ತುಮಕೂರು: ಕೊರಟಗೆರೆ ತಾಲ್ಲೂಕಿನ ತಹಶೀಲ್ದಾರ್ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಹೀದಾ ಜಮ್ ಜಮ್ (ಕೆ.ಎ.ಎಸ್) ರವರು ಅಸಿಸ್ಟೆಂಟ್ ಕಮಿಷನರ್ ಆಗಿ ಮುಂಬಡ್ತಿ ಹೊಂದಿದ್ದು. ಪ್ರಸ್ತುತ ಸರ್ಕಾರದ ಆದೇಶದಂತೆ ತುಮಕೂರಿನ ವಿಶ್ವ ವಿದ್ಯಾನಿಲಯದ ನೂತನ ಕುಲ ಸಚಿವರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು.
ಕೊರಟಗೆರೆ ತಾಲ್ಲೂಕಿನಲ್ಲಿ ಸರಿ ಸುಮಾರು ಒಂದೂವರೆ ವರ್ಷಗಳ ಕಾಲ ಮತ್ತು ಶಿರಾ ತಾಲ್ಲೂಕಿನಲ್ಲಿ ಜನ ಸಾಮಾನ್ಯರಲ್ಲಿ ಸಾಮಾನ್ಯರಾಗಿ ದಕ್ಷತೆಯಿಂದ ಪ್ರಾಮಾಣಿಕವಾಗಿ ಜನಪರ ಕಾಳಜಿಯೊಂದಿಗೆ ಬಡವರ, ನಿರಾಶ್ರಿತರ ವೃದ್ಧರ, ರೈತರ ಪರವಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಕೊರಟಗೆರೆ ತಾಲೂಕಿನಲ್ಲಿ ಮನೆ ಮಾತಾಗಿದ್ದ ಜನಸ್ನೇಹಿ ಅಧಿಕಾರಿ ನಾಹೀದಾಜಮ್ ಜಮ್ ಇದೀಗ ತುಮಕೂರಿನ ವಿಶ್ವ ವಿದ್ಯಾನಿಲಯದ ಕುಲ ಸಚಿವರಾಗಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ ಇವರು ಅತ್ಯುತ್ತಮವಾದ ಕೆಲಸವನ್ನು ಮಾಡಿದ್ದಾರೆ. ತಾಲ್ಲೂಕು ಕಚೇರಿಗೆ ಅಲೆದಾಡಿ ಕೆಲಸಗಳು ಆಗದೆ ಜನರು ಹಿಂತಿರುಗುತ್ತಿದ್ದ ಸಮಯದಲ್ಲಿ ಬಂದಂತಹ ಇವರು ಜನಸ್ನೇಹಿ ಅಧಿಕಾರಿಯಾಗಿ ಜನರ ಕಷ್ಟಕ್ಕೆ ಸ್ಪಂದಿಸಿ ಜನರ ಮನಸ್ಸಿನಲ್ಲಿ ಸ್ಥಾನಪಡೆದುಕೊಂಡಿದ್ದರು.
ತಾಲ್ಲೂಕು ದಂಡಾಧಿಕಾರಿಯಾಗಿ ಬಂದಾಗಿನಿಂದಲೂ ಇಲ್ಲಿಯವರೆಗೂ ಜನರ ಕಷ್ಟಗಳನ್ನು ಆಲಿಸಿ, ಅವರ ಕೆಲಸಗಳನ್ನು ಪೂರ್ಣಗೊಳಿಸಿ ತುರ್ತಾಗಿ ತಾವೇ ಸ್ವತಃ ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಕಾರ್ಯಗಳನ್ನು ಮಾಡಿರುವುದು ಕಂಡುಬಂದಿದೆ. ಇಂತಹ ಅಧಿಕಾರಿಗಳು ಮತ್ತಷ್ಟು ಜನ ಬರಲಿ ಎನ್ನುವುದೇ ತಾಲ್ಲೂಕಿನ ಜನರ ಆಶಯವು ಕೂಡ ಅಗಿದೆ.
ಇದೀಗ ಜನರ ಮೆಚ್ಚುಗೆಗೆ ಪಾತ್ರರಾಗಿ ಜನಸ್ನೇಹಿ ಅಧಿಕಾರಿ ಎಂದೇ ಹೆಸರು ಗಳಿಸಿದ್ದ ತಹಶೀಲ್ದಾರ್ ನಹೀದಾ ಜಮ್ ಜಮ್ ರವರು ಇದೀಗ ತುಮಕೂರು ವಿಶ್ವ ವಿದ್ಯಾಲಯದ ಅತಿ ಕಿರಿಯ ವಯಸ್ಸಿನ ಮತ್ತು ತುಮಕೂರಿನ ಮೊದಲ ಮಹಿಳಾ ಕುಲ ಸಚಿವರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ವಿಶೇಷತೆ : ಕೊರಟಗೆರೆ ತಾಲ್ಲೂಕಿನಲ್ಲಿ ಹತ್ತಾರು ವರ್ಷಗಳಿಂದ ರೈತರ ಜಮೀನಿಗೆ ನಕಾಶೆ ರಸ್ತೆ ಇಲ್ಲದೆ ಪರದಾಡುತ್ತಿದ್ದನ್ನು ಕಂಡು ನಕಾಶೆ ರಸ್ತೆ ಒತ್ತುವರಿ ತೆರವು, ಸ್ಮಶಾನ ಗೋಮಾಳ ಒತ್ತುವರಿ ತೆರವು, ಸಾವಿರಾರು ಜನ ವೃದ್ಧರಿಗೆ ಸೌಲಭ್ಯ, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ನಿರಾಶ್ರಿತರಿಗೆ ನಿವೇಶನ ಸೌಲಭ್ಯ, ಹತ್ತಾರು ಬಡ ದಲಿತ ಗ್ರಾಮಗಳಿಗೆ ಸರ್ಕಾರದ ಸಕಲ ಸೌಲಭ್ಯದ ಆಸರೆ, ಅತಿ ಸಣ್ಣ ರೈತರಿಗೆ ಬಗರ್ ಹುಕ್ಕುಂ ನಮೂನೆ 50, 53 ರ ಅಡಿ ಜಮೀನು ಮಂಜೂರು ಮಾಡಿ ಒಂದೇ ದಿನದಲ್ಲಿ ಖಾತೆ ಪಹಣಿ ವಿತರಣೆ, ನೂರಾರು ಜನ ವಿಕಲಚೇತನರಿಗೆ ಮಾಶಾಸನ, ವಿಧವೆಯರ ಮಾಶಾಸನ ವ್ಯವಸ್ಥೆ, ರಣಭೀಕರ ಮಳೆಯಿಂದ ವಾಸದ ಮನೆಯನ್ನು ಕಳೆದುಕೊಂಡ ನಿರಾಶ್ರಿತರಿಗೆ ಪುನರ್ವಸತಿ ಯೋಜನೆ ಅಡಿ ಮನೆ ಹಂಚಿಕೆ ಹೀಗೆ ನೂರಾರು ರೀತಿಯಲ್ಲಿ ಸದಾ ಜನರ ಸೇವೆಯಲ್ಲಿ ತೊಡಗಿ ಜನರ ಕಷ್ಟ ಸುಖಕ್ಕೆ ಸ್ಪಂದಿಸಿ ತಾಲ್ಲೂಕಿನ ಮನೆ ಮಗಳೆಂದು ಕೀರ್ತಿಯನ್ನು ಪಡೆದ ದಕ್ಷ ಅಧಿಕಾರಿ ನಹೀದ ಜಮ್ ಜಮ್..
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1