ನಮ್ಮ ನಡುವೆ ಇರುವ ಮೌಢ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ವಿಮರ್ಶೆಯ ಪ್ರಜ್ಞೆ ಬೆಳೆಸಿಕೊಳ್ಳಲು ಕುವೆಂಪು ಸಾಹಿತ್ಯ ಪೂರಕವಾಗಿದೆ ಎಂದು ಸಾಹಿತಿ ಡಾ.ಎಚ್.ಟಿ. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಿಂದ ಏರ್ಪಡಿಸಿದ್ದ ದೇವಂಗಿ ಡಿ.ಆರ್.ರತ್ನಾಕರ ದತ್ತಿ ಕಾರ್ಯಕ್ರಮದಲ್ಲಿ ಕುವೆಂಪು ಅವರ ಸಾಹಿತ್ಯದಲ್ಲಿ ವೈಜ್ಞಾನಿಕ ದೃಷ್ಟಿಕೋನ ವಿಷಯದ ಕುರಿತು ಮಾತನಾಡಿದರು.
ಕುವೆಂಪು ಮೌಢ್ಯ ವಿರೋಧದ ಪ್ರತೀಕ. ಧರ್ಮ, ದೇವರು, ಪುರೋಹಿತ, ರಾಜಕೀಯ, ಹೆಣ್ಣು, ಗಂಡು ಭಾಷೆ, ಸಾಮಾಜಿಕ, ಜಾತಿ, ಸಾಂಸ್ಕೃತಿಕ ಸೇರಿದಂತೆ ಎಲ್ಲ ವಲಯಗಳಲ್ಲಿ ಮೌಡ್ಯಗಳನ್ನು ವಿರೋಧಿಸಿದವರು. ತಮ್ಮ ನಡೆಯಿಂದ ಎದುರಾಗುವ ಯಾವ ವಿರೋಧವನ್ನೂ ಲೆಕ್ಕಿಸದೆ ಜಗತ್ತಿನ ಉನ್ನತೀಕರಣ ಬಯಸುತ್ತಿದ್ದರು ಎಂದು ಹೇಳಿದರು.
ವಿಶ್ವಮಾನ್ಯ ವ್ಯಕ್ತಿತ್ವ ಹೊಂದಿದ್ದ ಕುವೆಂಪು, ವೈಚಾರಿಕ ನೆಲೆಗಳಲ್ಲಿ ಮಾತನಾಡುತ್ತಾ ಮೌಡ್ಯಕ್ಕೆ ಪರಿಹಾರವೇನು ಎನ್ನುವುದನ್ನು ತಿಳಿಸಿಕೊಟ್ಟರು. ಯಾವುದನ್ನೂ ಪ್ರಶ್ನಿಸದೆ ಒಪ್ಪಬೇಡಿ. ವಿಮರ್ಶಕ ಪ್ರಜ್ಞೆ ಕಳೆದುಕೊಳ್ಳಬಾರದು. ಎಷ್ಟು ದೇವರ ಪೂಜಿಸಿದರೇನು ನಿನ್ನ ನೀ ಅರಿಯದೊಡೆ ಏನು ಪ್ರಯೋಜನ. ಪುಸ್ತಕ ಜ್ಞಾನವಲ್ಲ, ಅದರೊಳಗಿನ ವಿಚಾರಗಳನ್ನು ಅರಗಿಸಿಕೊಂಡಾಗ ಜ್ಞಾನದ ಅರಿವಾಗುತ್ತದೆ ಎಂಬುದು ಕುವೆಂಪು ಅವರ ವಿಚಾರಗಳಾಗಿದ್ದವು ಎಂದರು.


