ಬೆಂಗಳೂರು: ಮಧ್ಯರಾತ್ರಿ ರಸ್ತೆ ಬದಿ ಕಾಣಿಸಿದ ಮಹಿಳೆಯನ್ನು ಕರೆದೊಯ್ದು ಜೀಪ್ನಲ್ಲೇ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ಸಹಾಯಕ ಸಬ್ ಇನ್ ಸ್ಪೆಕ್ಟರ್ ಗೆ 62 ವರ್ಷ ತುಂಬಿರುವ ಜೊತೆಗೆ ವಯೋವೃದ್ಧ ತಾಯಿ, ಪತ್ನಿಯ ಆರೈಕೆ ಮತ್ತು ಮಕ್ಕಳ ಮದುವೆ ಮಾಡಬೇಕಾದ ಕಾರಣ ಪರಿಗಣಿಸಿರುವ ಹೈಕೋರ್ಟ್ ಶಿಕ್ಷಾ ಅವಧಿಯನ್ನು 10 ವರ್ಷಕ್ಕೆ ಇಳಿಸಿದೆ.
ತನಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ತುಮಕೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಂದಿನ ಸಹಾಯಕ ಸಬ್ ಇನ್ಸ್ಪೆಕ್ಟರ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್, ಶಿಕ್ಷಾವಧಿಯನ್ನು ಇಳಿಸಿದೆ. ಇದರಿಂದ ಈಗಾಗಲೇ 9 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಪೊಲೀಸ್ ಅಧಿಕಾರಿ ಇನ್ನೊಂದು ವರ್ಷ ಶಿಕ್ಷೆ ಪೂರೈಸಿದ ಬಳಿಕ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಅಮಿತ್ ರಾಣಾ ಮತ್ತು ಹರಿಯಾಣ ಸರ್ಕಾರದ ನಡುವಿನ ಪ್ರಕರಣದಲ್ಲಿ ಕಾನೂನಿನಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಲ್ಪಟ್ಟ ಸಂದರ್ಭದಲ್ಲಿ ಶಿಕ್ಷೆ ಪ್ರಮಾಣ ಇಳಿಸಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದುಕೊಂಡು, ತನ್ನ ಸುಪರ್ದಿಯಲ್ಲಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಅಪರಾಧಕ್ಕೆ ಉಮೇಶ್ಗೆ ಭಾರತೀಯ ದಂಡ ಸಂಹಿತೆ (ಐಪಿಸಿ ಸೆಕ್ಷನ್ 376 (2)(ಎ)(3) ಅಡಿ 20 ವರ್ಷ ಜೈಲು ಮತ್ತು ಐಪಿಸಿ ಸೆಕ್ಷನ್ 376 (2)(ಎಲ್) ಅಡಿ ಮಾನಸಿಕ ಮತ್ತು ದೈಹಿಕ ಅಂಗವೈಕಲ್ಯದಿಂದ ಬಳಲುತ್ತಿರುವ ಮಹಿಳೆ ಮೇಲಿನ ಅತ್ಯಾಚಾರ ಅಪರಾಧಕ್ಕೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಅಧೀನ ನ್ಯಾಯಾಲಯ ಆದೇಶಿಸಿದೆ. ಎರಡೂ ಸೆಕ್ಷನ್ಗಳ ಅಡಿಯಲ್ಲಿ ಕನಿಷ್ಠ 7 ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಈ ಶಿಕ್ಷೆ ಅಡಿಯಲ್ಲಿ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಲು ಅಧೀನ ನ್ಯಾಯಾಲಯ ಸಮಂಜಸ ಕಾರಣ ನೀಡಿಲ್ಲ ಎಂದು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ.
ಇವರಿಗೆ 62 ವರ್ಷ ವಯಸ್ಸಾಗಿದ್ದು, ಈಗಾಗಲೇ 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಸದ್ಯ ವಯೋವೃದ್ಧ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳ ಆರೈಕೆ ಹಾಗೂ ಮಕ್ಕಳ ಮದುವೆ ಮಾಡಬೇಕಿದೆ. ಇದರಿಂದ ಶಿಕ್ಷೆ ಪ್ರಮಾಣ 10 ವರ್ಷಕ್ಕೆ ಇಳಿಸುವಂತೆ ಆರೋಪಿ ಪರ ವಕೀಲರು ಕೋರಿದ್ದಾರೆ. ಈ ಮನವಿ ಮತ್ತು ಸುಪ್ರೀಂಕೋರ್ಟ್ ಆದೇಶ ಪರಿಗಣಿಸಿ, ಉಮೇಶ್ ಅನ್ನು ಅಪರಾಧಿಯಾಗಿ ತೀರ್ಮಾನಿಸಿದ್ದರೂ ಶಿಕ್ಷಾವಧಿ ಮಾರ್ಪಡಿಸಲಾಗಿದೆ. ಅದರಂತೆ ಐಪಿಸಿ ಸೆಕ್ಷನ್ 376 (2)(ಎ) ಅಡಿಯಲ್ಲಿ ಹತ್ತು ವರ್ಷ ಜೈಲು, 50 ಸಾವಿರ ರೂ. ಮತ್ತು ಐಪಿಸಿ ಸೆಕ್ಷನ್ 376 (2)(ಎಲ್) ಅಡಿಯಲ್ಲಿ ಹತ್ತು ವರ್ಷ ಜೈಲು ಮತ್ತು 50 ಸಾವಿರ ರೂ. ದಂಡ ವಿಧಿಸಲಾಗಿದೆ. ಅಪರಾಧಿ ದಂಡ ಮೊತ್ತ ಕಟ್ಟಿದ ನಂತರ ಶಿಕ್ಷಾವಧಿ ಕಡಿತದ ಲಾಭ ಪಡೆಯಲು ಅರ್ಹನಾಗುತ್ತಾನೆ. ದಂಡ ಮೊತ್ತವನ್ನು ಸಂತ್ರಸ್ತೆಗೆ ಅಧೀನ ನ್ಯಾಯಾಲಯ ವಿತರಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಸೂಚಿಸಲಾಗಿದೆ.
ಘಟನೆ ಹಿನ್ನೆಲೆ: 2017ರ ಮೇ 14 ಮತ್ತು 15 ರಂದು ಬೆಳಗಿನ ಜಾವ 2.15ರ ಸಮಯದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್, ಅಂತರಸನಹಳ್ಳಿ ಬೈಪಾಸ್ ಬ್ರಿಡ್ಜ್ ಬಳಿ ಕಾಣಿಸಿದ ಮಹಿಳೆಯನ್ನು ಕರೆದೊಯ್ದು, ನೃಪತುಂಗ ಬಸ್ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಜೀಪ್ನಲ್ಲೇ ಅತ್ಯಾಚಾರ ನಡೆಸಿದ್ದನು. ತುಮಕೂರು ಮಹಿಳಾ ಪೊಲೀಸ್ ಠಾಣೆಯವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ತುಮಕೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಉಮೇಶನನ್ನು ಅಪರಾಧಿಯಾಗಿ ತೀರ್ಮಾನಿಸಿ, ಐಪಿಸಿ ಸೆಕ್ಷನ್ 376(2)(ಎ)(3) ಮತ್ತು 376 (2)(ಎಲ್) ಅಡಿಯಲ್ಲಿ ತಲಾ 20 ವರ್ಷ ಜೈಲು ಮತ್ತು 50 ಸಾವಿರ ರೂ. ದಂಡ ವಿಧಿಸಿ 2022ರ ಜನವರಿಯಲ್ಲಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಇವರ ಪರ ವಕೀಲರು, ಅಧೀನ ನ್ಯಾಯಾಲಯವು ಊಹಾಪೋಹದ ಆಧಾರದಲ್ಲಿ ಅವರನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಿದೆ ಎಂದು ವಾದಿಸಿದ್ದರು. ನಂತರ ಅಮಿತ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಅನುಸಾರ ಶಿಕ್ಷಾವಧಿ ಕಡಿತಕ್ಕೆ ಕೋರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


