ಗುಬ್ಬಿ: ಚೀರನಹಳ್ಳಿ ಮತ್ತು ಬೆಳ್ಳಳ್ಳಿ ಗ್ರಾಮದಲ್ಲಿ ದುರಸ್ತಿ ಮತ್ತು ಪರಿವರ್ತಕ ಸ್ಥಳಾಂತರಕ್ಕೆ ಸೂಚಿಸಿದ್ದರೂ ಬೇಜವಾಬ್ದಾರಿ ತೋರಿದ ಬೆಸ್ಕಾಂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಅವರು ಬೆಸ್ಕಾಂ ಮುಖ್ಯ ಎಂಜಿನಿಯರ್ ಲೋಕೇಶ್ ಅವರಿಗೆ ಮೊಬೈಲ್ ಮೂಲಕ ತರಾಟೆಗೆ ತೆಗೆದುಕೊಂಡ ಘಟನೆ ಇಂದು ಚೀರನಹಳ್ಳಿ ಗ್ರಾಮದ ವಿವಿಧ ಕಾಮಗಾರಿ ಪೂಜಾ ಕಾಮಗಾರಿಗೆ ಆಗಮಿಸಿದ ಸಂದರ್ಭದಲ್ಲಿ ಜರುಗಿತು .
ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾದ ಹಿನ್ನೆಲೆ ಗದ್ದೆಹಳ್ಳಿ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದಲೂ ಕೆಲ ಕುಟುಂಬಗಳ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದಿರುವ ಬಗ್ಗೆ ತುಮಕೂರು ಜಿಪಂ ಕೆಡಿಪಿ ಸಭೆಯಲ್ಲಿ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ಬಗ್ಗೆ ಪ್ರಸ್ತಾಪಿಸಿ ಕೂಡಲೇ ಚೀರನಹಳ್ಳಿಯಲ್ಲಿ ವಿದ್ಯುತ್ ದುರಸ್ಥಿ ಹಾಗೂ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ ಹಲವು ಮನೆಗಳ ಕತ್ತಲು ನಿವಾರಿಸಲು ಸೂಚಿಸಿದ್ದರೂ, ಜಿಲ್ಲಾ ಸಚಿವರ ಮುಂದೆ ಕೆಲಸ ಮಾಡುವ ಮಾತು ಆಡಿದ ಸಿಬ್ಬಂದಿ ಈಗ ಕಾಲ ಕಳೆಯುತ್ತಿರುವುದು ಅವರ ಬೇಜವಾಬ್ದಾರಿಗೆ ಹಿಡಿದ ಕನ್ನಡಿ ಎಂದು ಕಿಡಿಕಾರಿದ ಶಾಸಕರು ಎಇಇ ಅನಿಲ್ ವಿರುದ್ಧ ಗರಂ ಆದರು.
ಚೀರನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ದೂರು ನೀಡಿದ ಬೆನ್ನಲ್ಲೇ ಬೆಸ್ಕಾಂ ಅಧಿಕಾರಿಗಳ ವರ್ತನೆಗೆ ಕಿಡಿಕಾರಿ, ಕೂಡಲೇ ಮುಖ್ಯ ಎಂಜಿನಿಯರ್ ಲೋಕೇಶ್ ಅವರಿಗೆ ಮೊಬೈಲ್ ಕರೆ ಮಾಡಿ ಗ್ರಾಮಸ್ಥರ ಮುಂದೆಯೇ ತರಾಟೆಗೆ ತೆಗೆದುಕೊಂಡರು. ಹಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಿರುವ ಬಗ್ಗೆ ಹಾಗೂ ಕೆಲ ದುರಸ್ತಿ ಬಗ್ಗೆ ಸಭೆಯಲ್ಲಿ ತಿಳಿಸಿದ್ದರೂ ಶಾಸಕರ ಮಾತಿಗೆ ಮನ್ನಣೆ ನೀಡದ ಸಿಬ್ಬಂದಿ ಸಾಮಾನ್ಯ ಒಬ್ಬ ದೂರು ಸಲ್ಲಿಸಿದರೆ ಹೇಗೆ ಕೆಲಸ ಮಾಡುತ್ತಾರೆ ಎಂಬುದು ತಿಳಿಯುತ್ತೆ ಎಂದು ಬೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷತನ ದ ವಿರುದ್ಧ ಕಿಡಿಕಾರಿದರು.
ಈ ಜೊತೆಗೆ ಬೆಳ್ಳಳ್ಳಿ ಗ್ರಾಮದಲ್ಲಿ ಮನೆಯ ಸಮೀಪದ ಪರಿವರ್ತಕವನ್ನು ಸ್ಥಳಾಂತರ ಮಾಡಲು 80 ಸಾವಿರ ರೂ. ಕೇಳಿರುವ ಬಗ್ಗೆ ದೂರು ಬಂದಿದೆ. ಈ ಅಸಡ್ಡೆ ಹಾಗೂ ಲಂಚತನ ಬಗ್ಗೆ ಅಧಿವೇಶನದಲ್ಲೇ ಪ್ರಸ್ತಾಪಿಸಿ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ. ಸಚಿವ ಸುನಿಲ್ ಕುಮಾರ್ ಅವರೊಂದಿಗೆ ಚರ್ಚಿಸಿ ಅಮಾನತು ಶಿಕ್ಷೆ ನೀಡಲು ಒತ್ತಾಯಿಸುವುದಾಗಿ ತಿಳಿಸಿದರು. ಇನ್ನೂ ನಾಲ್ಕು ದಿನದಲ್ಲಿ ಈ ಕಾರ್ಯ ಪೂರ್ಣಗೊಳ್ಳಬೇಕು ಎಂದು ಬೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸಿ.ಎಸ್. ಪುರ ಶಾಖಾಧಿಕಾರಿ ಗಳಿಗೆ ಎಚ್ಚರಿಕೆ ನೀಡಿದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB