪುರ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾದ ‘ಚಕೋರ’ ಉಪನ್ಯಾಸಮಾಲಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ಥಳೀಯ ದೊರೆ ಕುರಂಗರಾಜನು ತನ್ನ ಆಳ್ವಿಕೆಯಲ್ಲಿ ದೇವಾಲಯಗಳನ್ನು ಕಟ್ಟಿದ್ದು, ಚರ್ಮದ ನಾಣ್ಯಗಳನ್ನು ಬಳಕೆಗೆ ತಂದಿದ್ದು ಮುಂತಾದ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಜನಸಾಮಾನ್ಯರ ದೊರೆಯಾಗಿದ್ದ ಎಂಬುದಾಗಿ ಆತನ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಈರಪ್ಪ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಥಳೀಯ ಇತಿಹಾಸದ ಪರಿಚಯ ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿ ಆಗಬೇಕಿದೆ ಎಂದರು.
ಕುರಂಗರಾಜನನ್ನು ಕುರಿತು ಕುರಂಗರಾಜ ವೈಭವ ಎಂಬ ಕಾದಂಬರಿಯನ್ನು ರಚಿಸಿ ಮತ್ತು ಅದನ್ನು ನಾಟಕ ರೂಪಕ್ಕೆ ಅಳವಡಿಸಿ ಜನಪ್ರಿಯಗೊಳಿಸಿದ ಡಾ.ಓ.ನಾಗರಾಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕುರಂಗರಾಜ ಇಡೀ ಕೊರಟಗೆರೆಯ ತಳ ಸಮುದಾಯಕ್ಕೆ ಮನೋಬಲವನ್ನು ತುಂಬಿದವನು ಎಂದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸುಮಾ ಸತೀಶ್ ಸ್ಥಳೀಯ ಇತಿಹಾಸದ ಪ್ರಾಮುಖ್ಯತೆಯನ್ನು ಮನಗಾಣಿಸಿದರು.
ಈ ಕಾರ್ಯಕ್ರಮದಲ್ಲಿ ಚಕೋರದ ಸಂಚಾಲಕರಾದ ಡಾ.ನಾಗಭೂಷಣ ಬಗ್ಗನಡು, ಮಲ್ಲಿಕಾ ಬಸವರಾಜು, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಚೈತಾಲಿ ಕೆ.ಎಸ್, ರಂಗನಾಥ ಮೂರ್ತಿ, ಮುನಿರಾಜು, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಶಿವರಾಮಯ್ಯ, ಡಾ.ಲೋಕೇಶ್ ನಾಯ್ಕ, ಡಾ.ರೇಣುಕಾ, ಡಾ.ಸಿದ್ಧಗಂಗಯ್ಯ,ಡಾ.ರಮೇಶ್ ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4