ತುಮಕೂರು: ಜಿಲ್ಲೆಯಲ್ಲಿ ಹಂದಿಜೋಗಿಸ್ ಜನಾಂಗದ ಜಾತಿ ಪ್ರಮಾಣಪತ್ರಗಳನ್ನು ಇತರೆ ಜನಾಂಗದವರು ಸುಳ್ಳು ದಾಖಲಾತಿಗಳನ್ನು ನೀಡಿ, ಅಕ್ರಮವಾಗಿ ಅಲೆಮಾರಿ ಪರಿಶಿಷ್ಟ ಜಾತಿಗೆ ಸೇರಿದ ಹಂದಿಜೋಗಿಸ್ ಜನಾಂಗದ ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡು ಹಂದಿಜೋಗಿಸ್ ಜನಾಂಗಕ್ಕೆ ಸೇರಬೇಕಾದ ಸರ್ಕಾರದ ಸೌಲಭ್ಯಗಳು ಮತ್ತು ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ ಇದರಿಂದ ನಿಜವಾದ ಹಂದಿಜೋಗಿಸ್ ಜನಾಂಗದವರಿಗೆ ತೊಂದರೆಯಾಗುತ್ತಿದೆ ಎಂದು ತುಮಕೂರು ಜಿಲ್ಲಾ ಹಂದಿಜೋಗಿಸ್ ಸಂಘ ಜಂಟಿ ನಿರ್ದೇಶಕರು ತುಮಕೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಛೇರಿಗೆ ಮನವಿ ಸಲ್ಲಿಸಿದ್ದಾರೆ.
ನಿಜವಾದ ಹಂದಿಜೋಗಿಸ್ ಜನಾಂಗದವರ ಅನಕ್ಷರತೆ, ಬಡತನ ಮತ್ತು ತಮ್ಮ ಜನಾಂಗದ ಬಗ್ಗೆ ಧ್ವನಿ ಎತ್ತದ ನಾಯಕರಿಲ್ಲದ ಕಾರಣ ಕಳೆದ 08 ವರ್ಷಗಳಿಂದ ತುಮಕೂರು ಜಿಲ್ಲೆಯಲ್ಲಿ ಇತರೆ ಜನಾಂಗದವರು ಅಂದರೆ ಅತಿ ಹೆಚ್ಚಾಗಿ ಹೇಳವ ಜನಾಂಗದವರು ಹಂದಿ ಸಾಕುವ ಮತ್ತು ಹಂದಿ ಮಾರಾಟ ಮಾಡುವ ಹೆಸರಿನಲ್ಲಿ ನಾವೇ ಹಂದಿಜೋಗಿಸ್ ಗಳೆಂದು ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ನಿಜವಾದ ಹಂದಿಜೋಗಿಸ್ ಜನಾಂಗದವರ ಮೇಲೆ ದೌರ್ಜನ್ಯಗಳನ್ನು ಮಾಡುತ್ತಿದ್ದು ನಿಜವಾದ ಅಲೆಮಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿಯ ಪ್ರಮುಖ ಅಂಶಗಳು:
- ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಸಾತೇನಹಳ್ಳಿಯ ನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೆನಂ 49ರಲ್ಲಿ ಹಂದಿಜೋಗಿಸ್ ಜನಾಂಗಕ್ಕೆ ಮೀಸಲಾಗಿದ್ದ 02 ಎಕರೆ ಜಮೀನಿನಲ್ಲಿ ಅಕ್ರಮ ನಿವೇಶನಗಳನ್ನು ಪಡೆದುಕೊಂಡಿರುತ್ತಾರೆ, ಗುಬ್ಬಿ ತಾಲ್ಲೂಕಿನ ಗುಬ್ಬಿ ಪೊಲೀಸ್ ಠಾಣೆಯ 100 ಮೀಟರ್ ಬಳಿ ಇರು ಬಂಗ್ಲೊಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವರ ಶಾಲಾ ದಾಖಲಾತಿಗಳಲ್ಲಿ ಹೆಳವ ಜಾತಿ ಇರುತ್ತದೆ, ಆದರೆ ಸಾತೇನಹಳ್ಳಿ ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವರ ಮಕ್ಕಳ ದಾಖಲಾತಿಯಲ್ಲಿ ಹಂದಿಜೋಗಿಸ್ ಎಂದು ದಾಖಲಿಸಿರುತ್ತಾರೆ.
- ತುಮಕೂರು ಜಿಲ್ಲೆ ಅಮಲಾಪುರ ಸರ್ವೆ ನಂ 31 ರಲ್ಲಿ ಹಂದಿಜೋಗಿಸ್ ಜನಾಂಗಕ್ಕೆ ಮೀಸಲಾಗಿದ್ದ 01 ಎಕರೆ ಜಮೀನಿನಲ್ಲಿ ಅಕ್ರಮ ನಿವೇಶನಗಳನ್ನು ಸುಳ್ಳು ಜಾತಿ ದಾಖಲಾತಿಗಳನ್ನು ನೀಡಿ ಪಡೆದುಕೊಂಡಿರುತ್ತಾರೆ ಇದನ್ನು ಪರಿಶೀಲಿಸಲು ತಮ್ಮಲ್ಲಿ ಮನವಿ.
3.ಅಲೆಮಾರಿ ಬುಡಕಟ್ಟು ಅಭಿವೃದ್ದಿ ಮಹಾಸಭಾ ತುಮಕೂರು ಜಿಲ್ಲಾಧ್ಯಕ್ಷೆ ಶ್ರೀಮತಿ ರಾಮಕ್ಕ ಮೂಲತಃ ಹೆಳವ ಸಮುದಾಯಕ್ಕೆ ಸೇರಿದವರಾಗಿದ್ದು ಇವರೇ ಸದರಿ ಸುಳ್ಳು ಜಾತಿ ಪ್ರಮಾಣ ಪತ್ರದ ಸೂತ್ರದಾರರಾಗಿರುತ್ತಾರೆ.
- ಸದರಿ ಜಾತಿಯ ಪ್ರಮಾಣ ಪತ್ರಗಳು ಚಿಕ್ಕನಾಯಕನಹಳ್ಳಿ ಮತ್ತು ಸಿರಾ ತಾಲ್ಲೂಕಿನಲ್ಲಿಯೂ ಅಕ್ರಮವಾಗಿ ಪಡೆದುಕೊಂಡಿರುತ್ತಾರೆ.
ಈ ಬಗ್ಗೆ ಈಗಾಗಲೇ ತುಮಕೂರು ಜಿಲ್ಲಾಧಿಕಾರಿಗಳಿಗೆ, ಮತ್ತು ಜಂಟಿ ನಿರ್ದೇಶಕರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ತುಮಕೂರು ಹಾಗೂ ಉಪ ಪೊಲೀಸ್ ಅಧೀಕ್ಷಕರು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ತುಮಕೂರು ಮತ್ತು ವಿವಿಧ ತಾಲ್ಲೂಕಿನ ತಹಶೀಲ್ದಾರರಿಗೆ ಮನವಿ ನೀಡಿ ಸರಿಪಡಿಸಲು ಕೋರಿರುತ್ತದೆ. ಧ್ವನಿ ಇಲ್ಲದ ಸಮುದಾಯವಾದ್ದರಿಂದ ಯಾರು ಸಹ ಕ್ರಮ ಕೈಗೊಂಡಿರುವುದಿಲ್ಲ. ದಯಮಾಡಿ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಅಕ್ರಮವಾಗಿ ಅಥವಾ ಸುಳ್ಳು ದಾಖಲಾತಿಗಳನ್ನು ನೀಡಿ ಪಡೆದಿರುವ ಹಂದಿಜೋಗಿಸ್ ಜಾತಿ ಪ್ರಮಾಣ ಪತ್ರಗಳು ರದ್ದಾಗಬೇಕು ಮತ್ತು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಹಂದಿಜೋಗಿಸ್ ಸಂಘದ ಅಧ್ಯಕ್ಷ ಮುಕುಂದ, ಉಪಾಧ್ಯಕ್ಷ ಶ್ರೀನಿವಾಸ್ , ಕಾರ್ಯದರ್ಶಿ ಚಂದ್ರಶೇಖರ್ ವೇಣು, ಮತ್ತಿತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


