ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ: 2018 ರಿಂದ 2025ರ ವರೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಶಿವಗಂಗಾ ಚಿತ್ರಮಂದಿರದ ಮಾಲೀಕನಿಗೆ ಪ.ಪಂಚಾಯಿತಿ ಅಧಿಕಾರಿ ವರ್ಗ ಶುಕ್ರವಾರ ಬಿಗ್ ಶಾಕ್ ನೀಡಿದ್ದು ಚಿತ್ರಮಂದಿರ, ಕಲ್ಯಾಣ ಮಂಟಪ, ಹೋಟೆಲ್ ಜಪ್ತಿ ಮಾಡಿ 3 ದಿನದ ಒಳಗೆ ಕಂದಾಯ ಪಾವತಿ ಮಾಡುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕೊರಟಗೆರೆ ಪಟ್ಟಣ ಪಂಚಾಯಿತಿಯ ವಾರ್ಡ್ ನಂ.1 ರ ಗಂಗಾಧರಯ್ಯ ಬಿನ್ ಬಸೇಟಪ್ಪ ಖಾತೆ ನಂ.37/37 ರ ಬಾಕಿ ಇರುವ ಆಸ್ತಿ ತೆರಿಗೆಯನ್ನು 1964 ರ ಕಲಂ ಪುರಸಭಾ ಕಾಯ್ದೆ ಮತ್ತು ಸ್ವಯಂ ಘೋಷಣೆ ತೆರಿಗೆ ಪದ್ಧತಿಯಂತೆ ನಿಯಾಮನುಸಾರ ಪಾವತಿಸಬೇಕು. ಪ.ಪಂಚಾಯಿತಿ ಈಗಾಗಲೇ ತೆರಿಗೆ ಪಾವತಿಸುವಂತೆ 2018 ರಿಂದ 2022 ರವರೆಗೆ 6 ಬಾರಿ ತಿಳುವಳಿಕೆ ನೋಟಿಸ್ ನೀಡಿದ್ದು ಅಂತಿಮವಾಗಿ ನೋಟಿಸ್ ರಿಜಿಸ್ಟರ್ ಮೂಲಕ ಕಳುಹಿಸಲಾಗಿತ್ತು.
ತಿಳುವಳಿಕೆ ಪತ್ರ ಸ್ವೀಕರಿಸದೆ ತಿರಸ್ಕೃತ ಮಾಡಿದ ಕಾರಣ ಶಿವಗಂಗಾ ಚಿತ್ರಮಂದಿರಕ್ಕೆ ಮತ್ತು ಕಲ್ಯಾಣ ಮಂಟಪ, ಹೋಟೆಲ್ ಜಪ್ತಿ ಮಾಡಿ ಮಾಲೀಕನಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಶುಕ್ರವಾರ ಬಿಗ್ ಶಾಕ್ ನೀಡಿದ್ದು, ಪಾವತಿಸಬೇಕಾಗಿರುವುದು ತಪ್ಪಿದಲ್ಲಿ 143 ರಂತೆ ಕ್ರಮ ಕೈಗೊಳ್ಳಲಾಗುವುದು ಎಂಬ ಅಂಶವನ್ನು ಅಂತಿಮ ತಿಳುವಳಿಕೆ ನೋಟಿಸ್ನಲ್ಲಿ ಉಲ್ಲೇಖಿಸಿದೆ. ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಉಮೇಶ್, ಆರೋಗ್ಯ ನಿರೀಕ್ಷಕ ಹಿಸೇನ್, ಆರ್.ಐ ವೇಣುಗೋಪಾಲ್ ಸೇರಿದಂತೆ ಇತರರು ಇದ್ದರು.
ತೆರಿಗೆ ಆಸ್ತಿ ಬಾಕಿ ವಿವರ:
ಶಿವಂಗಾ ಚಿತ್ರಮಂದಿರದ ಮಾಲೀಕನಿಗೆ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಈಗಾಗಲೇ ಪ.ಪಂ 6 ಬಾರಿ ನೋಟಿಸ್ ನೀಡಿದೆ. ಅಂತಿಮ ತಿಳುವಳಿಕೆ ನೋಟಿಸ್ ತಿರಸ್ಕೃತ ಮಾಡಿದ ಕಾರಣ ಚಿತ್ರಮಂದಿರ, ಕಲ್ಯಾಣ ಮಂಟಪ, ಹೋಟೆಲ್ ಜಪ್ತಿ ಮಾಡಿದ್ದು ಬಾಕಿ ಉಳಿಸಿಕೊಂಡ 10 ಲಕ್ಷಕ್ಕೂ ಹೆಚ್ಚಿನ ಹಣ 3 ದಿನದ ಒಳಗೆ ಪಾವತಿಸುವಂತೆ ಪ.ಪಂಚಾಯಿತಿ ತಿಳುವಳಿಕೆ ನೋಟಿಸ್ ನಲ್ಲಿ ಉಲ್ಲೇಖಿಸಿದೆ.
ಶಿವಗಂಗಾ ಚಿತ್ರಮಂದಿರ ಮತ್ತು ಕಲ್ಯಾಣ ಮಂಟಪದ ಆಸ್ತಿ ತೆರಿಗೆ ಪಾವತಿ ಬಗ್ಗೆ ಅನೇಕ ಬಾರಿ ತಿಳುವಳಿಕೆ ನೋಟಿಸ್ ನೀಡಲಾಗಿತ್ತು. ತೆರಿಗೆ ಪೂರ್ಣ ಹಣ ಪಾವತಿಸಿದೆ ಸ್ವಲ್ಪ ಹಣ ಮಾತ್ರ ಪಾವತಿ ಮಾಡಿದ್ದು, ಬಾಕಿ ಹಣ ಸೇರಿ 10 ಲಕ್ಷಕ್ಕೂ ಹೆಚ್ಚಿನ ಹಣ ಪಾವತಿಸಬೇಕಿದೆ. ಈ ಹಿಂದೆ ಎರಡು ಬಾರಿ ಕಂದಾಯ ಕಟ್ಟದಿದ್ದಕ್ಕೆ ಜಪ್ತಿ ಮಾಡಿದ್ದೆವು, ಅಂತಿಮ ತಿಳುವಳಿಕೆ ನೋಟಿಸ್ ತಿರಸ್ಕೃತ ಮಾಡಿದ ಕಾರಣ ಮತ್ತೊಮ್ಮೆ ಜಪ್ತಿ ಮಾಡಲಾಗಿದೆ.
— ಉಮೇಶ್ ಕೆ.ಎಸ್. ಪ.ಪಂ ಮುಖ್ಯಾಧಿಕಾರಿ, ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW