ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಶ್ರೀಕ್ಷೇತ್ರ ವದನಕಲ್ಲು ಗ್ರಾಮದಲ್ಲಿ ನೆಲೆ ನಿಂತಿರುವ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವವು ಮಾರ್ಚ್ 24ರಿಂದ 31 ರವರೆಗೆ 8 ದಿನಗಳ ಕಾಲ ನೆರವೇರಲಿದೆ.
ವದನಕಲ್ಲು ಕ್ಷೇತ್ರವು ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪವಾಡಗೈದ ರಾಜ್ಯದ 7 ಕ್ಷೇತ್ರಗಳಲ್ಲಿ ಒಂದಾಗಿದ್ದು, ಗದ್ದುಗೆಯನ್ನು ಹೊಂದಿರುವ ಸ್ಥಳವಾಗಿದೆ. ನಾಯಕನಹಟ್ಟಿ ಸೇರಿದಂತೆ ರಾಜ್ಯದಾಧ್ಯಂತ ಏಕಕಾಲಕ್ಕೆ 7 ಸ್ಥಳಗಳಲ್ಲಿ ಶ್ರೀಗುರುಗಳ ಜಾತ್ರೆ ಮತ್ತು ರಥೋತ್ಸವ ನೆರವೇರುವುದು ವಿಶೇಷವಾಗಿದೆ. ಅವುಗಳಲ್ಲಿ ವದನಕಲ್ಲು ಒಂದಾಗಿದ್ದು, ಇಲ್ಲಿ ಸುಮಾರು 8 ದಶಕಗಳಿಂದ ಪ್ರತಿ ವರ್ಷ ಜಾತ್ರಾ ಮಹೋತ್ಸವ ನೆರವೇರುತ್ತಾ ಬಂದಿದೆ. ಇಲ್ಲಿನ ರಥೋತ್ಸವದ ಅಂಗವಾಗಿ ದನಗಳ ಜಾತ್ರೆಯೂ ಹಲವು ದಿನಗಳು ಕಾಲ ನಡೆಯುತ್ತಾ ರೈತಾಪಿ ವರ್ಗಕ್ಕೆ ಅನುಕೂಲಕರವಾಗಿದೆ.
ಈ ವರ್ಷದ ಜಾತ್ರೆಯ ಭಾಗವಾಗಿ ಮಾರ್ಚ್ 24 ರ ಭಾನುವಾರ ಗಂಗಾಪೂಜೆ, ನಂಧಿದ್ವಜಪೂಜೆ ಧ್ವಜಾರೋಹಣ, ಸೋಮವಾರ ರುದ್ರಾಭಿಷೇಕ ಮತ್ತು ಸಹಸ್ರಬಿಲ್ವಾರ್ಚನೆ, ಮಂಗಳವಾರದ ಚಿತ್ತಾ ನಕ್ಷತ್ರದಲ್ಲಿ ಬ್ರಹ್ಮ ರಥೋತ್ಸವ ಮತ್ತು ಸಂಜೆ ಶ್ರೀ ವೀರ ಬ್ರಹ್ಮೇಂದ್ರಸ್ವಾಮಿ ಚರಿತ್ರೆ ಎಂಬ ನಾಟಕ ಪ್ರದರ್ಶನ, ಬುಧವಾರ ಕಳಶಾರಾಧನೆ, ಎಲೆಪೂಜೆ, ಗುರುವಾರ ಕೊಬ್ಬರಿ ಕರ್ಪೂರ ಅಗ್ನಿಗೊಂಡ ಸಂಜೆ ಸುಗಮ ಸಂಗೀತ, ಶುಕ್ರವಾರ ಹೂವಿನ ರಥೋತ್ಸವ, ಶನಿವಾರ ಎಲೆಪೂಜೆ ಉತ್ಸವ, ಭಾನುವಾರ ವಸಂತೋತ್ಸವ ಹಾಗೂ ಗುಗ್ಗರಿ ಬಂಡಿ ಉತ್ಸವಗಳು ನೆರವೇರಲಿವೆ ಎಂದು ದೇವಾಲಯ ಕಾರ್ಯನಿರ್ವಾಕ ಸಮಿತಿ ತಿಳಿಸಿದೆ.
ಚಿತ್ತಾ ನಕ್ಷತ್ರದಲ್ಲಿ ವಿಜೃಂಭಣೆಯಿಂದ ನೆರವೇರುವ ಪ್ರಸಿದ್ಧ ರಥೋತ್ಸವಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಇತ್ತೀಚೆಗೆ ಆಡಳಿತ ಸಮಿತಿಯು ಭಕ್ತಾಧಿಗಳ ಸಹಕಾರದಿಂದ ದೇವಾಲಯ ಜೀರ್ಣೋದ್ದಾರ ಕೈಗೊಂಡಿದ್ದು, ದೇವಾಲಯ ಸುಂದರವಾಗಿ ರೂಪುಗೊಳ್ಳುತ್ತಿದೆ.
ಪ್ರತಿ ಸೋಮವಾರ ಮತ್ತು ಜಾತ್ರೆಯ ಸಮಯದಲ್ಲಿ ಪ್ರತಿನಿತ್ಯ ಅನ್ನದಾಸೋಹ ವ್ಯವಸ್ಥೆಯನ್ನು ಮಾಡಲಾಗಿದೆ. ವಿವಾಹ ಮಾಡಿಕೊಳ್ಳುವ ಬಡ ಜನತೆಗೆ ಅನುಕೂಲವಾಗಲೆಂದು ಕೇವಲ ಶುಭ್ರತೆಯ ವೆಚ್ಚವನ್ನು ಮಾತ್ರ ಪಡೆಯುತ್ತಾ ವಿವಾಹಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಈ ಕ್ಷೇತ್ರದಲ್ಲಿ ಮಾಡಲಾಗಿದೆ. ಆದಾಗಿ ಈ ಕ್ಷೇತ್ರವು ಸರಳ ವಿವಾಹಗಳ ವೇದಿಕೆಯಾಗಿ ಮಾರ್ಪಟ್ಟಿದ್ದು, ವರ್ಷಪೂರ್ತಿ ವಿವಾಹಗಳು ನೆರವೇರುತ್ತಲೇ ಇರುತ್ತವೆ.
ಇದರಂತೆ ಹೋಬಳಿ ಮಾರಮ್ಮನಹಳ್ಳಿ ಕ್ಷೇತ್ರದಲ್ಲಿ ಇದೇ ಚಿತ್ತಾ ನಕ್ಷತ್ರದಲ್ಲಿ ಕಾಯಕಯೋಗಿ ಗುರು ತಿಪ್ಪೇರುದ್ರಸ್ವಾಮಿಯ ಬ್ರಹ್ಮ ರಥೋತ್ಸವ ನೆರವೇರಲಿದೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296