ತಿಪಟೂರು: ತಾಲ್ಲೂಕಿನ ಹಳೇಪಾಳ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯ ಪ್ರಯುಕ್ತ ಜನಜಾಗೃತಿ ಕಾರ್ಯಕ್ರಮದಡಿಯಲ್ಲಿ ಶಾಲಾ ಮಕ್ಕಳಿಗೆ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜನಜಾಗೃತಿ ವೇದಿಕೆ ಸದಸ್ಯರಾದ ಶ್ಯಾಮಸುಂದರ್, ಈಗಿನ ಯುವ ಪೀಳಿಗೆ ಹಾಗೂ ವಿದ್ಯಾರ್ಥಿಗಳು ತಾವು ಸ್ವತಂತ್ರರು ಎಂಬ ಕುರುಡು ಭಾವನೆಗಳಿಗೊಳಪಟ್ಟು ಗಾಂಜಾ, ಹೆರಾಯಿನ್, ಬ್ರೌನ್ ಶುಗರ್ ಹಾಗೂ ಸಿಂಥಟಿಕ್ ಡ್ರಗ್ಸ್ ಗಳಂತ ಮಾಹಾಮಾರಿ ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ದೈಹಿಕ ಹಾಗೂ ಮಾನಸಿಕ ಸ್ಥಿಮಿತಗಳನ್ನು ಕಳೆದುಕೊಳ್ಳುವುದರೊಟ್ಟಿಗೆ, ಆರ್ಥಿಕವಾಗಿ ದಿವಾಳಿಯಾಗುವುದರೊಟ್ಟಿಗೆ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಿ ತಮ್ಮ ಅತ್ಯಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕು ಯೋಜನಾಧಿಕಾರಿ ಉದಯ್ ಕೆ. ಮಾತನಾಡಿ, ಸಾಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಎಲ್ಲಾ ವಿಭಾಗದಲ್ಲಿಯೂ ರಾಜ್ಯದ ಜನತೆಯ ಒಳಿತಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಲೇ ಬಂದಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖ 48 ಕಾರ್ಯಕ್ರಮಗಳಲ್ಲಿ ಮದ್ಯವರ್ಜನ ಶಿಬಿರ ಹಾಗೂ ಮಾದಕ ವಸ್ತು ವಿರೋಧಿ ಕಾರ್ಯಕ್ರಮಗಳು ಬಹುಮುಖ್ಯವಾದ ಸ್ಥಾನದಲ್ಲಿರುತ್ತವೆ. ದಯವಿಟ್ಟು ಈಗಿನ ಯುವಪೀಳಿಗೆ ಯಾವುದೇ ಕಾರಣಕ್ಕೂ ಮಾದಕ ವಸ್ತುಗಳಿಗೆ ದಾಸರಾಗಬೇಡಿ, ಇದರಿಂದ ನಿಮ್ಮ ಆರೋಗ್ಯದೊಟ್ಟಿಗೆ ನಿಮ್ಮ ಕುಟುಂಬದ ನೆಮ್ಮದಿ ಹಾಳಾಗುವುದು ಶತಸಿದ್ದ. ನಮ್ಮ ಭಾರತದ ಸರಿಸುಮಾರು 80 ಲಕ್ಷ ಮಂದಿ ಈ ಮಾದಕ ವಸ್ತುಗಳ ಬಳಕೆಯಿಂದ ಅನೇಕ ಖಾಯಿಲೆಗಳಿಗೆ ತುತ್ತಾಗಿ ಗಂಭೀರ ಹಂತಕ್ಕೆ ತಲುಪಿದ್ದಾರೆ ಎಂದರು.
ಕಾರ್ಯಕ್ರಮದ ಅಂತಿಮ ಹಂತದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾದ್ಯಾಯರಾದ ತೇಜಸ್ವಿ, ಶಾಲಾ ಶಿಕ್ಷಕರು, ವಲಯ ಮೇಲ್ವಿಚಾರಕ ಜಯಪ್ರಸಾದ್, ಸೇವಾಪ್ರತಿನಿಧಿ ಭಾರತಿ ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW