“ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನೂ ಹರಸಲಿ” ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಹೇಳಿದ್ದಾರೆ. ಶ್ರೀ ಕೃಷ್ಣನ ಮುಳುಗಿ ಹೋದ ನಗರವನ್ನು ಹುಡುಕುವ ಸಮುದ್ರದಾಳದ ತಮ್ಮ ಪಯಣದ ವೇಳೆ ಸ್ಕೂಬಾ ಸಾಧನಗಳನ್ನು ಧರಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. “ಇಂದು ನಾನು ಅನುಭವಿಸಿದ ಆ ಕ್ಷಣಗಳು ನನ್ನ ಜೀವನದಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯಲಿವೆ.
ನಾನು ಸಮುದ್ರದ ಆಳಕ್ಕೆ ತೆರಳಿದ್ದೆ ಮತ್ತು ಪುರಾತನ ದ್ವಾರಕಾ ನಗರದ ದರ್ಶನ ಮಾಡಿದೆ. ನೀರಿನ ಅಡಿಯಲ್ಲಿ ಅಡಗಿರುವ ದ್ವಾರಕಾ ನಗರದ ಬಗ್ಗೆ ಪುರತತ್ವ ಶಾಸ್ತ್ರಜ್ಞರು ಸಾಕಷ್ಟು ಬರೆದಿದ್ದಾರೆ. ನಮ್ಮ ಗ್ರಂಥಗಳಲ್ಲಿ ಕೂಡ ಸುಂದರ ದ್ವಾರಗಳು ಹಾಗೂ ಜಗತ್ತಿನ ತುದಿಯ ಎತ್ತರದಷ್ಟು ಉದ್ದನೆಯ ಕಟ್ಟಡಗಳಿದ್ದ ನಗರ ಎಂಬುದಾಗಿ ದ್ವಾರಕಾವನ್ನು ವರ್ಣಿಸಲಾಗಿದೆ.
“ಶ್ರೀ ಕೃಷ್ಣ ಸ್ವತಃ ಈ ನಗರವನ್ನು ನಿರ್ಮಿಸಿದ್ದ” ಎಂದು ದ್ವಾರಕಾ ದರ್ಶನದ ಬಳಿಕ ನಡೆದ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ತಿಳಿಸಿದ್ದಾರೆ. ದ್ವಾರಕಾದಲ್ಲಿನ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಕೂಡ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ದೇಶದ ಅತಿ ಉದ್ದನೆಯ ಕೇಬಲ್ ಸೇತುವೆ ಎನಿಸಿರುವ ‘ಸುದರ್ಶನ ಸೇತು’ವನ್ನು ಉದ್ಘಾಟಿಸಿದರು. ಬೇಯ್ತ್ ದ್ವಾರಕಾ ದ್ವೀಪ ಹಾಗೂ ದೇವಭೂಮಿ ದ್ವಾರಕಾ ನಗರದಲ್ಲಿನ ಓಖಾ ಮುಖ್ಯ ನಗರವನ್ನು ಸಂಪರ್ಕಿಸಲು ಅರಬ್ಬಿ ಸಮುದ್ರದ ಮೇಲೆ ನಿರ್ಮಿಸಿರುವ 2.32 ಕಿಮೀ ಉದ್ದದ ಸೇತುವೆ ಇದಾಗಿದೆ.

979 ಕೋಟಿ ರೂ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. “ನಾನು ಸಾಗರದ ಆಳಕ್ಕೆ ಇಳಿದಾಗ, ದೈವಿಕತೆಯ ಅನುಭವ ಪಡೆದೆ… ದ್ವಾರಕಾಧೀಶನ ಎದುರು ತಲೆಬಾಗಿದೆ. ನನ್ನೊಂದಿಗೆ ನವಿಲುಗರಿಯನ್ನು ಕೊಂಡೊಯ್ದು, ಅದನ್ನು ಶ್ರೀ ಕೃಷ್ಣನ ಪಾದ ಕಮಲಗಳ ಬಳಿ ಇರಿಸಿದೆ. ಅಲ್ಲಿಗೆ ಹೋಗುವ ಮತ್ತು ಅಳಿದುಳಿದ ಪುರಾತನ ದ್ವಾರಕಾ ನಗರವನ್ನು ಸ್ಪರ್ಶಿಸುವ ಕುತೂಹಲ ಸದಾ ನನ್ನಲ್ಲಿ ಇತ್ತು. ಇಂದು ನಾನು ಸಂಪೂರ್ಣ ಭಾವುಕನಾಗಿದ್ದೇನೆ. ದಶಕಗಳಷ್ಟು ಹಳೆಯದಾದ ಕನಸು ಇಂದು ಈಡೇರಿದೆ” ಎಂದು ಮೋದಿ ಹೇಳಿದರು. ಬೇಯ್ತ್ ದ್ವಾರಕಾ ದ್ವೀಪದ ಸಮೀಪದ ಕರಾವಳಿಯಲ್ಲಿ ಪ್ರಧಾನಿ ಮೋದಿ ಸ್ಕೂಬಾ ಡ್ರೈವಿಂಗ್ ನಡೆಸಿದರು. ಪುರಾತತ್ವ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿ ಪುರಾತನ ದ್ವಾರಕಾ ನಗರದ ಅವಶೇಷಗಳನ್ನು ಪತ್ತೆ ಮಾಡಿದ್ದು, ಜನರು ಅದನ್ನು ವೀಕ್ಷಿಸಲು ಅವಕಾಶವಿದೆ.

ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


