ಪಾವಗಡ: ತಮ್ಮ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ತಮ್ಮ ಸಮುದಾಯದ 45 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ನೋಟ್ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ವಿದ್ಯಾಭ್ಯಾಸಕ್ಕೆ ವಿಶೇಷ ಪ್ರೋತ್ಸಾಹವನ್ನು ನೀಡಿ ಮಾದರಿಯಾಗಿದ್ದಾರೆ.
ಪಾವಗಡ ತಾಲೂಕು ನಿಡಗಲ್ಲು ಹೋಬಳಿ ಹರಿಹರಪುರ ಗ್ರಾಮದಲ್ಲಿ ಈ ವಿಶೇಷ ವಿವಾಹ ನಡೆದಿದ್ದು, ಭಾರತೀಯ ಪರಿವರ್ತನಾ ಸಂಘದ ಪೋಷಕರಾಗಿರುವ ಹನುಮಂತರಾಯಪ್ಪ ಅವರ ಪುತ್ರ ಹೆಚ್.ರಾಜು ಹಾಗೂ ನೇಹಾ ಅಲಿಯಾಸ್ ಚಂದನ ಎ. ಅವರ ವಿವಾಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ಸಾಕ್ಷಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಹನುಮಂತರಪ್ಪ, ನಮ್ಮ ನಾಲ್ಕು ಜನ ಮಕ್ಕಳು ಇದೇ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಕಲಿತವರು. ಕೆಲವು ತಿಂಗಳುಗಳ ಹಿಂದೆ ತಮ್ಮ ಹೆಂಡತಿ ತೀರಿಕೊಂಡರು. ಆದರೆ ಅವರು ಬದುಕಿದ್ದಾಗಲೇ ನನಗೆ ಯಾವಾಗಲೂ ಹೇಳುತ್ತಿದ್ದರು. ನಮ್ಮ ಸ್ಕೂಲಿನ ವಿದ್ಯಾರ್ಥಿಗಳಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಅಂತ. ಅವರ ಆಸೆಯಂತೆಯೇ ನಮ್ಮ ಕುಟುಂಬದವರೆಲ್ಲರ ಒಮ್ಮತದಿಂದ ಒಪ್ಪಿ ಈ ದಿನ ನಮ್ಮ ಶಾಲೆಯಲ್ಲಿರುವ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ನಮ್ಮ ಕೈಲಾದಷ್ಟು ನಾವು ಕಷ್ಟಪಟ್ಟು ದುಡಿದ ನಮ್ಮ ಸ್ವಂತ ಹಣದಲ್ಲಿ ಸ್ಕೂಲ್ ಬ್ಯಾಗ್ ಮತ್ತು ನೋಟ್ ಬುಕ್ ಕಲಿಕಾ ಸಾಮಗ್ರಿಗಳನ್ನು ವಿತರಿಸುತಿದ್ದೇವೆ ಎಂದರು.
ಮದುವೆಗೆ ಎರಡು ಮೂರು ಲಕ್ಷ ಖರ್ಚು ಮಾಡಿದರೂ ಸಿಗದ ನೆಮ್ಮದಿ. ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿದಾಗ ಸಿಕ್ಕಿತು. ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ನಾವು ನುಡಿದಂತೆ ನಡೆಯಬೇಕು. ನಮ್ಮ ಊರಿನ ಗ್ರಾಮಸ್ಥರೆಲ್ಲರೂ ಮನಸ್ಸು ಮಾಡಿದರೆ ನಮ್ಮ ಶಾಲೆಯ ಕಟ್ಟಡವನ್ನು ಹೊಸದಾಗಿ ಕಟ್ಟಬಹುದು ಎಂದು ಸ್ಪೂರ್ತಿದಾಯಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಭಾರತೀಯ ಪರಿವರ್ತನಾ ಸಂಘ ತುಮಕೂರು ಜಿಲ್ಲೆ ಮುಖಂಡರು ಆದ ಹೆಚ್. ಕೆಂಚರಾಯ, ಪಾವಗಡ ತಾಲೂಕು ಬಿಪಿಎಸ್ ಸಂಯೋಜಕರು ಆದ ಹೆಚ್.ಡಿ.ಈರಣ್ಣ, ಕಲಾವಿದರಾದ ನಾಗರಾಜು, ನರಸಿಂಹಮೂರ್ತಿ, ಹರಿಹರಪುರ ಗ್ರಾಮಸ್ಥರು ಹಾಗೂ ಎಸ್ ಡಿಎಂಸಿ ಅಧ್ಯಕ್ಷರು ಸದಸ್ಯರು, ಶಾಲೆಯ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ ತಾಲ್ಲೂಕು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz