ಮಧುಗಿರಿ: ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ ಪಡೆದು ಚಿಕಿತ್ಸೆ ನೀಡುತ್ತಿರುವ ಆರೋಪ ಕೇಳಿ ಬಂದಿದ್ದು, ನರ್ಸ್ ವೊಬ್ಬರು ಈ ರೀತಿಯ ಡೀಲ್ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಹೆರಿಗೆ ಮಾಡುವ ನರ್ಸ್ ಗಳಿಗೆ ಒಂದೊಂದು ಸಾವಿರ ರೂಪಾಯಿ ನೀಡಬೇಕು, ವೈದ್ಯರಿಗೆ ಎಷ್ಟು ಎಂದು ಹೇಳಿದಾಗ ಬ್ರದರ್ಸ್( ಸ್ಟಾಪ್ ನರ್ಸ್) ಬಳಿ ಮಾತನಾಡಿದರೆ, ಡೀಲ್ ಆಗ್ತಾರೆ ಎಂದು ಆ ನರ್ಸ್ ಹೇಳಿರುವ ವಿಡಿಯೋ ದೊರೆತಿದೆ.
ವ್ಯಕ್ತಿಯೊಬ್ಬರು ತಮ್ಮ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಪತ್ನಿಗೆ ಸಿಸೇರಿಯನ್ ಮಾಡಿಸಬೇಕು ಎಂದು ವೈದ್ಯರು ಹೇಳಿದ್ದಾರೆ. ಆ ವ್ಯಕ್ತಿ ಹೇಳುತ್ತಿರುವ ಪ್ರಕಾರ, ಕೆಲಸದವರಿಂದ ಹಿಡಿದು ವೈದ್ಯರವರೆಗೆ ಆಸ್ಪತ್ರೆಯಲ್ಲಿ ದುಡ್ಡು ಪಡೆದುಕೊಳ್ಳುತ್ತಾರಂತೆ, ಇದರ ಬಗ್ಗೆ ವೈದ್ಯರ ಬಳಿ ಹೇಳಿದರೆ, ಹೇಮಾವತಿ ಡಾಕ್ಟರ್ ಅವರು ನನ್ನ ಮೇಲೆ ಕೂಗಾಡಿದ್ರು ಎಂದು ವರದಿಗಾರರಿಗೆ ತಿಳಿಸಿದ್ದಾರೆ.
ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು ಸರ್ಕಾರ ಆಸ್ಪತ್ರೆಗಳನ್ನು ನೀಡಿದರೆ, ಈ ಆಸ್ಪತ್ರೆಯೊಳಗೆ ಲಂಚಾವತಾರ ನಡೆಯುತ್ತಿರುವುದು ದುರಾದೃಷ್ಟಕರವಾಗಿದೆ. ಜೊತೆಗೆ ಇಲ್ಲಿಗೆ ಬರುವ ರೋಗಿಗಳ ಬಳಿಯಿಂದ ಹಣ ವಸೂಲಿ ಮಾಡಲಾಗುತ್ತಿದ್ದರೂ, ಸಾರ್ವಜನಿಕರು, ನಮಗೇನಾದರೂ ತೊಂದರೆಯಾಗಬಹುದು ಎನ್ನುವ ಭಯದಿಂದ ಈ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಗೋಜಿಗೆ ಹೋಗುತ್ತಿಲ್ಲ ಎನ್ನುವ ಆರೋಪಗಳು ಕೂಡ ಕೇಳಿ ಬಂದಿವೆ.
ಖಾಸಗಿ ಆಸ್ಪತ್ರೆಗಳು ದುಬಾರಿ ಎಂದು ಜನರು ಸರ್ಕಾರಿ ಆಸ್ಪತ್ರೆಗಳ ಕಡೆಗೆ ಬರುತ್ತಾರೆ. ಬಡ ಜನರಿಗೆ ಕಡಿಮೆ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಬೇಕಾದ ಸಿಬ್ಬಂದಿ ಈ ರೀತಿಯಾಗಿ ಬಡವರಿಂದ ಹಣ ದೋಚುವುದಾದರೆ, ಸರ್ಕಾರಿ ಆಸ್ಪತ್ರೆ ಇದ್ದೇನು ಪ್ರಯೋಜನ ಎಂದು ಕೇಳುವಂತಾಗಿದೆ.
ಮಧುಗಿರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಈ ಭ್ರಷ್ಟಾಚಾರದ ಕುರಿತು ವಿಡಿಯೋ ಮಾಡಿ ಮಾಧ್ಯಮಗಳಿಗೆ ನೀಡಿದ ವ್ಯಕ್ತಿ ಇದೀಗ ಸಂಕಷ್ಟದಲ್ಲಿದ್ದಾರೆ. ಈ ಘಟನೆಯ ಬಳಿಕ ಆರೋಪ ಮಾಡಿರುವ ವ್ಯಕ್ತಿಯ ಪತ್ನಿಯನ್ನು ಸೆಂಟಿಮೆಂಟ್ ಆಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ನನ್ನ ಪತ್ನಿಯನ್ನು ದೂರ ಮಾಡಲು ನೋಡುತ್ತಿದ್ದಾರೆ ಎಂದು ಅಸಹಾಯಕತೆ ತೋರಿದ್ದಾರೆ. ಈ ರೀತಿಯ ಸ್ಥಿತಿಯಿರುವಾಗ ಇಂತಹ ಭ್ರಷ್ಟ್ರಾಚಾರದ ಸಂಸ್ಕೃತಿ ಕೊನೆಯಾಗುವುದು ಹೇಗೆ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ಗುಸುಗುಸು ಸಾರ್ವಜನಿಕವಾಗಿ ಈ ಹಿಂದಿನಿಂದಲೇ ಕೇಳಿ ಬರುತ್ತಿದ್ದರೂ, ಅಧಿಕಾರಿಗಳು, ಸಚಿವರು, ಜನಪ್ರತಿನಿಧಿಗಳು ಇನ್ನೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರ ಬಗ್ಗೆ ಅಧಿಕಾರಿಗಳೇ ಎಚ್ಚೆತ್ತುಕೊಂಡು, ಈ ಕೃತ್ಯದಲ್ಲಿ ಶಾಮೀಲಾಗಿರುವವರನ್ನು ಪತ್ತೆ ಹಚ್ಚಿ ಕಾನೂನಿನಡಿಯಲ್ಲಿ ಶಿಕ್ಷೆ ನೀಡಬೇಕು ಎನ್ನುವ ಒತ್ತಾಯಗಳು ಇದೀಗ ಕೇಳಿ ಬಂದಿವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತುಕೊಂಡು ಸ್ವಯಂ ಪ್ರೇರಿತರಾಗಿ ತನಿಖೆ ಕೈಗೊಂಡು ಬಡ ಜನರಿಗೆ ನಡೆಯುತ್ತಿರುವ ಅನ್ಯಾಯವನ್ನು ಸರಿಪಡಿಸಿ, ನ್ಯಾಯ ಒದಗಿಸಬೇಕಿದೆ.
ವರದಿ: ಮಂಜುಸ್ವಾಮಿ.ಎಂ.ಎನ್.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz