ಮೈಸೂರು: ಒಡನಾಡಿ ಸಂಸ್ಥೆ ಮುಖ್ಯಸ್ಥರು ಹಾಗೂ ಸ್ಯಾಂಟ್ರೋ ರವಿ ಪತ್ನಿ ಜೊತೆ ನಟ ಚೇತನ್ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ನಟ ಚೇತನ್, ಒಡನಾಡಿ ಸಂಸ್ಥೆ 32 ವರ್ಷಗಳಿಂದ ಅನ್ಯಾಯದ ವಿರುದ್ಧ ಕೆಲಸ ಮಾಡಿಕೊಂಡು ಬಂದಿದೆ.
ಬಲಹೀನರ ಪರ ನಿಂತು ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಮುರುಘಾ ಮಠ ಹಾಗೂ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಾನು ಕುಟುಂಬ ಸಮೇತ ಅವರನ್ನು ನೋಡಲು ಬಂದಿದ್ದೇನೆ.
ಇದು ಕೇವಲ ಸೇವೆಯಲ್ಲ, ರಚನಾತ್ಮಕ ಹೋರಾಟ ಆಗಿದೆ. ನಾನು ಎಂದೆಂದಿಗೂ ಅವರ ಜೊತೆ ಇರುತ್ತೇನೆ. 2018ರಲ್ಲಿ ಮೀಟೂ ಹೋರಾಟ ಆದಾಗ ಮಹಿಳೆಗೆ ಘನತೆ ತರಬೇಕು ಅಂತ ಹೋರಾಡಿದ್ದೇವೆ. ಮಹಿಳೆಗೆ ಅನ್ಯಾಯ ಆದಾಗ ಆಕೆಯನ್ನ ಅವಮಾನ ಮಾಡಿ ನಿಂದಿಸೋರು ಇದ್ದಾರೆ.
ಮುರುಘಾ ಪ್ರಕರಣದಲ್ಲೂ ಹೆಣ್ಣು ಮಕ್ಕಳ ಜೊತೆ ನಿಂತು ನ್ಯಾಯ ಒದಗಿಸುವ ಕೆಲಸವನ್ನ ಒಡನಾಡಿ ಸಂಸ್ಥೆ ಮಾಡಿದೆ. ಇಂತಹ ಸಂಸ್ಥೆಗಳು ರಾಜ್ಯದಲ್ಲಿ ಹೆಚ್ಚು ಹೆಚ್ಚು ಬೆಳೆಯಬೇಕು ಎಂದರು.
ಪಠಾಣ್ ಸಿನಿಮಾದಲ್ಲಿ ಕೇಸರಿ ಬಿಕಿನಿ ವಿವಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ನಟ ಚೇತನ್, ಕೇಸರಿ ತ್ಯಾಗದ ಸಂಕೇತ. ಬಸವಣ್ಣ, ಬುದ್ದ ಸೇರಿ ಬಹಳ ಜನ ಹಾಕಿದ್ದಾರೆ. ಇಂತಹ ಬಣ್ಣವನ್ನ ಒಂದು ಸಿದ್ದಾಂತಕ್ಕೆ ಸೀಮಿತ ಮಾಡೋದು ಸರಿಯಲ್ಲ. ಯಾರೂ ಕೂಡ ಇದನ್ನ ಹೈಜಾಕ್ ಮಾಡಬಾರದು.
ಕೇಸರಿ ಹಿಂದುತ್ವದ ಬಣ್ಣ ಆಗಲಾರದು. ನಮ್ಮ ದೇಶದ ತ್ರಿವರ್ಣ ಧ್ವಜದಲ್ಲೂ ಕೇಸರಿ ಇದೆ. ಹಾಗಾಗಿ ಇದು ಅನ್ಯಾಯದ ಹೋರಾಟ. ಹಸಿರು ಬಣ್ಣ ಕೂಡ ಒಂದು ವರ್ಗದ ಬಣ್ಣ ಅಲ್ಲ. ಸಣ್ಣ ಸಣ್ಣದಕ್ಕೂ ತಪ್ಪು ಹುಡುಕೋದು ಇವರ ಪ್ರೇಮ್ ವರ್ಕ್ ಆಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಹುನ್ನಾರ. ಇದನ್ನು ರಾಜಕೀಯವಾಗಿ ಬಳಸುತ್ತಿರೋದು, ವಿರೋಧ ಮಾಡುತ್ತಿರುವವರ ವಿಚಾರದ ಕೊರತೆಯನ್ನು ತೋರಿಸುತ್ತದೆ ಎಂದು ಹೇಳಿದರು.


