ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ಸಾರ್ವಜನಿಕ ಮತ್ತು ಪ.ಜಾತಿ, ಪ.ಪಂಗಡ ಸ್ಮಶಾನಕ್ಕೆ ಸರ್ಕಾರ ಭೂಮಿ ಮಂಜೂರು ಮಾಡಿದ್ದರೂ, ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಸ್ಮಶಾನ ಅಭಿವೃದ್ಧಿಯಾಗದೆ ಅಂತ್ಯ ಸಂಸ್ಕಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾ.ಪಂ ವ್ಯಾಪ್ತಿಯ ಸರ್ವೇ.ನಂ.43ರಲ್ಲಿ ಪ.ಜಾತಿ ಮತ್ತು ಪ.ಪಂಗಡ ಸ್ಮಶಾನಕ್ಕೆ 10 ಗುಂಟೆ, ಸಾರ್ವಜನಿಕ ಸ್ಮಶಾನಕ್ಕೆ 10 ಗುಂಟೆ ಜಮೀನು 2018ರಲ್ಲಿ ಮಂಜೂರು ಮಾಡಿದೆ. 2023–24ರಲ್ಲಿ ಗ್ರಾ.ಪಂಚಾಯ್ತಿಗೆ ಕಂದಾಯ ಇಲಾಖೆಯಿಂದ ಹಸ್ತಾಂತರವಾಗಿದೆ. ಆದರೂ ಈವರೆಗೂ ಗ್ರಾ.ಪಂ. ಅಧಿಕಾರಿಗಳು ಸಾರ್ವಜನಿಕ ಸ್ಮಶಾನವನ್ನು ಅಭಿವೃದ್ಧಿ ಮೀನಾಮೇಷ ಎಣಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದರೂ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಲು ಗ್ರಾ.ಪಂ. ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮೃತ ದೇಹವಿಟ್ಟು ಪ್ರತಿಭಟನೆ:
ಬೈಚಾಪುರ ಗ್ರಾಮದಲ್ಲಿ ಕಳೆದ 2018ರಲ್ಲಿ ದಲಿತ ಕುಟುಂಬ ಒಂದರಲ್ಲಿ ಸಾವಿನ ಘಟನೆ ನಡೆದಾಗ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದ ಕಾರಣ ಮೃತದೇಹವನ್ನು ಗ್ರಾ.ಪಂ. ಎದುರು ಇಟ್ಟು ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದ ತಹಶೀಲ್ದಾರ್ ಸ್ಥಳಕ್ಕೆ ಧಾವಿಸಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ತನ್ನ ಕುಟುಂಬದ ವ್ಯಕ್ತಿಯ ಅಂತ್ಯಕ್ರಿಯೆಗೆ ಸ್ಮಶಾನ ಕೊರತೆಯಿಂದ ಕಂದಾಯ ಇಲಾಖೆ ಅರಣ್ಯ ಇಲಾಖೆ ನರ್ಸರಿ ಪ್ರದೇಶದಲ್ಲಿನ 20 ಗುಂಟೆ ಜಮೀನು ಸ್ಮಶಾನಕ್ಕೆಂದು ಮೀಸಲಿಟ್ಟು ಮಂಜೂರು ಮಾಡಿದ್ದರು, ಆದರೆ ೭ ವರ್ಷ ಕಳೆದರೂ ಸ್ಮಶಾನ ಇದುವರೆಗೂ ಅಭಿವೃದ್ಧಿಯಾಗಿಲ್ಲ.
ಅಧಿಕಾರಿಗಳ ಉಡಾಫೆ ಉತ್ತರ:
2011ರ ಜನಗಣತಿ ಆಧಾರದ ಮೇಲೆ, ಭೂ ಕಂದಾಯ ಕಾಯ್ದೆ 1964 ರ ಕಲಂ 71ರ ಅಡಿಯಲ್ಲಿ ಜಿಲ್ಲಾಡಳಿತ ಬೈಚಾಪುರ ಗ್ರಾಮದ ಸರ್ಕಾರಿ ತೋಪು ಸರ್ವೇ.ನಂ.43ರಲ್ಲಿ ಜಮೀನನ್ನು ಎಸ್ಸಿ/ಎಸ್ಟಿ ಸ್ಮಶಾನ 10 ಗುಂಟೆ, ಸಾರ್ವಜನಿಕ ಸ್ಮಶಾನ 10 ಗುಂಟೆ ಜಮೀನು ಮಂಜೂರು ಮಾಡಿದೆ. ಆದರೆ ಗ್ರಾ.ಪಂ ಅಧಿಕಾರಿಗಳು ಸದರಿ ಜಾಗವನ್ನು ಹಸ್ತಾಂತರ ಮಾಡಿಕೊಂಡು ಸಾರ್ವಜನಿಕರ ಬಳಕೆಗೆ ನೀಡಲು ನಿರ್ಲಕ್ಷ್ಯವಹಿಸಿದ್ದು, ಈ ಬಗ್ಗೆ ಗ್ರಾ.ಪಂ ಅಧಿಕಾರಿಗಳನ್ನು ಪ್ರಶ್ನಿಸಿದಾಗ ನಮಗೆ ಹಸ್ತಾಂತರವಾಗಿಲ್ಲ ಎಂಬ ಉಡಾಫೆ ಉತ್ತರ ನೀಡುತ್ತಿದ್ದು ಇವರ ಕಾರ್ಯವೈಖರಿಗೆ ತಿಳಿದ ಕೈಗನ್ನಡಿಯಾಗಿದೆ.
ಗ್ರಾಮದ ಸ್ಮಶಾನದ ಬಗ್ಗೆ ತಹಶೀಲ್ದಾರ್ ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ ಸ್ಥಳ ಪರಿಶೀಲಿಸಿ ಮಾಹಿತಿ ನೀಡುತ್ತೇನೆ ಎಂದು ಹೇಳುತ್ತಿದ್ದು, ಇದು ಕಂದಾಯ ಇಲಾಖೆಯ ನಿರ್ಲಕ್ಷ್ಯವೋ ಗ್ರಾ.ಪಂ ಆಡಳಿತ ವೈಫಲ್ಯವೋ ಎಂಬ ಅನುಮಾನ ಸಾರ್ವನಿಕರಲ್ಲಿ ಕಾಡುತ್ತಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಅಲ್ಲದೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಕೂಡಲೇ ನಿರ್ಲಕ್ಷö್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
2017—18 ರಲ್ಲಿ ಬೈಚಾಪುರ ಗ್ರಾಮದಲ್ಲಿ ಸ್ಮಶಾನ ಕೊರತೆಯಿಂದ ಮೃತರ ಅಂತ್ಯಕ್ರಿಯೆಗೆ ಪರದಾಡುವಂತಾಗಿತ್ತು. ಕಂದಾಯ ಇಲಾಖೆ ಸರ್ವೇ.ನಂ ೪೩ರಲ್ಲಿ ಸ್ಮಶಾನ ಮಂಜೂರು ಮಾಡಿತ್ತು ನಂತರ 2023–24ರಲ್ಲಿ ಅಭಿವೃದ್ಧಿಗೆ ಮತ್ತು ನಿರ್ವಹಣೆಗೆ ಗ್ರಾ.ಪಂ. ಹಸ್ತಾಂತರಿಸಿದೆ. 5 ಲಕ್ಷ ಮೊತ್ತದ ನರೇಗಾ ಯೋಜನೆಯಡಿ ಕ್ರಿಯಾಯೋಜನೆ ಸಿದ್ದತೆ ಮಾಡಿಕೊಂಡಿದ್ದು, ಶೀಘ್ರದಲ್ಲಿ ಕಾಂಪೌಂಡ್, ನೆರಳಿನ ವ್ಯವಸ್ಥೆ, ನೀರಿನ ತೊಟ್ಟಿಗೆ ವ್ಯವಸ್ಥೆ ಕಲ್ಪಿಸಿ ಅಭಿವೃದ್ಧಿ ಪಡಿಸಲಾಗುವುದು.
— ವೆಂಕಟರೆಡ್ಡಿ, ಗ್ರಾ.ಪಂ. ಸದಸ್ಯ.
ಸಾಮಾಜಿಕ ಅರಣ್ಯ ವಲಯ ಭೂಮಿಯಲ್ಲಿ ಪ.ಜಾತಿ ಮತ್ತು ಸಾರ್ವಜನಿಕರ ಸ್ಮಶಾನಕ್ಕೆಂದು 20 ಗುಂಟೆ ಭೂಮಿಯನ್ನು ಕಂದಾಯ ಇಲಾಖೆ ಮಂಜೂರು ಮಾಡಿ ಗ್ರಾ.ಪಂ. ಹಸ್ತಾಂತರಿಸಿ ಹಲವು ವರ್ಷಗಳೇ ಆಗಿದೆ. ಗ್ರಾ.ಪಂಚಾಯಿತಿಯಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಈವರೆಗೂ ನಡೆದಿಲ್ಲಾ, ಗ್ರಾ.ಪಂ ಅಧಿಕಾರಿಗಳಿಗೆ ಹಸ್ತಾಂತರವೇ ಆಗಿಲ್ಲಾ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ. ದಲಿತ ಪರ ಸಂಘಟನೆಯು ಇದನ್ನು ತೀವ್ರವಾಗಿ ಖಂಡಿಸುತ್ತದೆ.
— ದಾಡಿ ವೆಂಕಟೇಶ್, ದಲಿತ ಮುಖಂಡ.
2010ರಲ್ಲಿ ಸ್ಮಶಾನ ಜಾಗದಲ್ಲಿ ಅರಣ್ಯ ಇಲಾಖೆ ನರ್ಸರಿ ನಡೆಸಲು ಮುಂದಾಗಿತ್ತು. ಗ್ರಾಮಸ್ಥರ ವಿರೋಧದಿಂದ ಸ್ಮಶಾನಕ್ಕೆಂದು 20 ಗುಂಟೆ ಜಮೀನನ್ನು ಕಂದಾಯ ಇಲಾಖೆ ಮಂಜೂರು ಮಾಡಿ ಎರಡು ಮೂರು ವರ್ಷದಿಂದೆ ಗ್ರಾ.ಪಂ ಹಸ್ತಾಂತರಿಸಿದೆ. ಸ್ಮಶಾನದ ನಾಮಫಲಕ ಹಾಕಿಲ್ಲಾ, ಅಭಿವೃದ್ಧಿ ಕೆಲಸದತ್ತ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಗ್ರಾ.ಪಂ ಅಧಿಕಾರಿಗಳು.
— ಹನುಮಂತರಾಯಪ್ಪ, ಮಾಜಿ ಗ್ರಾ.ಪಂ. ಸದಸ್ಯ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC