ಮಧುಗಿರಿ: ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗುತ್ತಿದ್ದು, ಪಟ್ಟಣದಾದ್ಯಂತ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಭಾರೀ ಅನಾನುಕೂಲವಾಗುತ್ತಿದೆ. ಸಂತೆ ಮೈದಾನದಲ್ಲಿ ನೀರು ನಿಲ್ಲುವುದರಿಂದ ಮಹಿಳೆಯರು ವ್ಯಾಪಾರದ ವೇಳೆ ಜಾರಿ ಬಿದ್ದಿರುವುದು, ಬೀದಿದೀಪ ನಿರ್ವಹಣೆ ನಿರ್ಲಕ್ಷ್ಯ, ರಾಜೀವ್ ಗಾಂಧಿ ಕ್ರೀಡಾಂಗಣ ಕೆಸರುಗದ್ದೆಯಾಗಿರುವುದರಿಂದ ವಾಯುವಿಹಾರಿಗಳಿಗೆ ಮತ್ತು ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿದೆ ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟ ದೂರಿದೆ.
ಈ ಸಂಬಂಧ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಅಕ್ಟೋಬರ್–21ರಂದು ”ಮಧುಗಿರಿ ಬಂದ್” ಕರೆ ನೀಡಲಾಗುತ್ತಿದೆಂದು ಸೋಮವಾರ ಪಟ್ಟಣದಲ್ಲಿ ಪದಾಧಿಕಾರಿಗಳು ದ್ವಿಚಕ್ರವಾಹನದಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಕಳೆದ ಹದಿನೈದು ದಿನಗಳಿಂದ ದಸರಾ ರಜೆ ಇದ್ದ ಹಿನ್ನೆಲೆಯಿಂದಾಗಿ ಶಾಲಾ ಕಾಲೇಜುಗಳು ರಜೆ ಇದ್ದವು, ಸೋಮವಾರದಿಂದ ಶಾಲಾ ಕಾಲೇಜುಗಳು ಪುನರಾರಂಭಗೊಂಡಿದ್ದು ಮಕ್ಕಳನ್ನು ಪೋಷಕರು ಶಾಲೆಗೆ ಬಿಡಲು ದ್ವಿಚಕ್ರ ವಾಹನಗಳು ಮತ್ತು ಆಟೋಗಳ ಮೂಲಕ ಬರುತ್ತಾರೆ. ಆದರೆ ಮಧುಗಿರಿ ಪಟ್ಟಣದಾದ್ಯಂತ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಅಸ್ತವ್ಯಸ್ತವಾಗುತ್ತಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಗುಂಡಿಗಳನ್ನು ಮುಚ್ಚದಿದ್ದಲ್ಲಿ ಶುಕ್ರವಾರದಂದು ಮಧುಗಿರಿ ಬಂದ್ ಗೆ ಕರೆ ನೀಡಲಾಗಿದೆ ಎಂದರು.
ಮಧುಗಿರಿ ಪಟ್ಟಣದ ಗುರು ಭವನದ ರಸ್ತೆ, ನೃಪತುಂಗಾ ವೃತ್ತ, ಕೃಷಿ ಇಲಾಖೆ ರಸ್ತೆ, ಡಬಲ್ ರೋಡ್, ಪಟ್ಟಣದ ಹಲವು ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಜತೆಗೆ ಯುಜಿಡಿ ನೀರು ಸಹ ಜಿನುಗುತ್ತಿರುವುದರಿಂದ ಅವಲಕ್ಕಿ ಮಿಲ್ ಮುಂಭಾಗ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಇನ್ನು ರಾಜರಾಜೇಶ್ವರಿ ಚಿತ್ರಮಂದಿರದ ಮುಂಭಾಗ ಶ್ರೀದಂಡಿನ ಮಾರಮ್ಮನ ದೇವಾಲಯದ ಮುಂಭಾಗ ಕೋರ್ಟ್ ಮುಂಭಾಗದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು ಇತ್ತೀಚೆಗೆ ಅಪಘಾತಗಳಾಗಿ ಕುಟುಂಬಗಳೇ ಆಸ್ಪತ್ರೆಗೆ ದಾಖಲಾಗಿರುವ ಘಟನೆಗಳು ಸಂಭವಿಸಿವೆ ಎಂದರು.
ಇನ್ನೂ ಪ್ರತಿ ಬುಧವಾರ ನಡೆಯುವ ಸಂತೆ ಮೈದಾನದಲ್ಲಿ ಮಣ್ಣು ತುಂಬಿರುವುದರಿಂದ ಜೊತೆಯಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ಇಲ್ಲಿವರೆಗೂ ಉರಿಯದ ಕಾರಣ ವ್ಯಾಪಾರ ಮಾಡುವ ಮಹಿಳೆಯರು ಜಾರಿ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸತತವಾಗಿ ನೀರು ಜಿನುಗುತ್ತಿದ್ದು ಕ್ರೀಡಾಪಟುಗಳು ನಿರಾಸೆಯಿಂದ ಪ್ರತಿನಿತ್ಯ ಹಿಂದಿರುಗುತ್ತಿದ್ದಾರೆ. ವಾಯು ವಿಹಾರಿಗಳಂತೂ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಈ ಮೇಲಿನ ಎಲ್ಲಾ ಕಾರಣಗಳಿಂದಾಗಿ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಸ್ಥಳೀಯ ಜನಪ್ರತಿನಿಧಿಗಳಂತು ಕ್ಯಾರೆ ಅನ್ನದ ಕಾರಣ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಅಕ್ಟೋಬರ್-21 ರ ಶುಕ್ರವಾರದಂದು ಮಧುಗಿರಿ ಬಂದ್ಗೆ ಕರೆ ನೀಡಲಾಗುತ್ತಿದೆ. ಅ ದಿನ ಮಿನಿವಿಧಾನ ಸೌಧದಲ್ಲಿರುವ ಶಾಸಕರ ಕೊಠಡಿಯ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಬಂದ್ ಗೆ ಆಟೋ ಚಾಲಕರು, ಹೋಟೆಲ್, ಮಾಲೀಕರು ಬಸ್ ಮಾಲೀಕರು, ಶಾಲಾ ಕಾಲೇಜು ಆಡಳಿತ ಮಂಡಳಿಯವರು, ಸಾರ್ವಜನಿಕರು ಹೆಚ್ಚಿನ ಬೆಂಬಲ ನೀಡಲಿದ್ದಾರೆಂದು ಭಾವಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಬಂದ್ ಕರೆ ನೀಡಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಮನವಿ ಸ್ವೀಕರಿಸಿ ಉಪವಿಭಾಗಾಧಿಕಾರಿ ಸೋಮಪ್ಪಕಡಕೋಳ ಮಾತನಾಡಿ, ನಾವು ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದೇವೆ. ನೀವು ನೀಡಿರುವ ಪತ್ರವನ್ನು ಸಂಬಂಧಪಟ್ಟ ಇಲಾಖೆಯವರಿಗೆ ಕಳುಹಿಸಲಾಗುವುದೆಂದು ತಿಳಿಸಿದರು.
ಮುಖ್ಯಾಧಿಕಾರಿ ಪುರಸಭೆ ಮಧುಗಿರಿ, ತಹಸೀಲ್ದಾರ್ ಮಧುಗಿರಿ ತಾಲ್ಲೂಕು .ಜಿಲ್ಲಾಧಿಕಾರಿಗಳು ತುಮಕೂರು,ಅಧ್ಯಕ್ಷರು ಕಾರ್ಯದರ್ಶಿ ಕಾನೂನು ಸೇವಾ ಪ್ರಾಧಿಕಾರ ಮಧುಗಿರಿ ರವರುಗಳಿಗೂ ಮನವಿ ಸಲ್ಲಿಸಿದ್ದಾರೆ.
ಉಪಾಧ್ಯಕ್ಷ ಎಸ್’ಟಿಡಿ ರಘು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪಾಂಡುರಂಗಯ್ಯ, ಆಟೋ ಚಾಲಕರ ಘಟಕದ ಅಧ್ಯಕ್ಷ ಗೌಡ, ಹರೀಶ್, ಹೊಯ್ಸಳ ಟ್ಯಾಕ್ಸಿ ಚಾಲಕರ ಸಂಘದ ಯೋಗೀಶ್ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಾದ ರೋಹಿತ್, ಸಿಕಂದರ್, ಪ್ರದೀಪ್, ರಾಕೇಶ್, ಸುರೇಶ್, ರಾಜ್ ಕುಮಾರ್, ಲಕ್ಷ್ಮೀಶ, ಮಹೇಶ್, ಶಿವಲಿಂಗಯ್ಯ, ಸಂತೋಷ, ನರೇಶ್ ಬಾಬು ಇದ್ದರು.
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz