ಶಿರಾ: ತಾಲ್ಲೂಕಿನ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮದಲ್ಲಿದ್ದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಲಾಗುತ್ತಿದ್ದು, ಇದು ನೇರವಾಗಿ ಗ್ರಾಹಕರ ಮೇಲೆ ಪರಿಣಾಮ ಬೀರಿದೆ.
ಸಿಲಿಂಡರ್ಗಾಗಿ ಗ್ರಾಹಕರು ಬೆಳಿಗ್ಗೆ 6 ಗಂಟೆಯಿಂದಲೇ ಗ್ಯಾಸ್ ಏಜೆನ್ಸಿಗಳ ಮುಂದೆ ಖಾಲಿ ಸಿಲಿಂಡರ್ ಹಿಡಿದು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ದಿನವಿಡೀ ಕಾಯುವಂತಾಗಿದ್ದರೂ ಸಿಲಿಂಡರ್ ಸಿಗದೆ ನಿರಾಸೆಯಿಂದ ಮರಳುವಂತಾಗಿದೆ.
ನಗರದಲ್ಲಿರುವ ಎರಡು ಏಜೆನ್ಸಿಗಳ ಪೈಕಿ ಒಂದು ಏಜೆನ್ಸಿಯಲ್ಲಿ ಯಾವುದೇ ತೊಂದರೆ ಇಲ್ಲದಿದ್ದರೂ, ಮತ್ತೊಂದು ಏಜೆನ್ಸಿಯಲ್ಲಿ ತೀವ್ರ ಅಭಾವ ಕಂಡುಬಂದಿದೆ. “ಮನೆಗಳಿಗೆ ಸರಬರಾಜು ಮಾಡುವ ಬದಲು ಗೋದಾಮಿನ ಬಳಿಯೇ ವಿತರಿಸುತ್ತಿರುವುದು ಏಕೆ?” ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.
ಏಜೆನ್ಸಿ ಮೂಲಗಳ ಪ್ರಕಾರ, ಈಗಾಗಲೇ 2,500ಕ್ಕೂ ಹೆಚ್ಚು ಬುಕ್ಕಿಂಗ್ ಗಳು ಬಾಕಿ ಇವೆ. ಆದರೆ ಕೇವಲ 525 ಸಿಲಿಂಡರ್ ಗಳು ಮಾತ್ರ ಪೂರೈಕೆಯಾಗಿವೆ. ಮನೆಯಲ್ಲಿ ಹೆಚ್ಚುವರಿ ಸಿಲಿಂಡರ್ ಇದ್ದರೂ ಮುಂಜಾಗ್ರತೆಯಾಗಿ ಗ್ರಾಹಕರು ಹೊಸ ಸಿಲಿಂಡರ್ ಗಾಗಿ ಬರುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
ಸಿಲಿಂಡರ್ ಬುಕ್ಕಿಂಗ್ ವ್ಯವಸ್ಥೆಯೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ. ಇದರಿಂದಾಗಿ ನೇರವಾಗಿ ಏಜೆನ್ಸಿಗೆ ಧಾವಿಸುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ.
ಹಬ್ಬದ ಅಡುಗೆ ತಯಾರಿಗೆ ಸಿಲಿಂಡರ್ ಅತ್ಯಗತ್ಯವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಪೂರೈಕೆ ಸುಗಮಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


