ಪಾವಗಡ: ದಲಿತ ಮುಖಂಡ ನರಸಿಂಹಮೂರ್ತಿ ಹತ್ಯೆ ಖಂಡಿಸಿ ಪಟ್ಟಣದಲ್ಲಿ ಗುರುವಾರ ದಲಿತಪರ ಸಂಘಟನೆ ಒಕ್ಕೂಟ ಸಹಯೋಗದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಡಿ.ಜೆ.ಎಸ್. ನಾರಾಯಣಪ್ಪ, ಜಿಲ್ಲೆಯಲ್ಲಿ ದಲಿತರ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡದೆ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದರು.
ಪ್ರಗತಿ ಪರ ಸಂಘಟನೆಯ ಮುಖಂಡ ಪಾಳೇಗಾರ್ ಲೋಕೇಶ್ ಮಾತನಾಡಿ, ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಪಂಗಡದ ಯುವಕರ ಕೊಲೆ ಪ್ರಕರಣ ಮಾಸುವ ಮುನ್ನವೇ ಗುಬ್ಬಿ ಪಟ್ಟಣದಲ್ಲಿ ಡಿ.ಎಸ್ .ಎಸ್. ಸಂಚಾಲಕ ನರಸಿಂಹಮೂರ್ತಿ ಹತ್ಯೆ ಖಂಡನೀಯ. ದಲಿತರಿಗೆ ರಕ್ಷಣೆ ನೀಡಿದ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡ ಸಿ.ಕೆ.ತಿಪ್ಪೇಸ್ವಾಮಿ ರಾಜ್ಯ ಸರ್ಕಾರ ದಲಿತರ ಮೇಲಿನ ದೌರ್ಜನ್ಯ ಮತ್ತು ಹತ್ಯೆಗಳನ್ನು ನಿರ್ಲಕ್ಷ್ಯ ತನದಿಂದ ನೋಡುತ್ತಿದ್ದು, ತಳ ವರ್ಗದವರಿಗೆ ನೆಲೆಯಿಲ್ಲದಂತಾಗುತ್ತಿದೆ. ಇದು ತುಂಬಾ ಬೇಸರ ತರಿಸುತ್ತಿದೆ ಹಾಗಾಗಿ ಸರ್ಕಾರ ಎಚ್ಚೆತ್ತು ಕೊಲೆಗೈದವರಿಗೆ ತಕ್ಕ ಶಿಕ್ಷೆಗೆ ಗುರಿಪಡಿಸಬೇಕು ಎಂದರು.
ಮುಖಂಡ ಕಡಪಲಕೆರೆ ಹನುಮಂತರಾಯಪ್ಪ ಬಿಜೆಪಿ ಸರ್ಕಾರದಲ್ಲಿ ದಲಿತರಿಗೆ ಸಾಮಾಜಿಕ ಭದ್ರತೆ ನೀಡುತ್ತಿಲ್ಲ, ಕೃತ್ಯವೆಸಗಿದವರಿಗೆ ಶಿಕ್ಷೆಯಾಗಬೇಕು. ಜೊತೆಗೆ ದಲಿತರಿಗೆ ರಕ್ಷಣೆ ನೀಡಲು ವಿಫಲರಾದ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬಿ.ಎಸ್.ಪಿ ಮುಖಂಡ ಹನುಮಂತರಾಯ ಮಾತನಾಡಿ, ಮೇಲಿಂದ ಮೇಲೆ ಇಂತಹ ದಲಿತರ ಹತ್ಯೆ ಪ್ರಕರಣ ನಡೆಯುತ್ತಿದೆ. ಇಡೀ ಸಮಾಜದಲ್ಲಿ ಕೋಮು ಗಲಭೆಗಳಿಗೆ ನಾಂದಿ ಹಾಡುತ್ತಿದೆ. ಇದು ಆರೋಗ್ಯಕರವಲ್ಲ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಸುಮತಿ ರವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಮುಖಂಡರಾದ ವಳ್ಳೂರು ನಾಗೇಶ್, ಪೆದ್ದನ್ನ, ಚಿನ್ನಮ್ಮನಹಳ್ಳಿ ವೆಂಕಟರವಣ, ಕನ್ನಮೇಡಿ ಕೃಷ್ಣ ಮೂರ್ತಿ, ಕಡಮಲಕುಂಟೆ ಹನುಮಂತರಾಯ, ನರಸಿಂಹಪ್ಪ,ಕೋಟಗುಡ್ಡ ಪದ್ಮಾ, ಕವಿತಾ ಮುಂತಾದವರಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz