ಮಧುಗಿರಿ : ಪ್ರಸಾರ ಮಾಧ್ಯಮದಿಂದ ಮನುಷ್ಯರಲ್ಲಿನ ಸಂಸ್ಕಾರಕ್ಕೆ ದಕ್ಕೆ ಬರುತ್ತಿದೆ ಎಂದು ಸರ್ವಧರ್ಮ ಸಮನ್ವಯ ಗುರುಪೀಠದ ಪೀಠಾಧ್ಯಕ್ಷ ಶ್ರೀ ಶ್ರೀ ಸುಗುಣಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ನಿಟ್ಟರ ಹಳ್ಳಿಯ ಅಭಯಹಸ್ತೆ ಆದಿಲಕ್ಷ್ಮಿ ಸಂಸ್ಥಾನ ನಿಜಶರಣ ಕಮ್ಮಾರ ಕಲ್ಲಯ್ಯನವರ ಸಂಸ್ಕರಣೆಯ ಮೂರನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಹಿರಿಯ ಚೇತನರಿಗೆ ಕುಶಲಕರ್ಮಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಜ್ಞಾನದ ಕೊರತೆ, ಧಾರ್ಮಿಕ ವ್ಯವಸ್ಥೆಯ ಕೊರತೆ ಇರುವುದರಿಂದ ಸಂಸ್ಕಾರ ಮರೆಯಾಗುತ್ತಿದೆ ಎಂದರು.
ಊರಿಗೆ ಒಬ್ಬ ಕಮ್ಮಾರ ಅವಶ್ಯಕ. ಕಮ್ಮಾರ ಇಲ್ಲದ ಮನೆ ಜೇಡ ಹತ್ತಿದ ಮನೆಯ ತರಹ. ಹುಟ್ಟು ಸಾವು ಎಲ್ಲದ್ದಕ್ಕೂ ಕಮ್ಮಾರ ಅವಶ್ಯಕ. ಹುಟ್ಟಿನಿಂದ ಸಾಯುವವರೆಗೂ ಎಲ್ಲಾ ಕ್ಷೇತ್ರಗಳಲ್ಲಿ ಕಮ್ಮಾರರ ಅವಶ್ಯ ಕತೆ ಇದೆ. ಆದರೆ ಸರ್ಕಾರದಲ್ಲಿ ಕಮ್ಮಾರರಿಗೆ ಯಾವುದೇ ವ್ಯವಸ್ಥೆ ಇಲ್ಲವಾಗಿದೆ. ಇದಕ್ಕೆ ಮುಖ್ಯ ಕಾರಣ ಹೋರಾಟದ ದೌರ್ಬಲ್ಯ ಎಂದ ಅವರು ಮುಂದಿನ ದಿನಗಳಲ್ಲಿ ಮನೆ ಮನೆಗಳಲ್ಲಿ ಹೋರಾಟಗಾರರು ಹುಟ್ಟಿಕೊಳ್ಳಬೇಕು ಕಮ್ಮಾರರು ಆಧುನಿಕ ವ್ಯವಸ್ಥೆಯಲ್ಲಿ ವೃತ್ತಿಯಲ್ಲಿ ತೊಡಗಿಕೊಂಡು ಜೀವನದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಸಮಾಜದ ವ್ಯವಸ್ಥೆ ಧಾರ್ಮಿಕ ವ್ಯವಸ್ಥೆ ಜಾತಿ ವ್ಯವಸ್ಥೆ ಮಠಗಳ ಮಧ್ಯ ಜಗಳ ಮತ್ತು ಕಮ್ಮಾರರಲ್ಲಿನ ಒಗ್ಗಟ್ಟಿನ ಕೊರತೆಯಿಂದ ಕಮ್ಮಾರರು ಮೂಲೆಗುಂಪಾಗುತ್ತಿದ್ದಾರೆ ಎಂದರು.
ನಿಜಶರಣ ಕಮ್ಮಾರ ಕಲ್ಲಯ್ಯ ಶ್ರೀಮಠದ ಪೀಠಾಧ್ಯಕ್ಷ ಶ್ರೀ ಶ್ರೀ ನೀಲಕಂಠಚಾರ್ಯ ಸ್ವಾಮೀಜಿ, ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಾಬು ಪತ್ತಾರ್, ಕಮ್ಮಾರ ಒಕ್ಕೂಟದ ರಾಜ್ಯಾಧ್ಯಕ್ಷ ಹನುಮಂತಯ್ಯ ಕಮ್ಮಾರ್, ಹೈಕೋರ್ಟ್ ವಕೀಲ ಮಹೇಶ್ ಕಮ್ಮಾರ್, ಕಮ್ಮಾರರ ಒಕ್ಕೂಟದ ಗೌರವಾಧ್ಯಕ್ಷ ಕೆ.ಪಿ.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಮಂಜಣ್ಣ ಕಮ್ಮಾರ್, ವಿಶ್ವಕರ್ಮ ನಿಗಮದ ಸದಸ್ಯ ಗೋವಿಂದರಾಜು ಕಮ್ಮಾರ, ಜನಾಂಗದ ಮುಖಂಡರುಗಳಾದ ಜಿ.ಎಸ್. ಕಮ್ಮಾರ್, ಕುಬೇರಪ್ಪ ಕಮ್ಮಾರ್, ಶಂಕರಪ್ಪ ಕಮ್ಮಾರ್ ಮತ್ತಿತರರು ಹಾಜರಿದ್ದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy