ಮಧುಗಿರಿ: ಮಧುಗಿರಿ ವಲಯ ವ್ಯಾಪ್ತಿಯಲ್ಲಿ ನಕಲಿ ಮದ್ಯ/ಕಳ್ಳಭಟ್ಟಿ ಸಾರಾಯಿ/ಸೇಂದಿ/ಅಕ್ರಮ ಮದ್ಯ ಮಾರಾಟ,ಹೊಂದುವಿಕೆ, ಸರಬರಾಜು ಇಂತಹ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖಾ ಸಿಬ್ಬಂದಿಯು ನಿರಂತರವಾಗಿ ಮಾಹಿತಿ ಸಂಗ್ರಹಿಸಿ ಗಸ್ತು ಕಾರ್ಯ ನಡೆಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ದಿನಾಂಕ: 22-10-2023 ರಂದು ಬೆಳಗ್ಗೆ 10.00 ಸಮಯದಲ್ಲಿ ಮಧುಗಿರಿ ತಾಲ್ಲೂಕು, ಮಿಡಿಗೇಶಿ ಹೋಬಳಿ, ನೀರಕಲ್ಲು ಗ್ರಾಮದಿಂದ ಚಿನ್ನೇನಹಳ್ಳಿ ಗ್ರಾಮಕ್ಕೆ ತೆರಳುವ ಕಚ್ಚಾ ರಸ್ತೆಯಲ್ಲಿ ದಾಳಿ ನಡೆಸಲಾಯಿತು.
ಆರೋಪಿತನು KA-06-EP-2998 ಟಿ.ವಿ.ಎಸ್. ಸಿವಿಟಿ ದ್ವಿಚಕ್ರ ವಾಹನದಲ್ಲಿ ಮಾರಾಟದ ಸಲುವಾಗಿ ಅಕ್ರಮವಾಗಿ ಕರ್ನಾಟಕ ರಾಜ್ಯದಲ್ಲಿ ನಿಷೇಧವಿರುವ 15 ಲೀಟರ್ ಸೇಂದಿಯನ್ನು ನೆರೆಯ ರಾಜ್ಯ ಆಂಧ್ರ ಪ್ರದೇಶದ ಯರಬೊಮ್ಮನಹಳ್ಳಿಯಿಂದ ಚಿನ್ನೇನಹಳ್ಳಿ ಗ್ರಾಮಕ್ಕೆ ಸಾಗಣಿಕೆ ಮಾಡುತ್ತಿರುವುದು ಕಂಡು ಬಂದಿದ್ದು, ಆರೋಪಿಯಾದ ರಂಗನಾಥ್ ಬಿನ್ ಮಾರಣ್ಣ, 26 ವರ್ಷ, ಚಿನ್ನೇನಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ,ಮಧುಗಿರಿ ತಾಲ್ಲೂಕು ಇವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ-1965ರಸೆಕ್ಷನ್-11,12,14,13(1)(ಎ),34 ಮತ್ತು 38(ಎ)ರಡಿಯಲ್ಲಿ ನಡೆಸಿ ಮುಂದಿನ ಕ್ರಮ ಘೋರ ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುವುದು. ಜಪ್ತು ಪಡಿಸಿದ ವಾಹನ ಮತ್ತು ಸೇಂದಿಯ ಒಟ್ಟಾರೆ ಮೌಲ್ಯ ರೂ.41,700 ಗಳಾಗಿರುತ್ತದೆ.
ಅಬಕಾರಿ ಇನ್ಸ್ಪೆಕ್ಟರ್ ರಾಮಮೂರ್ತಿ.ಎಸ್ ಇವರ ನೇತೃತ್ವದಲ್ಲಿ ದಾಳಿ ಕಾರ್ಯ ನಡೆಸಿದ್ದು, ದಾಳಿ ಕಾರ್ಯದಲ್ಲಿ ಉಪ ನಿರೀಕ್ಷಕರಾದ ಮನು ಬಿ.ಜೆ. ಹಾಗೂ ಸಿಬ್ಬಂದಿಗಳಾದ ಶರಣಪ್ಪ ಹಡಪದ್,ತೋಸಿಫ್ ಖಾನ್ ಭಾಗವಹಿಸಿದ್ದರು.
ವರದಿ: ಅಬಿದ್ ಮಧುಗಿರಿ