ಕೊರಟಗೆರೆ: ನೈಸರ್ಗಿಕ ಬಂಡೆಗಳ ಮೇಲೆ ನೂರಾರು ವರ್ಷಗಳಿಂದ ಕೃಷಿ ಉತ್ಪನ್ನಗಳನ್ನು ಶುಚಿ ಮಾಡುತ್ತಿದ್ದ ರೈತರಿಗೆ ಕಳೆದ ಮೂರು ವರ್ಷಗಳಿಂದ ಮದ್ಯದ ಬಾಟಲ್ ನ ಚೂರುಗಳನ್ನು ಸ್ವಚ್ಚಗೊಳಿಸುವುದೇ ತಲೆ ನೋವಾಗಿದೆ.
ಕೃಷಿಕರು ತಾವು ಬೆಳೆದ ರಾಗಿ,ತೊಗರಿ,ಜೋಳ ಸೇರಿದಂತೆ ಆಹಾರ ಬೆಳೆಗಳನ್ನು ನೈಸರ್ಗಿಕ ಬಂಡೆಯ ಮೇಲೆ ಶುಚಿ ಮಾಡುತ್ತಿದ್ದರು. ಜಮೀನುಗಳಲ್ಲಿ ಕಣ ಸಿದ್ಧ ಮಾಡುವ ಸಂಪ್ರದಾಯ ಕೈಬಿಟ್ಟ ನಂತರ ಮತ್ತು ರಸ್ತೆ ಮೇಲೆ ಸಂಸ್ಕರಣೆ ಮಾಡಿದರೆ ಶುಚಿಯಾಗಿರುವುದಿಲ್ಲ ಎಂದು ಬಂಡೆಗಳನ್ನೇ ರೈತರು ಅಶ್ರಯಿಸಿದ್ದರು. ಅನಂತರ ಬಂಡೆಗಳ ಮೇಲೆ ಜಾಗ ಕಾಯ್ದಿರಿಸಲು ಕೃಷಿಕರಲ್ಲಿ ಪೈಪೋಟಿ ಪ್ರಾರಂಭವಾಗಿತ್ತು.
ತೋವಿನಕೆರೆ ಸಮೀಪ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಬಂಡೆಹಳ್ಳಿ ತಿರುವಿನಲ್ಲಿರುವ ಬಂಡೆ ಮೇಲೆ ರಾಗಿ ತೆನೆಗಳನ್ನು ರಾಶಿ ಹಾಕಿ ಶುಚಿ ಮಾಡಲಾಗುತ್ತಿದೆ.
ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಬಂಡೆಹಳ್ಳಿ ಆಲದ ಮರದ ಬಂಡೆ, ಮಲ್ಲಪುಡಿ ಬಂಡೆ, ಓಣಿ ಬಂಡೆ, ಜುಂಜರಾಮನಹಳ್ಳಿ ಬಂಡೆ, ಹೊಲತಾಳುವಿನ ಸೀಬಯ್ಯನ ಬಂಡೆ,ಗೊಲ್ಲರ ಹಟ್ಟಿ ಬಂಡೆ, ನವನಗರ ಬಂಡೆ, ಬಿಕ್ಕೆಗುಟ್ಟೆ ಬಂಡೆಗಳ ಮೇಲೆ ಹಲವು ಟನ್ ಗಳಷ್ಟು ರಾಗಿ, ಮೆಕ್ಕೆಜೋಳ, ಭತ್ತ ಶುದ್ದವಾಗುತ್ತಿತ್ತು ಎನ್ನುತ್ತಾರೆ ರೈತರು.
ಬಂಡೆಗಳ ಮೇಲೆ ಶುಚಿ ಮಾಡಿದ ರಾಗಿಗೆ ಹೆಚ್ಚಿನ ಬೇಡಿಕೆ ಇದ್ದು. ಸ್ಥಳದಲ್ಲಿಯೇ ಹಲವು ಕ್ವಿಂಟಾಲ್ ರಾಗಿ ಮಾರಾಟವಾಗುತ್ತಿತ್ತು. ಕಳೆದ ವರ್ಷ ರಾಗಿ ಕಟಾವು ಮಾಡುವಾಗ ಹೆಚ್ಚು ಮಳೆ ಬಂದು ರಾಗಿ ತೆನೆ ಹಾಳಾಗಿತ್ತು. ಖಾಲಿ ಇದ್ದ ಬಂಡೆಗಳು ಮದ್ಯವ್ಯಸನಿಗಳ ಕುಡಿಯುವ ತಾಣವಾಗಿತ್ತು. ಬಾಟಲ್ ಗಳನ್ನು ಒಡೆದು ಚೂರು ಮಾಡುತ್ತಿದ್ದರು ಎನ್ನುವುದು ಸ್ಥಳೀಯರ ದೂರಾಗಿದೆ.
ತೋವಿನಕೆರೆ ಸಮೀಪದ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಬಂಡೆಹಳ್ಳಿ ತಿರುವುನಲ್ಲಿ ರಾಗಿ ಶುಚಿ ಮಾಡುತ್ತಿದ್ದ ಬಂಡೆ ಮೇಲೆ ಮದ್ಯದ ಬಾಟಲ್ ಮತ್ತು ಚೂರುಗಳನ್ನು ಹಾಕಲಾಗಿದೆ.
ಬಂಡೆಗಳು ಕುಡುಕರ ತಾಣವಾದ ನಂತರ ಶುಚಿ ಮಾಡಿದಾಗ ರಾಗಿಯ ಜೊತೆ ಗಾಜಿನ ಚೂರು ಸೇರಿ ಕೊಳ್ಳುತ್ತಿವೆ. ಇಂತಹ ರಾಗಿಯಿಂದ ಮಾಡಿದ ಆಹಾರ ಸೇವಿಸುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ರೈತರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy