ಬೀದರ್: ದ್ವಿಚಕ್ರ ವಾಹನ ಕಳ್ಳನೋರ್ವನನ್ನು ಬೀದರ ಜಿಲ್ಲೆಯ ನೂತನ ನಗರ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೀದರ್ ಜಿಲ್ಲೆಯ ನೂತನ ನಗರ ಪೊಲೀಸ್ ಠಾಣೆಯ ಪಿ.ಐ.ವಿಜಯಕುಮಾರ ನೇತೃತ್ವದ ತಂಡ, ಪಿ.ಎಸ್.ಐ.ತಸ್ಲಿಂ ಸುಲ್ತಾನಾ ಹಾಗೂ ಠಾಣೆಯ ಅಪರಾಧ ಸಿಬ್ಬಂದಿಯಾದ ಶೇಕ ಮೊದಿನ, ಮಲ್ಲಿಕಾರ್ಜುನ, ಭರತ, ಪ್ರವೀಣಕುಮಾರ ಪೆಟ್ರೋಲಿಂಗ್ ನಡೆಸುತ್ತಿದ್ದರು. ಈ ವೇಳೆ ಪೊಲೀಸರನ್ನು ಕಂಡ ವ್ಯಕ್ತಿಯೋರ್ವ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆತನನ್ನು ಹಿಡಿದು ಪೊಲೀಸರು ವಿಚಾರಿಸಿದಾಗ, ಆತ ಸರಿಯಾಗಿ ಉತ್ತರ ನೀಡಿಲ್ಲ, ಬಳಿಕ ತಾನು ಒಂದು ವರ್ಷದ ಹಿಂದೆ ಹೊಟೇಲ್ ಮಯೂರಾ ಬಳಿ ಈ ವಾಹನವನ್ನು ಕದ್ದಿದ್ದು, ಅದನ್ನೇ ಬಳಸುತ್ತಿರುವುದಾಗಿ ಹೇಳಿದ್ದಾನೆ.
ಈ ವೇಳೆ ಪೊಲೀಸರು ಆರೋಪಿಯನ್ನ ಇನ್ನೂ ಕೂಲಂಕುಶವಾಗಿ ವಿಚಾರಣೆ ನಡೆಸಿದಾಗ ಇನ್ನೂ 7 ಕದ್ದ ದ್ವಿಚಕ್ರ ವಾಹನಗಳನ್ನು ಪೊದೆಯಲ್ಲಿ ಬಚ್ಚಿಟ್ಟಿರುವ ಬಗ್ಗೆ ತಿಳಿಸಿದ್ದಾನೆ. ಹೀಗಾಗಿ ಸ್ಥಳಕ್ಕೆ ತೆರಳಿದ ಪೊಲೀಸರು ಸುಮಾರು 3.45 ಲಕ್ಷ ರೂಪಾಯಿ ಬೆಲೆ ಬಾಳುವ 7 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳವು ಪ್ರಕರಣವನ್ನು ಕಂಡು ಹಿಡಿದ ಪೊಲೀಸರಿಗೆ ಪೊಲೀಸ್ ಇಲಾಖೆಯಿಂದ ಪ್ರಶಂಸನಾ ಪತ್ರ ಹಾಗೂ ಬಹುಮಾನ ನೀಡಲಾಗಿದೆ.
ವರದಿ: ಅರವಿಂದ್ ಮಲ್ಲಿಗೆ, ಬೀದರ್


