ಕೊರಟಗೆರೆ ಪಟ್ಟಣದ ಕುಡಿಯುವ ನೀರಿನ ಜಂಪೇನಹಳ್ಳಿ ಕೆರೆಗೆ ಕಲುಷಿತ ನೀರು ಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮತುಮಕೂರು ವಾಹಿನಿ ವರದಿ ಮಾಡಿತ್ತು, ಈ ವರದಿಯ ಬೆನ್ನಲ್ಲೇ ಇದೀಗ ಕೊರಟಗೆರೆ ಗಂಧರ್ವ ಡಾಬ ಮಾಲೀಕರಿಗೆ ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಆಡಳಿತ ನೋಟಿಸ್ ಜಾರಿ ಮಾಡಿದೆ.
ಕೊರಟಗೆರೆ ಪಟ್ಟಣಕ್ಕೆ ಸರಬರಾಜು ಆಗುವ ಕುಡಿಯುವ ನೀರಿನ ಜಂಪೇನಹಳ್ಳಿ ಕೆರೆಗೆ ಡಾಬಗಳ ತ್ಯಾಜ್ಯ, ಕಲುಶಿತ ನೀರು ಬಿಡುವುದನ್ನು ತಡೆಗಟ್ಟಲು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಭಾಗ್ಯಮ್ಮ ಅವರಿಗೆ ಡಾಬಾ ಮಾಲೀಕ ಅಡ್ಡಿಪಡಿಸಿದ ಘಟನೆ ನಡೆದಿತ್ತು. ಈ ಬಗ್ಗೆ ನಮ್ಮತುಮಕೂರು ವಾಹಿನಿ ಸವಿವರವಾದ ವರದಿ ಪ್ರಕಟಿಸಿತ್ತು. ಈ ವರದಿ ಪ್ರಕಟವಾದ ಬೆನ್ನಲ್ಲೇ ಇಂದು ಜಂಪೇನಹಳ್ಳಿ ಕೆರೆಯ ಸ್ಥಳಕ್ಕೆ ತಾಲ್ಲೂಕು ಆಡಳಿತ ಭೇಟಿ ನೀಡಿದ್ದು, ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಭಾಗ್ಯಮ್ಮ ಭೇಟಿ ನೀಡಿದ್ದಾರೆ.
ಕೆರೆಯ ವಿಸ್ತೀರ್ಣ ಹಾಗೂ ಡಾಬಕ್ಕೆ ಸಂಬಂಧಿಸಿದ ಜಾಗದ ಕುರಿತು ಅಧಿಕಾರಿಗಳು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಹೆಚ್ಚಿನ ಮಾಹಿತಿ ಪರಿಶೀಲಿಸಿ ಕೆರೆಗೆ ಸಂಬಂಧಿಸಿದ ಜಾಗವನ್ನು ಪಟ್ಟಣ ಪಂಚಾಯಿತಿ ಅಧೀನಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಮುಖ್ಯ ಅಧಿಕಾರಿ ಭಾಗ್ಯಮ್ಮ ತಿಳಿಸಿದರು.
ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಮಾತನಾಡಿ, ಕೆರೆ ಹಾಗೂ ಡಾಬಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಿಳಿಸಿ ಸೂಕ್ತ ಕ್ರಮ ಸಲ್ಲಿಸುತ್ತೇವೆ ಎಂದರು.
ನಾಳೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ