ತಿಪಟೂರು: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ದಿವಂಗತ ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜ್ ಅರಸುರವರ 110 ನೇ ಜನ್ಮ ದಿನೋತ್ಸವ ಅಂಗವಾಗಿ ಅರಣ್ಯ–ಬಗರ್ ಹುಕುಂ ಸಾಗುವಳಿದಾರರಿಗೆ “ಒನ್ ಟೈಮ್ ಸೆಟಲ್ ಮೆಂಟ್” ಮೂಲಕ “ಭೂಮಿ–ವಸತಿ” ಹಕ್ಕು ಮಾನ್ಯ ಮಾಡುವ “ಸಾಮಾಜಿಕ ನ್ಯಾಯ”ಕ್ಕಾಗಿ ಆಗ್ರಹಿಸಿದೆ.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಸ್ವಾತಂತ್ರ್ಯ ಪೂರ್ವದಿಂದಲೂ ಭೂಮಿಯ ಕನಸು ಕಂಡ ಅದೆಷ್ಟೋ ಜೀತಗಾರರು…. ಇನ್ನೊಬ್ಬರ ಭೂಮಿಯನ್ನೇ ಆಧರಿಸಿ ಗೇಣಿಯಲ್ಲೇ ಜೀವನ ಕಳೆದವರು ಒಪ್ಪತ್ತು ಊಟಕ್ಕಾಗಿಯೇ ಬದುಕು ಸವೆಸುತ್ತಿದ್ದ ಬಡ ಕೂಲಿಕಾರರು….ಇಂಥಹ ಬದುಕಿಗೆ ತರೆ ಎಳೆದು “ಉಳುವವನೇ ಭೂ ಒಡೆಯ” ಕಾನೂನು ಜಾರಿ ಮಾಡುವ ಮೂಲಕ, ಅಂದಿನ ಜನ ಹೋರಾಟಗಳ ಒತ್ತಡದಿಂದಲೂ ಲಕ್ಷಾಂತರ ದಲಿತ-ಹಿಂದುಳಿದ ಸಮುದಾಯಗಳಿಗೆ ಭೂಮಿ ಹಕ್ಕು ದೊರೆಕಿಸಿ ಕೊಟ್ಟ ಕೀರ್ತಿ ಅಂದಿನ ಕಾಂಗ್ರೆಸ್ ಸರ್ಕಾರದ ಕರ್ನಾಟಕ ಮುಖ್ಯ ಮಂತ್ರಿಗಳಾಗಿದ್ದ ದಿವಂಗತ ಡಿ.ದೇವರಾಜ್ ಅರಸ್ ರವರಿಗೆ ಸಲ್ಲುತ್ತದೆ. ರಾಜ್ಯದಲ್ಲಿ ಭೂಸುದಾರಣಾ ಕಾಯ್ದೆಗೆ ತಿದ್ದುಪಡಿಯ ಮೂಲಕ ಉಳುವವನೇ ಭೂ ಒಡೆಯ ಜಾರಿ ಕಾನೂನುಗಳ ಮೂಲಕ ಒಂದಷ್ಟು ಭೂಮಿ ದೊರಕಿತಾದರೂ ಇನ್ನು ಅಷ್ಟೇ ಸಂಖ್ಯೆಯಲ್ಲಿ ಹಲವು ದಶಕಗಳ ಕಾಲದಿಂದಲೂ ನೆನೆಗುದಿಗೆ ಬಿದ್ದಿರುವ ಬಗರ್ ಹುಕುಂ ಸಾಗುವಳಿದಾರರ ಭೂಮಿ ಹಕ್ಕಿಗಾಗಿನ ಹೋರಾಟವು ಮುಂದುವರೆದೇ ಇದೆ. ಆಗ ಭೂಮಿಗಳ ಒಡೆತನ ಭೂಮಾಲೀಕರಾಗಿದ್ದರು.. ಈಗ “ಬಗರ್ ಹುಕುಂ ಸಾಗುವಳಿದಾರರ ಮಾಲೀಕರು ಸರ್ಕಾರವಾಗಿದೆ….” ಈಗಲೂ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಭೂ ಒಡೆಯರು ಬದಲಾಗಿದ್ದಾರೆ ಎಂದು ತಿಳಿಸಿದರು.
ಬಡವರಿಗೆ ಭೂಮಿ ಎಂದರೆ ನೂರೆಂಟು ಕಥೆಕಟ್ಟುವ ಸರ್ಕಾರ ಕಾಸ್ಪೋರೇಟ್ ಕಂಪನಿಗಳಿಗೆ ಯಾವ ನೀತಿಯೂ ಇಲ್ಲದಂತೆ ಕಂಡಲ್ಲಿ, ಕೇಳಿದಲ್ಲಿ ಭೂಮಿ ನೀಡುವ ಕಾನೂನು ಜಾರಿ ಮಾಡುತ್ತಿದೆ. ಕೇಂದ್ರದ ಮೋದಿ ಸರ್ಕಾರ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಭೂಮಿ ವಿಚಾರದಲ್ಲಿ ಅತ್ಯಂತ ಜನ ವಿರೋಧಿಯಾಗಿ ಕಾರ್ಪೋರೇಟ್ ಪರವಾಗಿ ಟೊಂಕಕಟ್ಟಿ ನಿಂತು ರೈತ ಸಮೂಹವನ್ನೆ ನಾಶ ಮಾಡಲು ಹೊರಟಿದೆ. ಹಿಂದೆ ಇದ್ದ ಜನಕಲ್ಯಾಣದ ನೀತಿಯಿಂದ ಹಿಂದೆ ಸರಿದಿರುವ ಸರ್ಕಾರಗಳು ಕುಂಟು ನೆಪಗಳನ್ನು ಹೇಳುತ್ತಾ ಬಡ ಜನರ ಭೂಮಿಯ ಕನಸಿಗೆ ತಣ್ಣೀರೆರಚುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸರ್ಕಾರದ ಲೆಕ್ಕದಲ್ಲೇ 33 ಲಕ್ಷಕ್ಕೂ ಹೆಚ್ಚು ಅರ್ಜಿಗಳಿದ್ದು ಇದರಲ್ಲಿ ಶೇ.90ರಷ್ಟು ಜನರಿಗೆ ಅರ್ಜಿಗಳ ವಿಲೇವಾರಿ ಹೆಸರಲ್ಲಿ ತಿರಸ್ಕರಿಸಲಾಗಿದೆ. ಅಂದರೆ ಭೂಮಿಯನ್ನು ಕೊಡುವುದಕ್ಕೆ ಭೂ ಕಾಯ್ದೆಯನ್ವಯ ಕಾನೂನು ತೊಡಕುಗಳಿವೆ ಎಂದು ಅಧಿಕಾರಿಗಳು. ಹೇಳುತ್ತಿದ್ದಾರೆ. ಕೊಡಬೇಕಾದ ಭೂಮಿಗಳನ್ನೂ ಕೊಡುತ್ತಿಲ್ಲ. ಹಿಂದೆ ಭೂಸುಧಾಣಾ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಲಕ್ಷಾಂತರ ಜನರಿಗೆ ಜೀವನದ ಆಸರೆ ನೀಡಿದ ಸರ್ಕಾರ ಇಂದು ಕಾನೂನುಗಳನ್ನು ಮುಂದೆ ಮಾಡಿ ಬಗರ್ ಹುಕುಂ ಸಾಗುವಳಿದಾರರ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ರಾಜ್ಯದಲ್ಲಿ ಕೆಲ ಭಾಗಗಳಲ್ಲಂತೂ ಬ್ರಿಟೀಷರ ಕಾನೂನುಗಳ ಮಾನದಂಡದವನ್ನೇ ಪಾಲಿಸಲಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆಯಿದ್ದರೂ ಅದನ್ನು ಜಾರಿ ಮಾಡದೆ ಅರಣ್ಯ ಅಧಿಕಾರಿಗಳು ಪರಿಸರದ ಹೆಸರಲ್ಲಿ ಜನರಲ್ಲಿ ಅರಣ್ಯ ಎಂದರೆ ಮಾರುದ್ದ ಓಡಿ ಹೋಗುವ ಗುಮ್ಮನನ್ನಾಗಿ ಮಾಡಿ ಆರಣ್ಯ ಹಕ್ಕು ಕಾಯ್ದೆ ಅನ್ವಯ ಆದಿವಾಸಿಗಳಿಗೆ ಇನ್ನಿತರೆ ಜನ ಸಮುದಾಯಗಳಿಗೆ ಸಂವಿಧಾನ ಬದ್ದ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಕಾನೂನು ಬದ್ಧವಾಗಿರುವ ಅರಣ್ಯ ಹಕ್ಕು ಕಾಯ್ದೆಯನ್ನು ನಿರ್ಜೀವಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ, ಗೋಮಾಳ, ಹುಲ್ಲುಬನಿ, ಖರಾಬ್, ಖಾರೀಜ್ ಖಾತಾ, ಸೊಪ್ಪಿನ ಬೆಟ್ಟ, ಹರಳು ಪ್ರದೇಶ, ಗುಡ್ಡ ಪ್ರದೇಶ, ಕಲ್ಲು ಪ್ರದೇಶ, ಸೇಂದಿವನ, ಕಾವಲು, ಅಮೃತ ಮಹಲ್ ಕಾವಲು, ಬಾಣೆ, ಪೈಸಾರಿ, ಅರಣ್ಯ, ಸಾಮಾಜಿಕ ಅರಣ್ಯ, ಲ್ಯಾಂಡ್ ಬ್ಯಾಂಕ್ ಇನ್ನಿತರೆ ಹೆಸರಿನಲ್ಲಿರುವ ಈ ಎಲ್ಲಾ ಭೂಮಿಗಳಿಗೆ ಇವುಗಳ ಉಪಯೋಗದ ಬಗ್ಗೆ ಅದರದೇ ಆದ ಕಾನೂನುಗಳನ್ನು ರೂಪಿಸಲಾಗಿದೆ. ಈಗಿನ ಸರ್ಕಾರದ ಲೆಕ್ಕಾಚಾರದ ಪ್ರಕಾರ ಕಾನೂನಿನಂತೆ ಮೇಲಿನ ಯಾವ ಭೂಮಿಗಳನ್ನೂ ಫಾರಂ ನಂ. 50. 53. 57 ರಲ್ಲಿ ಸಲ್ಲಿಸಿರುವ ಅರ್ಜಿದಾರರಿಗೆ ಭೂಮಿಯುನ್ನು ಮಂಜೂರಾತಿ ನೀಡಲು ಸಾಧ್ಯವಿಲ್ಲ ಎಂದರು.
ಈ ಭೂಮಿಗಳನ್ನು ರಕ್ಷಿಸಲು ಮಾತ್ರ ‘ಕಾಯ್ದೆಗಳ ಬೇಲಿಗಳಿವೆ?
ಬಡವರಿಗೆ ಭೂಮಿ ಮಂಜೂರಾತಿ ಮಾಡಲು ಕಾನೂನಿನ ತೊಡಕುಗಳಿವೆಯಾದರೂ ಕಾಲ್ಲೋರೇಟ್ ಕಂಪನಿಗಳಿಗೆ, ಶ್ರೀಮಂತರಿಗೆ, ಉದ್ಯಮಿಗಳಿಗೆ ‘ಭೂಮಿ ದಾಟಲು ಕಾನೂನು’ ಗಳಿವೆ…?! ಆದ್ದರಿಂದ ಬಡವರು ಭೂಮಿಯ ಹಕ್ಕನ್ನು ಹೊಂದಲು ಸಾಧ್ಯವಾಗುತ್ತಿಲ್ಲ, ಜೀತ ಮಾಡಿದ ಜೀವಗಳು, ಉಳ್ಳವರ ಮನೆಗಳಲ್ಲಿ ಒಕ್ಕಲಿದ್ದು, ಜೀವ ಸವೆಸಿದವರು.. ಇದು ಸ್ವತಂತ್ರ್ಯ ಭಾರತದ ದಲಿತರು, ಅಲೆಮಾರಿ. ಹಿಂದುಳಿದ ವರ್ಗಗಳಿಗೆ ದೊರೆತಿರುವ ಸ್ವಾತಂತ್ರ್ಯ..? ಸಾಗುವಳಿ ಮಾಡಲು ಯೋಗ್ಯವಲ್ಲದ ಭೂಮಿಗಳಲ್ಲಿ ಲಕ್ಷಾಂತರ ಜನರು ಕಲ್ಲು-ಮುಳ್ಳು ತೆಗೆದು ಬದುಕಿಗಾಗಿ ಭೂಮಿಯನ್ನು ಹಸನುಗೊಳಿಸಿಕೊಂಡಿದ್ದಾರೆ. ಮಾತ್ರವಲ್ಲ, ಭೂಗಳ್ಳರಿಂದ ಸರ್ಕಾರದ ಒಡೆತನದಲ್ಲಿರುವ ಲಕ್ಷಾಂತರ ಭೂಮಿಯನ್ನು ರಕ್ಷಿಸಿಕೊಂಡು ಬಂದಿದ್ದಾರೆ. ಈ ತುಂಡು ಭೂಮಿಗಾಗಿ ಬದುಕಿನ ಕನಸು ಕಟ್ಟಿಕೊಂಡ ಎಷ್ಟೋ ಜೀವಿಗಳು ಬೆವರು-ರಕ್ತ ಸುರಿಸಿದ್ದಾರೆ.. ಈಗ ಭೂಮಿಯ ಮಾಲೀಕರು ಸರ್ಕಾರವಂತೆ…!? ತಲಾ ತಲಾಂತರಗಳಿಂದ ಬಹುತೇಕ ಭೂಮಿ ವಂಚಿತ ಆದಿವಾಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲೆಮಾರಿ ಮತ್ತು ಹಿಂದುಳಿದ ಸಮುದಾಯಗಳು ಭೂಮಿಯ ಒಡೆತನದ ಕನಸು ಕಾಣುತ್ತಲೇ ಇದ್ದಾರೆ. ರಾಜಕೀಯ ಪಕ್ಷಗಳು ಇಲ್ಲಿಯವರೆಗೂ ಬಡವರಿಗೆ ಭೂಮಿಯ ಕನಸು ಕಾಣಿಸುತ್ತಾ ಓಟು ಬ್ಯಾಂಕ್ ಮಾಡಿಕೊಳ್ಳುವ ಪರಿಪಾಟವನ್ನು ಬದಲಾಯಿಸಿ ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜ್ ಅರಸು ರವರ 110 ನೇ ಜನೋತ್ಸವ ಕಾರ್ಯಕ್ರಮ ಆಚರಿಸುತ್ತಿರುವ ಸರ್ಕಾರ ನಿಜವಾದ ಕಾಳಜಿಯ ತೋರಿಸುವ ಮೂಲಕ ಬಡವರ ಪರವಾಗಿ ಧ್ವನಿಗೂಡಿಸಿ “ಉಳುವವನೇ ಭೂ ಒಡೆಯ” ನೀತಿಯನ್ನು ಜಾರಿ ಮಾಡಿದಂತೆ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸರ್ಕಾರವಾಗಿ “ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿರುವ ಭೂರಹಿತರಿಗೆ ಭೂ ಮಂಜೂರಾತಿ” ನೀಡಲು ಒನ್ ಟೈಮ್ ಸೆಟಲ್ಮೆಂಟ್ ಜಾರಿ ಮಾಡುವ ಮೂಲಕ ಬಡವರಿಗೆ ನ್ಯಾಯ ದೊರಕಿಸಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಖಜಾಂಚಿ ರಂಗಚಾರಿ, ಕೆ.ಮರಿಯಪ್ಪ, ಜಿಲ್ಲಾ ಸಮಿತಿಯ ತಿಪಟೂರು ಕೃಷ್ಣ, ಮುಖಂಡ ಬಜಗೂರು ಮಂಜುನಾಥ್, ಶಂಕರಪ್ಪ, ನಿಂಗರಾಜ್, ದಯಾನಂದ ಮತ್ತಿತ್ತರು ಭಾಗವಹಿಸಿದ್ದರು
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC