ಸರಗೂರು: ಶ್ರೀ ಕ್ಷೇತ್ರ ಬೇಲದ ಕುಪ್ಪೆ ಶ್ರೀ ಮಹದೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಸ್ವಾಮಿಗೆ ಪವಿತ್ರ ಗಂಗಾ ಜಲದಿಂದ ಅಭಿಷೇಕ ಮತ್ತು ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ವಿಶೇಷ ಪೂಜೆ ನಡೆಸಲಾಯಿತು.
ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಾಗೂ ಬಂಡಿಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಶ್ರೀಕ್ಷೇತ್ರ ಬೇಲದ ಕುಪ್ಪೆ ಶ್ರೀ ಮಹದೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಅರ್ಚಕರು ನುಸುಕಿನ ವೇಳೆಯಲ್ಲಿ ಮಾದೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಗಂದಾಭಿಷೇಕ, ಪುಷ್ಷಭಿಷೇಕ, ಮಹಾ ಮಂಗಳಾರತಿ ಸೇವೆಯನ್ನು ನೆರವೇರಿಸಿದ ಬಳಿಕ ಭಕ್ತರ ಧರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಮಹದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಮಜ್ಜನದ ಬಾವಿ ಬಳಿ ಬಿಂದಿಗೆಗಳನ್ನು ಒಂದೆಡೆ ಇರಿಸಿ, ಜೊತೆಯಲ್ಲಿ ಎಳನೀರನ್ನು ಒಂದೆಡೆ ಇರಿಸಿ, ಮಂತ್ರ ಘೋಷ ಸಮೇತ ಪೂಜೆ ನೆರವೇರಿಸಿದರು. ನಂತರ ಮಜ್ಜನರ ಬಾವಿಗೆ ಗಂಗಾ ಪೂಜೆ ನೆರವೇರಿಸಿ, 101 ಬಿಂದಿಗೆಗೂ ಜಲ ತುಂಬಿಸಿದರು. ಬಳಿಕ ಅಲ್ಲಿಂದ ಛತ್ರಿ ಚಾಮರಗಳನ್ನು ಒಳಗೊಂಡು, ಮಂಗಳ ವಾದ್ಯಗಳ ಸಮೇತ ಮೆರವಣಿಗೆಯಲ್ಲಿ ಎಳನೀರು ಹಾಗೂ ಜಲವನ್ನು ಹೊತ್ತು ತಂದು, ದೇವಾಲಯದ ಹೊರ ಆವರಣದಲ್ಲಿ ಪ್ರದಕ್ಷಿಣೆ ಹಾಕಿ, ದೇವಾಲಯದ ಒಳಭಾಗದಲ್ಲಿ ಒಂದೆಡೆ ಇರಿಸಿದರು. ಮತ್ತೆ ಪೂಜೆ ನೆರವೇರಿಸಿದ ಬಳಿಕ ಮಾದೇಶ್ವರ ಸ್ವಾಮಿಗೆ ಎಳನೀರು ಅಭಿಷೇಕ ಹಾಗೂ ಜಲಾಭಿಷೇಕ ಮಾಡಲಾಯಿತು.
ದೇವಸ್ಥಾನದಲ್ಲಿ ಸುತ್ತ ಹಸಿರು ತೋರಣ ಹಾಗೂ ಮುಂಭಾಗದಲ್ಲಿ ರಂಗೋಲಿ ಬಿಡಿಸಿ ಬೆಳಗಿನ ಜಾವದಿಂದಲೇ ಮಹದೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಮ-ಹವನಗಳು, ರುದ್ರಾಭಿಷೇಕ ಮಾಡಲಾಯಿತು. ಅಂಗವಾಗಿ ನದಿಗೆ ತೆರಳಿ ಗಂಗೆ ಪೂಜೆ ನಡೆಸಿ ದೇವರ ದೇವರ ಉತ್ಸವಮೂರ್ತಿ ವಿವಿಧ ಹೂವಿನಿಂದ ಅಲಂಕರಿಸಿ ಭಕ್ತರು, ದಾರಿಯುದ್ದಕ್ಕೂ ಭಕ್ತರು ಮಲೇಮಹದೇಶ್ವರನಿಗೆ ಜೈಕಾರ ಕೂಗುವ ಮೂಲಕ ದೇವರಿಗೆ ನಮಿಸಿದರು. ವಾದ್ಯಗೋಷ್ಠಿಗಳು ಮೊಳಗಿದವು. ಸತ್ತಿಗೆ ಸೂರಿಪಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಉತ್ಸವ ಮೂರ್ತಿಯು ದೇವಸ್ಥಾನದ ಬಳಿಗೆ ಬಂದ ಕೂಡಲೇ ದೇವಸ್ಥಾನ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ನಂತರ ನೂರಾರು ಭಕ್ತರು ದೇವರ ದರ್ಶನ ಪಡೆದು ಹರಕೆ ತಿರಿಸಿದರು.
ನಂತರ ಮಾತನಾಡಿದ ದೇವಸ್ಥಾನದ ಪಾರುಪತ್ತೇದಾರ ರಾಕೇಶ್ ಗೌಡ ರವರು ಮಹದೇಶ್ವರ ದೇವಸ್ಥಾನಕ್ಕೆ ಮಹಾಶಿವರಾತ್ರಿ, ಅಮಾವಾಸ್ಯೆ, ಹುಣ್ಣಿಮೆ, ಮತ್ತು ಕಾರ್ತಿಕ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆಗಳು ನಡೆಯುತ್ತವೆ. ಮುಖ್ಯವಾಗಿ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಗಂಧದ ಅಭಿಷೇಕ, ಮತ್ತು ಪುಷ್ಪಾರ್ಚನೆಗಳನ್ನು ಬೆಳಗಿನಿಂದಲೇ ಹಮ್ಮಿಕೊಳ್ಳಲಾಗುತ್ತದೆ. ಮಹಾಶಿವರಾತ್ರಿಯಂದು ವಿಶೇಷ ಜಾಗರಣೆ ನಡೆಯುತ್ತದೆ.
ಶಿವರಾತ್ರಿ ಹಬ್ಬದ ಹಾಗೂ ಅಮಾವಾಸ್ಯೆಯ ಅಂಗವಾಗಿ ಕೆಎಸ್ಸಾರ್ಟಿಸಿ 5 ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿದೆ.ಇನ್ನೂ ಮುಂದಿನ ದಿನಗಳಲ್ಲಿ ಪ್ರತಿ ದಿನ ದೇವರ ದರ್ಶನ ಪಡೆಯಲು ಅವಕಾಶ ಇರುತ್ತದೆ ಎಂದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


