ಮಧುಗಿರಿ : ಹಾಲಿ ಶಾಸಕರಾದ ಎಂ.ವಿ.ವೀರಭದ್ರಯ್ಯ ರಿಂದ ಇತಿಹಾಸದಲ್ಲೇ ಕಂಡರಿಯದಂತಹ ತಲೆ ತಗ್ಗಿಸುವ ಘಟನೆ ನಡೆದಿದೆ ಎಂದು ಜಿಲ್ಲಾ ಡಿ ಎಸ್ ಎಸ್ ಸಂಘಟನಾ ಸಂಚಾಲಕರಾದ ಡಾ.ದೊಡ್ಡೇರಿ ಕಣಿಮಯ್ಯ ತಿಳಿಸಿದರು
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಮಧುಗಿರಿ ಕ್ಷೇತ್ರವನ್ನು ಆಳಿದ ಮಹಾನೀಯರ ಕಾಲದಲ್ಲೂ ಇಂತಹ ಘಟನೆ ಎಂದಿಗೂ ನಡೆದಿಲ್ಲ, ಆದರೆ ಈ ಬಾರಿಯ ಹಾಲಿ ಶಾಸಕರಿಂದ ಆದ ಅವಮಾನದಿಂದ ಕ್ಷೇತ್ರದ ಮತದಾರರು ತಲೆತಗ್ಗಿಸುವಂತಾಗಿದೆ, ಮತದಾರರಿಗೆ ಆದ ಅವಮಾನವನ್ನು ಖಂಡಿಸುತ್ತಾ ಈ ದಿನ ತಾಲೂಕಿನ ಎಲ್ಲಾ ಪ್ರಗತಿಪರ, ದಲಿತಪರ, ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳಿಂದ ಪತ್ರಿಕಾಗೋಷ್ಠಿ ನಡೆಸಿದ್ದೇವೆ ಎಂದರು.
ಶಾಸಕರ ಅವಧಿಯಲ್ಲಿ ಬಹು ಜನರಿಗೆ ದಲಿತರಿಗೆ, ಅಲ್ಪಸಂಖ್ಯಾತರಿಗೆ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ಆಗಿಲ್ಲ, ಕಳೆದ ಕೋರೋಣ ಸಾಂಕ್ರಾಮಿಕ ರೋಗದ ಸಮಯದಲ್ಲಿ ಕ್ಷೇತ್ರದ ಮತದಾರರ ಕಷ್ಟಕ್ಕೆ ಸ್ಪಂದಿಸದ ಶಾಸಕರು, ಈಗ ಚುನಾವಣೆ ಸಮೀಪ ಇರುವ ಸಂದರ್ಭದಲ್ಲಿ ಮತದಾರರಿಗೆ ಹಣದ, ಪ್ರವಾಸದ ಅಮಿಷಾಗಳು ಒಡ್ಡುತ್ತಿರುವುದು ಖಂಡನೀಯವಾಗಿದೆ. ಕ್ಷೇತ್ರದ ಮತದಾರರ ಮುಂದೆ ಶಾಸಕರು ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ದೊಡ್ಡ ಹೋರಾಟ ಮಾಡಲಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕ್ಷೇತ್ರದ ಜನರು ಹಾಲಿ ಶಾಸಕರಿಗೆ ಈ ಹಿಂದೆ ನಡೆದ ಚುನಾವಣೆಯಲ್ಲಿ 78,000 ಮತನೀಡಿ ಜಯಶೀಲರನ್ನಾಗಿ ಮಾಡಿದ್ದು ಓ ಎಫ್ ಸಿ ಕೇಬಲ್ ಹಗರಣದಲ್ಲಿ ಶಾಸಕರು ಲಂಚ ಸ್ವೀಕರಿಸುವುದಕ್ಕಾ? ಎಂದು ಜೀವಿಕ ಸಂಘಟನೆಯ ಚಿಕ್ಕಮ್ಮ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರಲ್ಲದೇ, ಕ್ಷೇತ್ರದ ಮತಬಾಂಧವರಿಗೆ ಆಗಿರುವ ಅನ್ಯಾಯಕ್ಕೆ ಶಾಸಕರು ಮತದಾರರಲ್ಲಿ ಶಾಸಕರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಮಧುಗಿರಿ ತಾಲೂಕು ಅಧ್ಯಕ್ಷರಾದ ಪಾಂಡುರಂಗಯ್ಯ ಮಾತನಾಡಿ, ಕ್ಷೇತ್ರದ ಶಾಸಕರು ಕೇಬಲ್ ಅಳವಡಿಕೆ ಕಾಮಗಾರಿಯಲ್ಲಿ ಬೇಡಿಕೆ ಇಟ್ಟು ಒಂದುವರೆ ಲಕ್ಷ ಹಣ ಪಡೆದಿರುವುದು ಇದು ನಾಚಿಕೆಯ ಸಂಗತಿ, ಇಂತಹ ಶಾಸಕರಿಂದ ಇಡೀ ರಾಜ್ಯದಲ್ಲಿ ನಮ್ಮ ಕ್ಷೇತ್ರಕ್ಕೆ ಅವಮಾನವಾಗಿದೆ, ಈ ಹಿಂದೆ ಕ್ಷೇತ್ರದಲ್ಲಿ ಹಲವಾರು ಶಾಸಕರುಗಳು ತಮ್ಮ ಅವಧಿಯಲ್ಲಿ ಪ್ರಾಮಾಣಿಕವಾಗಿ ಒಳ್ಳೆಯ ಕೆಲಸ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿ ಒಳ್ಳೆಯ ಹೆಸರು ಗಳಿಸಿದ್ದು ನಾವು ಕಾಣಬಹುದು, ಶಾಸಕರ ಅವಧಿಯಲ್ಲಿ ಕ್ಷೇತ್ರ ಅಭಿವೃದ್ಧಿ ಸಹ ಆಗಿಲ್ಲ, ಎಲ್ಲಾ ಮತಬಾಂಧವರು ಕ್ಷೇತ್ರದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಚುನಾವಣೆಯಲ್ಲಿ ಜನಸಮಾನ್ಯರ ಹಿತ ಕಾಯುವ ವ್ಯಕ್ತಿಗೆ ಅಮೂಲ್ಯವಾದ ಮತ ನೀಡಿ ಎಂದು ಮನವಿ ಮಾಡಿದರು.
ಮಾದಿಗ ದಂಡೋರ ಅಧ್ಯಕ್ಷರು ಸಿದ್ದಾಪುರ ರಂಗಶಾಮಣ್ಣ ಮಾತನಾಡಿ, ನಮ್ಮ ಮಧುಗಿರಿ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ಮೇಲ್ಪಟ್ಟು ಮತ ಬಾಂಧವರಿದ್ದು, ಇಡೀ ರಾಷ್ಟ್ರ ರಾಜ್ಯ ಮಟ್ಟದಲ್ಲಿ ನಮ್ಮ ಕ್ಷೇತ್ರಕ್ಕೆ ಶಾಸಕರಿಂದ ಅವಮಾನವಾಗಿದೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ಕ್ಷೇತ್ರದ ಹಾಲಿ ಶಾಸಕರು ಕೇಬಲ್ ಅಳವಡಿಕೆ ಕಾಮಗಾರಿಯಲ್ಲಿ ಹಣ ಪಡೆದು ಕ್ಷೇತ್ರದ ಜನಸಾಮಾನ್ಯರ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ. ಇಂತಹ ಶಾಸಕರಿಂದ ಕ್ಷೇತ್ರಕ್ಕೆ ಕೆಟ್ಟ ಹೆಸರು, ಈ ಕೂಡಲೇ ಶಾಸಕರು ಕ್ಷೇತ್ರ ಮತದಾರರ ಮುಂದೆ ಕ್ಷಮೆ ಯಾಚಿಸಿ, ಎಲ್ಲಾ ಮತಬಾಂಧವರ ವಿಶ್ವಾಸ ಪಡೆಯಬೇಕು. ಈ ಹಿಂದೆ 2013 ರಿಂದ 2018 ವರೆಗೆ ಕ್ಷೇತ್ರದ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ ರವರು ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿರುವುದು ನಾವು ಕಾಣಬಹುದು, ಆದ್ದರಿಂದ ಈ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿ ಆಶೀರ್ವಾದಿಸಿ ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ್ ಗೌಡ ಬಣ ಮಧುಗಿರಿ ತಾಲೂಕು ಅಧ್ಯಕ್ಷರಾದ ಶಿವಕುಮಾರ್ ಮಾತನಾಡಿ, ಕ್ಷೇತ್ರದ ಶಾಸಕರು ರಸ್ತೆಯ ಅಭಿವೃದ್ಧಿ ವಿಚಾರದಲ್ಲಿ ಪ್ರತಿ ಕಿ.ಮೀ. ಗೆ 1 ಲಕ್ಷ ಹಣ ಪಡೆಯುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಕ್ಷೇತ್ರದಲ್ಲಿ ಏನೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದರೂ, ಒಂದೊಂದು ಕೆಲಸಕ್ಕೆ ಇಷ್ಟು ಹಣ ನೀಡಬೇಕು ಇಲ್ಲವಾದಲ್ಲಿ ಕೆಲಸ ಕಾರ್ಯದಲ್ಲಿ ಅಡೆತಡೆ ಉಂಟಾಗುವುದು ಖಚಿತ. ಇದು ನಾಚಿಕೆಯ ಸಂಗತಿ ಇಂತಹ ಸಂಗತಿಯಿಂದ ಕ್ಷೇತ್ರದ ಗೌರವಕ್ಕೆ ಧಕ್ಕೆಯಾಗಿದೆ ಈ ಕೂಡಲೇ ಶಾಸಕರು ಕ್ಷೇತ್ರದ ಮತಬಾಂಧವರ ಮುಂದೆ ಕ್ಷಮೆಯಾಚಿಸಬೇಕು ಎಂದರು.
ಈ ಸಂದರ್ಭದಲ್ಲಿ ಜೀವಿಕ ಮಂಜು, ಮಾದಿಗ ದಂಡೋರ ರಾಘವೇಂದ್ರ, ಸಿದ್ದಾಪುರ ಸಂಜೀವಯ್ಯ, ಡಾ.ಮಹಾರಾಜು, ರಾಜ್ ಗೋಪಾಲ್, ಅಂಜಿನಪ್ಪ, ಕೃಷ್ಣಪ್ಪ ನಾಗೇಶ್ ನೀರಕಲ್ಲು, ರಂಗನಾಥ ವಿಜಿ ಹಾಗೂ ವಿವಿಧ ಸಂಘಟನಾ ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಇದ್ದರು.
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy