ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ, ತೋವಿನಕೆರೆ, ಕೋಳಾಲ ಹೋಬಳಿ ವ್ಯಾಪ್ತಿಯ ಗಡಿ ರಸ್ತೆಗಳು ಸೇರಿದಂತೆ ಗ್ರಾಮೀಣ ಭಾಗದ ಹಲವು ರಸ್ತೆಗಳು ತೀವ್ರ ಹದಗೆಟ್ಟಿವೆ.
ಹೊಳವನಹಳ್ಳಿ– ಬೊಮ್ಮಲದೇವಿಪುರ ಸಂಪರ್ಕ ರಸ್ತೆ ಮತ್ತು ಅಕ್ಕಾಜಿಹಳ್ಳಿಯಿಂದ ಬೈರೇನಹಳ್ಳಿ ಸಂಪರ್ಕಿಸುವ ರಸ್ತೆ ಅಲ್ಲಲ್ಲಿ ಸಂಪೂರ್ಣ ಹಾಳಾಗಿದೆ. ಇದು ತಾಲ್ಲೂಕಿನ ಗಡಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಾಗಿದ್ದು, ಅಭಿವೃದ್ಧಿ ಕಾಣದ ಈ ಭಾಗದ ಜನರು ನಿತ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ತೋವಿನಕೆರೆ–ಚಿಕ್ಕತೊಟ್ಟುಕೆರೆ ಸಂಪರ್ಕಿಸುವ ರಸ್ತೆಯ ಕುಚ್ಚಂಗಿ ಗೇಟ್ ಬಳಿ ರೈಲ್ವೆ ಕಾಮಗಾರಿ ಸ್ಥಗಿತಗೊಂಡಿರುವ ಸ್ಥಳದಲ್ಲಿ ರಸ್ತೆ ತೀವ್ರ ಹಾಳಾಗಿದೆ. ಮೊಣಕಾಲು ಉದ್ದದ ಗುಂಡಿಗಳು ಬಿದ್ದು ನೀರು ತುಂಬಿಕೊಂಡು ಕೆರೆಯಂತಾಗಿರುವ ರಸ್ತೆಯಲ್ಲಿ ಜನ ಮತ್ತು ವಾಹನಗಳ ಓಡಾಟಕ್ಕೆ ತೀವ್ರ ಅಡಚಣೆಯಾಗಿದೆ.
ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿದ್ದು, ಮಳೆ ಬಂದಾಗ ಈ ಪ್ರದೇಶಗಳಲ್ಲಿ ನೀರು ನಿಲ್ಲುವುದರಿಂದ ರಸ್ತೆ ಮುಚ್ಚಿಹೋಗುತ್ತದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಮತ್ತು ಇತರ ವಾಹನ ಚಾಲಕರು ಅಪಘಾತಗಳಿಗೆ ಗುರಿಯಾಗುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಎರಡೂ ಕಡೆಗಳಲ್ಲೂ ಅನೇಕ ಅಪಘಾತ ನಡೆದಿದ್ದು, ಜನರು ಗಂಭೀರ ಗಾಯಗೊಂಡಿದ್ದಾರೆ.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬಿಳೇಕಲ್ಲಹಳ್ಳಿ, ಕರಿಚಿಕ್ಕನಹಳ್ಳಿ ಬಳಿ ರಸ್ತೆ ತೀವ್ರ ಹದಗೆಟ್ಟ ಪರಿಣಾಮ ರಾತ್ರಿ ಸಮಯದಲ್ಲಿ ರಸ್ತೆ ಗುಂಡಿ ಕಾಣದೆ ವಾಹನ ಅಪಘಾತಕ್ಕೀಡಾದ ನಿದರ್ಶನಗಳಿವೆ.
ತೊಂಡೇಬಾವಿಯಲ್ಲಿರುವ ಸಿಮೆಂಟ್ ಕಾರ್ಖಾನೆಯಿಂದ ಬರುವ ಭಾರೀ ಲಾರಿಗಳು ನಿಯಮ ಮೀರಿ ಈ ರಸ್ತೆಗಳಲ್ಲಿ ಸಂಚರಿಸುವುದರಿಂದ, ಕೆಲವೇ ವರ್ಷಗಳಲ್ಲಿ ರಸ್ತೆಗಳು ಹಾಳಾಗಿವೆ. ರಸ್ತೆ ಗುಣಮಟ್ಟ ಕಳಪೆಯಿದ್ದು, ಭಾರಿ ವಾಹನಗಳ ಒತ್ತಡದಿಂದ ರಸ್ತೆಗಳು ಬೇಗನೆ ಹಾಳಾಗುತ್ತಿವೆ ಎಂದು ಇಲ್ಲಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರಟಗೆರೆ-ಮಧುಗಿರಿ ರಾಷ್ಟ್ರೀಯ ಹೆದ್ದಾರಿಯ ತುಂಬಾಡಿ ಬಳಿಯ ಟೋಲ್ ಬಳಿ ರಸ್ತೆ ಸಹ ತೀವ್ರ ಹಾಳಾಗಿದೆ. ಟೋಲ್ ತೆರವು ಮಾಡಿದ ನಂತರ ಅಲ್ಲಿ ಇದ್ದ ಪರಿಕರಗಳನ್ನು ಸ್ಥಳಾಂತರಿಸುವಾಗ ಅಗೆದ ರಸ್ತೆಯನ್ನು ಪುನಃ ನಿರ್ಮಿಸದೇ ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ಆ ಪ್ರದೇಶದಲ್ಲಿ ಅನೇಕ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.
ತಾಲ್ಲೂಕಿನ ಹೃದಯ ಭಾಗ ಹಾಗೂ ಆಡಳಿತ ಕೇಂದ್ರವಾದ ತಾಲ್ಲೂಕು ಕಚೇರಿ ಮುಂಭಾಗದ ಮಧುಗಿರಿ–ಕೊರಟಗೆರೆ ಮುಖ್ಯರಸ್ತೆಯಲ್ಲೆ ರಸ್ತೆ ತೀವ್ರ ಹಾಳಾಗಿದೆ. ಜೊತೆಗೆ ಪಟ್ಟಣದ ಹೊರವಲಯದ ಹುಲಿಕುಂಟೆ ಬೈಪಾಸ್ ಬಳಿ ರಸ್ತೆ ಮಧ್ಯೆ ದೊಡ್ಡ ಗುಂಡಿ ಬಿದ್ದಿದ್ದು, ನೀರಿನ ಹೊಂಡದಂತಾಗಿದೆ. ಇದರಿಂದ ರಸ್ತೆ ಸರಿಯಾಗಿ ಕಾಣದ ಅಪಘಾತಗಳು ಉಂಟಾಗುತ್ತಿವೆ. ತಾಲ್ಲೂಕು ಕಚೇರಿ ಹಿಂಭಾಗದ ವಸತಿ ಕೇಂದ್ರ, ಪೊಲೀಸ್ ಠಾಣೆ ಸೇರಿದಂತೆ ಇತರೆ ಕಚೇರಿಗಳಿಗೆ ಹೋಗುವ ರಸ್ತೆಗಳು 90ರ ದಶಕದಲ್ಲಿ ನಿರ್ಮಾಣ ಮಾಡಲಾಗಿದೆ. ತದನಂತರ ಅವುಗಳನ್ನ ಅಭಿವೃದ್ಧಿಪಡಿಸಿಲ್ಲ. ಇದರಿಂದ ತಾಲ್ಲೂಕು ಕಚೇರಿ ಪಕ್ಕದ ಕೃಷಿ ಇಲಾಖೆ, ವಸತಿ ಸಮುಚ್ಛಯಗಳಿಗೆ ಹೋಗುವ ರಸ್ತೆ ಹೊಂಡ ಬಿದ್ದು ಕೆಸರಿನ ಗದ್ದೆಯಾಗಿವೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಗೃಹ ಸಚಿವರೂ ಆಗಿರುವ ಕ್ಷೇತ್ರದ ಶಾಸಕರು ಈ ಬಗ್ಗೆ ಗಮನ ಹರಿಸುತ್ತಾರಾ ಎಂದು ಕಾದುನೋಡಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



