ನವೆಂಬರ್ 4ರ ಶುಕ್ರವಾರ ಸಂಜೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಅಪರಿಚಿತ ವಾಹನದಿಂದ ಡಿಕ್ಕಿ ಹೊಡೆಸಿ ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿಯೋರ್ವರನ್ನು ಹತ್ಯೆಗೈಯ್ಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ ಕೊಲೆ ಕುರಿತಂತೆ ವಿಶೇಷ ತಂಡ ತನಿಖೆ ನಡೆಸುತ್ತಿತ್ತು. ತನಿಖೆ ವೇಳೆ ಕುಲಕರ್ಣಿಯವರ ಪಕ್ಕದ ಮನೆಯ ಮಾದಪ್ಪ ಮತ್ತು ಆರ್.ಎನ್.ಕುಲಕರ್ಣಿ ನಡುವೆ ಮನೆ ಕಟ್ಟುವ ವಿಚಾರವಾಗಿ ಗಲಾಟೆ ನಡೆದಿತ್ತು ಎಂಬ ಬಗ್ಗೆ ಮಾಹಿತಿ ಲಭಿಸಿತ್ತು. ಈ ಸಂಬಂಧ ವಿಶೇಷ ತಂಡ ತನಿಖೆ ಮುಂದುವರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾದಪ್ಪನ ಪುತ್ರ , ಕಟ್ಟಡ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿದ್ದ ಮನು(30) ಹಾಗೂ ಇತನ ಸ್ನೇಹಿತ ವರುಣ್ ಬಂಧಿತ ಆರೋಪಿಗಳು.
ಮನುವಿನ ಸ್ನೇಹಿತ ವರುಣ್ ಎಂಬಾತ ಆರ್.ಎನ್ ಕುಲಕರ್ಣಿ ವಾಯುವಿಹಾರಕ್ಕೆ ಬರುತ್ತಿದ್ದ ಸ್ಥಳಗಳನ್ನು ದ್ವಿಚಕ್ರವಾಹನದಲ್ಲಿ ಕರೆತಂದು ತೋರಿಸಿದ್ದು, ಇಬ್ಬರೂ ಸೇರಿ ಕೊಲೆಗೆ ಸ್ಕೆಚ್ ರೂಪಿಸಿದ್ದರು ಎನ್ನಲಾಗಿದೆ. ಮನು ತನ್ನ ತಂದೆ ಮಾದಪ್ಪನಿಗೂ ವಿಚಾರ ತಿಳಿಸದೇ ಆರ್.ಎನ್.ಕುಲರ್ಣಿಯವರ ಹತ್ಯೆಗೆ ಮುಂದಾಗಿದ್ದನು ಎನ್ನಲಾಗಿದೆ. ಸಿಸಿಟಿವಿಯಲ್ಲಿ ಆಧರಿಸಿದ ದೃಶ್ಯಗಳನ್ನು ತಪಾಸಣೆ ನಡೆಸಿದ ಪೊಲೀಸರಿಗೆ ದ್ವಿಚಕ್ರವಾಹನದಲ್ಲಿ ವ್ಯಕ್ತಿಯೋರ್ವ ಬಂದು ಸ್ಥಳ ತೋರಿಸಿರುವ ಕುರಿತು ಅನುಮಾನಗಳು ಹುಟ್ಟಿಕೊಂಡು ಠಾಣೆಗೆ ಕರೆಸಿ ತೀವ್ರ ವಿಚಾರಣೆಗೊಳಪಡಿಸಲಾಗಿ ಬಾಯ್ಬಿಟ್ಟಿದ್ದ ಎನ್ನಲಾಗಿದೆ. ಇನ್ನೂ ಕೂಡ ಪ್ರಕರಣ ಸಂಬಂಧ ತೀವ್ರ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ.
ಘಟನೆ ಹಿನ್ನೆಲೆ
ಕೇಂದ್ರ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಆರ್.ಎಸ್.ಕುಲಕರ್ಣಿ (83) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮಾನಸಗಂಗೋತ್ರಿ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ನ.4ರಂದು ಸಂಜೆ ನಡೆದಿತ್ತು. ಅವರು ಕ್ಯಾಂಪಸ್ ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ವಾಯುವಿಹಾರ ನಡೆಸುತ್ತಿದ್ದರು. ಈ ವೇಳೆ ಕಾರು ಡಿಕ್ಕಿಯಾಗಿದೆ. ಇದರಿಂದ ಗಾಯಗೊಂಡಿದ್ದ ಆರ್.ಎಸ್.ಕುಲಕರ್ಣಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಲಕರ್ಣಿ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪ ಮಾಡಿದ್ದರು. ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರು ಅಪಘಾತ ಮಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನಿವೃತ್ತ ಅಧಿಕಾರಿ ಪಕ್ಕಕ್ಕೆ ಹೋದರೂ ಡಿಕ್ಕಿ ಹೊಡೆದಿರುವುದು ಸೆರೆಯಾಗಿತ್ತು. ಅಪಘಾತಕ್ಕೆ ನಂಬರ್ ಪ್ಲೇಟ್ ಇಲ್ಲದ ಕಾರು ಬಳಸಿದ್ದು, ಯೋಜಿತ ಕೊಲೆ ಎಂದು ಶಂಕೆ ವ್ಯಕ್ತವಾಗಿತ್ತು. ಪೊಲೀಸರು ಇದನ್ನು ಕೊಲೆ ಪ್ರಕರಣ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಇದೀಗ ಪ್ರಕರಣ ಸಂಬಂಧ ಇಬ್ಬರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


