- ವಿವೇಕಾನಂದ. ಎಚ್.ಕೆ.
ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಭೇದವಿಲ್ಲದೆ ಬಹುತೇಕರ ಮನೆಯಲ್ಲಿ ಆಚರಿಸುವ ಒಂದು ಹಬ್ಬ… ತೀರಿಹೋದ ಹಿರಿಯರ ನೆನಪಿನಲ್ಲಿ, ಅವರ ಇಷ್ಟದ ಊಟ, ಬಟ್ಟೆ, ವಸ್ತುಗಳು ಇತ್ಯಾದಿಗಳನ್ನು ಇಟ್ಟು ಅವರಿಗೆ ಅರ್ಪಿಸಿದಂತೆ ಮಾಡಿ ನಾವೇ ಉಪಯೋಗಿಸುವುದು…!
ಜ್ಯೋತಿಷಿಗಳಂತು ಟಿವಿಗಳಲ್ಲಿ ಇದರ ಬಗ್ಗೆ ಇಲ್ಲಸಲ್ಲದ ಅನೇಕ ಮೌಢ್ಯಗಳನ್ನು ಹೇಳಿ ಜನರನ್ನು ಮತ್ತಷ್ಟು ದಿಕ್ಕು ತಪ್ಪಿಸುತ್ತಿದ್ದಾರೆ. ಪುನರ್ ಜನ್ಮ, ಆತ್ಮಗಳ ಅಲೆದಾಟ, ಶವಗಳ ಕನಸುಗಳು.. ಇನ್ನೂ ಮುಂತಾದ ಭಯಂಕರ ವಿಷಯಗಳನ್ನು ಪ್ರಸ್ತಾಪಿಸಿ ಜನರನ್ನು ಭಯಗೊಳಿಸಿ ಹಬ್ಬದ ತೀವ್ರತೆ ಹೆಚ್ಚಿಸುತ್ತಿದ್ದಾರೆ. ಒಂದೇ ಒಂದು ಟಿವಿ ವಾಹಿನಿ ವಿವೇಚನೆಯಿಂದ ಈ ಹಬ್ಬದ ವಿಮರ್ಶೆ ಮಾಡುತ್ತಿಲ್ಲ. ಊಹಾತ್ಮಕ ಮೂಡನಂಬಿಕೆಯನ್ನೇ ಮತ್ತಷ್ಟು ಆಳಕ್ಕೆ ಇಳಿಸುತ್ತಿದ್ದಾರೆ.
ಬದಲಾದ ಕಾಲಮಾನದಲ್ಲಿ ಈ ಹಬ್ಬದ ಆಚರಣೆಯನ್ನು ಮತ್ತಷ್ಟು ವಿಶಾಲ, ಸರಳ, ಅರ್ಥಪೂರ್ಣ, ಪ್ರಾಯೋಗಿಕ ಮತ್ತು ಮಾನವೀಯಗೊಳಿಸಬಹುದಾದ ಒಂದು ಸಲಹೆ ಮತ್ತು ಮನವಿ…
ವ್ಯಕ್ತಿಯ ಸಾವೇ ಆತನ ಕೊನೆ. ಬದುಕಿದ್ದಾಗ ಎಷ್ಟೇ ಪ್ರಮುಖನಾಗಿದ್ದರೂ ಉಸಿರು ನಿಂತ ನಂತರ ಆತನ ದೇಹ ಪ್ರಕೃತಿಯಲ್ಲಿ ಲೀನವಾಗುತ್ತದೆ. ಅನಂತರ ನಾವು ಮಾಡುವ ಯಾವ ಕ್ರಿಯೆಗಳು, ಚಟುವಟಿಕೆಗಳು ಅವನಿಗೆ ಅರಿವಾಗುವುದಿಲ್ಲ. ಅವೆಲ್ಲಾ ಬದುಕಿರುವವರ ಮಾನಸಿಕ ನೆಮ್ಮದಿಗಾಗಿ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳು. ಜನ್ಮ ಜನ್ಮಾಂತರ ಎಂಬುದು ಒಂದು ಸಾಂಕೇತಿಕ ಕಲ್ಪನೆ ಮಾತ್ರ.
ಹೌದು ನಿಜ, ಸತ್ತ ವ್ಯಕ್ತಿ ಅದರಲ್ಲೂ ನಮ್ಮ ತಾತ, ಅಜ್ಜಿ, ಅಪ್ಪ, ಅಮ್ಮ ಮುಂತಾದ ರಕ್ತ ಸಂಬಂಧಿಗಳು ಆಗಿದ್ದರೆ ಅವರನ್ನು, ಅವರ ಒಳ್ಳೆಯ ಆದರ್ಶ ಗುಣಗಳನ್ನು ನೆನಪಿಸಿಕೊಳ್ಳುವುದು ಮತ್ತು ಅದನ್ನು ಪಾಲಿಸುವುದು, ಬದುಕಿರುವ ಮುಂದಿನ ಪೀಳಿಗೆಯವರಿಗೆ ತಲುಪಿಸುವುದು ನಮ್ಮ ಕರ್ತವ್ಯ. ಅದರಲ್ಲಿ ಎರಡು ಮಾತಿಲ್ಲ.
ಆದರೆ ಎಂದೋ ಸತ್ತಿರುವ ನಮ್ಮ ಹಿರಿಯರ ಹೆಸರಿನಲ್ಲಿ ಅನಾವಶ್ಯಕವಾಗಿ ಅವರಿಗೆ ತಲುಪದಿರುವ ಕಾರ್ಯಗಳನ್ನು ಸಂಪ್ರದಾಯವೆಂಬತೆ ಮಾಡಿ, ಹಣ ಮತ್ತು ಸಮಯ ವ್ಯರ್ಥಮಾಡುವ ಬದಲು, ಜೀವಂತವಿರುವ ನಮ್ಮ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಚಿಕ್ಕಪ್ಪ, ದೊಡ್ಡಮ್ಮ ಮುಂತಾದ ನಮ್ಮ ಅವಲಂಬಿತರ ಬದುಕಿನ ಕೊನೆಯ ಹಂತದಲ್ಲಿರುವ ಹಿರಿಯ ಚೇತನಗಳಿಗೆ ಮಹತ್ವ ನೀಡಿ, ವೃದ್ಧಾಪ್ಯದಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವುದು ಹೆಚ್ಚು ಉಪಯುಕ್ತವಲ್ಲವೇ. ಅದರಲ್ಲೂ ಇಂದಿನ ಆಧುನಿಕ ಜೀವನದಲ್ಲಿ ನೆಮ್ಮದಿಯ ಆಶ್ರಯಕ್ಕಾಗಿ ಪರಿತಪ್ಪಿಸುತ್ತಿರುವ ನಮ್ಮ ಪೋಷಕರಿಗೆ ನೆರವಾಗುವುದು ಸತ್ತ ವ್ಯಕ್ತಿಗೆ ನಾವು ತೋರಿಸುವ ಗೌರವಕ್ಕಿಂತ ಹೆಚ್ಚು ಮಾನವೀಯವಲ್ಲವೆ..!
ಇದ್ದಾಗ ಅವರನ್ನು ಸರಿಯಾಗಿ ನೋಡಿಕೊಳ್ಳದೆ ತುಚ್ಚವಾಗಿ ಕಂಡು ಸತ್ತ ನಂತರ ಅವರಿಗಾಗಿ ಏನು ಮಾಡಿದರೇನು ಫಲ. ವಾಸ್ತವ ನೆಲೆಯಲ್ಲಿ ಆಗಿಹೋದವರನ್ನು ಮಾನಸಿಕವಾಗಿ ಗೌರವಿಸಿ ಕೃತಜ್ಞತೆ ಅರ್ಪಿಸೋಣ. ಆದರೆ ಅದರ ಜೊತೆಗೆ ನಮ್ಮೆಲ್ಲಾ ತನು, ಮನ, ಧನಗಳನ್ನು ಭೌತಿಕವಾಗಿ ನಮ್ಮೊಂದಿಗಿರುವ ನಮ್ಮ ಆತ್ಮೀಯ ಹಿರಿಯ ಜೀವಗಳಿಗೆ ಮೀಸಲಿಡೋಣ. ಈ ಹಬ್ಬವನ್ನು ಹೆಚ್ಚು ಮಾನವೀಯ, ಜೀವಪರಗೊಳಿಸೋಣ. ಇದಕ್ಕಾಗಿ ಹೆಚ್ಚು ಶ್ರಮವೇನು ಪಡಬೇಕಾಗಿಲ್ಲ. ಕೇವಲ ಒಂದು ಸಣ್ಣ ಜೀವಪರ ನಿಲುವಿನಿಂದ ಇದು ಸಾಧ್ಯ. ಸತ್ತವರ ನೆನಪುಗಳ ಸಾರ್ಥಕತೆ ಬದುಕಿರುವ ನಮ್ಮ ಅವಲಂಬಿತರ ಸೇವೆಯಲ್ಲಿ ಅಡಗಿದೆ… ಅದೇ ಮಹಾಲಯ ಅಮಾವಾಸ್ಯೆ ಹಬ್ಬ, ಅದೇ ಪಿತೃ ಪಕ್ಷದ ಪ್ರಾಮುಖ್ಯತೆ, ಅದೇ ಎಡೆ ಹಬ್ಬದ ಶ್ರೇಷ್ಠತೆ…
ಬದಲಾವಣೆ ಇಲ್ಲಿಂದಲೇ, ನಮ್ಮಿಂದಲೇ ಪ್ರಾರಂಭವಾಗಲಿ. ಮತ್ತೆ ಇದು ಹಿಂದೂ ಸಂಪ್ರದಾಯ ವಿರೋಧಿ ನಿಲುವು ಎಂದು ಭಾವಿಸದಿರಿ. ಅನುಭವದಿಂದ ಮೂಡಿದ ಸಾಂಪ್ರದಾಯಿಕ, ವೈಚಾರಿಕ ಆಚರಣೆಗಳು ಕಾಲದ ಪರೀಕ್ಷೆಯಲ್ಲಿ ಮತ್ತಷ್ಟು ಹೊಳಪು ಮೂಡಿ ಹೆಚ್ಚು ಪ್ರಯೋಜನಕಾರಿಯಾಗಲಿ ಎಂಬ ಆಶಯವಷ್ಟೆ..
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC