ತುಮಕೂರು: ಜಿಲ್ಲೆಯಲ್ಲಿ ಭೂಮಿ ವಸತಿಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಎರಡು ತಲೆಮಾರುಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದ್ದರೂ, ಈವರೆಗೆ ತುಮಕೂರು ಜಿಲ್ಲಾಡಳಿತ ಸಮಸ್ಯೆ ಬಗೆ ಹರಿಸಿಲ್ಲ. ಹೀಗಾಗಿ ಮಾರ್ಚ್ 15ರಿಂದ ಭೂಮಿ ಮತ್ತು ವಸತಿ ಹೋರಾಟ ಸಮಿತಿಯು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಭೂಮಿ ವಸತಿ ಹಕ್ಕಿಗಾಗಿ ಅನಿರ್ದಿಷ್ಟ ಕಾಲ ಅಹೋ ರಾತ್ರಿ ಧರಣಿ ಹಮ್ಮಿಕೊಂಡಿದೆ.
ಜಿಲ್ಲೆಯ ಸಾವಿರಾರು ಭೂ ರಹಿತರು ಭೂಮಿ ಮತ್ತು ವಸತಿಗಾಗಿ ಅರ್ಜಿಗಳನ್ನು ಹಾಕಿ ಇಂದು, ನಾಳೆ ಭೂಮಿ ವಸತಿಗೆ ಸಾಗುವಳಿ, ಹಕ್ಕುಪತ್ರ ಸಿಗಬಹುದು ಎಂಬ ಆಶಾ ಭಾವನೆಯಿಂದ ಕಾಯುತ್ತಿದ್ದಾರೆ. ಅನೇಕ ಬಾರಿ ಕಛೇರಿಯಿಂದ ಕಛೇರಿಗಳಿಗೆ ಅಲೆದರೂ ಕೂಡ ಇದುವರೆಗು ಅರ್ಹರಿಗೆ ಭೂಮಿ ವಸತಿ ದೊರೆತಿಲ್ಲ. ರಾಜ್ಯ ಸೇರಿದಂತೆ ತುಮಕೂರು ಜಿಲ್ಲೆಯ ಈ ಭೂಮಿ ವಸತಿ ಸಮಸ್ಯೆಗಳನ್ನು ಬಗೆ ಹರಿಸಲು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಶ್ರೀ ಹೆಚ್.ಎಸ್.ದೊರೆಸ್ವಾಮಿ ರವರ ನೇತೃತ್ವದ ಭೂಮಿ ವಸತಿ ಹೋರಾಟ ಸಮಿತಿಯಿಂದ 2018 ನೇ ಸಾಲಿನಿಂದ ಅನೇಕ ಬಾರಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ,ತಾಲ್ಲೂಕು ಕಛೇರಿಗಳ ಮುಂದೆ ಪ್ರತಿಭಟನೆಗಳು ನಡೆಸಿದ್ದರೂ ಕೂಡ ಇದುವರೆವಿಗೂ ಸಮಸ್ಯೆಗಳು ಬಗೆ ಹರಿದಿರುವುದಿಲ್ಲ ಎಂದು ಭೂಮಿ ವಸತಿ ಹೋರಾಟ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಸಮಿತಿಯು ಈಗಾಗಲೇ ಜಿಲ್ಲಾಡಳಿತದ ಗಮನಕ್ಕೆ ತಂದಿರುವ ಭೂಮಿ ವಸತಿ ಸಮಸ್ಯೆಗಳು ಹಾಗೂ ತುಮಕೂರು ಜಿಲ್ಲಾ ಪಂಚಾಯ್ತಿಗೆ ಸಂಬಂದಿಸಿದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವವರೆಗೂ ಮಾರ್ಚ್ 15ರ ಮಂಗಳವಾರದಿಂದ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಅನಿರ್ದಿಷ್ಟ ಕಾಲ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ವಸತಿ ಹೋರಾಟ ಸಮಿತಿ ತಿಳಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB