ಜೈಪುರ: ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ‘ನವಯುಗದ ರಾವಣ’ ಎಂದು ತೋರಿಸಿರುವ ಕೇಸರಿ ಪಕ್ಷದ ಸಾಮಾಜಿಕ ಮಾಧ್ಯಮ ಪೋಸ್ಟ್ ಗೆ ಸಂಬಂಧಿಸಿದಂತೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ವಿರುದ್ಧ, ಕಾಂಗ್ರೆಸ್ ನಾಯಕರೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಐಪಿಸಿ ಸೆಕ್ಷನ್ 499 (ಇನ್ನೊಬ್ಬ ವ್ಯಕ್ತಿಯ ವಿರುದ್ಧ ಸುಳ್ಳು ಆರೋಪ), 500 (ಮಾನನಷ್ಟ), 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಇಬ್ಬರೂ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ನ ರಾಜಸ್ಥಾನ ಘಟಕದ ಪ್ರಧಾನ ಕಾರ್ಯದರ್ಶಿ ಜಸ್ವಂತ್ ಗುರ್ಜರ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಗುರ್ಜರ್ ಅವರು ಜೈಪುರ ಮೆಟ್ರೋಪಾಲಿಟನ್ ಕೋರ್ಟ್-11 ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಕ್ಟೋಬರ್ 9 ರಂದು ಅರ್ಜಿಯ ವಾದವನ್ನು ಆಲಿಸಲು ನ್ಯಾಯಾಲಯ ನಿರ್ಧರಿಸಿದೆ.
ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ಗಾಂಧಿಯನ್ನು ರಾಮ ವಿರೋಧಿ ಮತ್ತು ಧರ್ಮ ವಿರೋಧಿ ಎಂದು ಬಿಂಬಿಸಿ ಅವರ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಇಬ್ಬರೂ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಅರ್ಜಿದಾರರು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದಾರೆ. ಈ ಪೋಸ್ಟರ್ ವಿರುದ್ಧ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಹಲವು ಕಡೆ ಪ್ರತಿಭಟನೆ ನಡೆಸಿದೆ.
“ಭಾರತ್ ಖತ್ರೆ ಮೇ ಹೈ – ಕಾಂಗ್ರೆಸ್ ಪಕ್ಷದ ನಿರ್ಮಾಣ. ಜಾರ್ಜ್ ಸೊರೊಸ್ ನಿರ್ದೇಶನ” ಎಂಬ ಶೀರ್ಷಿಕೆಯೊಂದಿಗೆ ಹಲವಾರು ತಲೆಗಳನ್ನು ಹೊಂದಿರುವ ಗಾಂಧಿಯನ್ನು ಪೋಸ್ಟರ್ ತೋರಿಸಿದೆ.
ಪೋಸ್ಟರ್ನೊಂದಿಗೆ ಬಿಜೆಪಿಯ ಪೋಸ್ಟ್ನಲ್ಲಿ, “ನವಯುಗದ ರಾವಣ ಇಲ್ಲಿದೆ. ಅವನು ದುಷ್ಟ. ಧರ್ಮ ವಿರೋಧಿ. ರಾಮ ವಿರೋಧಿ. ಅವನ ಗುರಿ ಭಾರತವನ್ನು ನಾಶಮಾಡುವುದು “ ಎಂದು ಹೇಳಿದ್ದಾರೆ.


