ಕೆಲ ದಿನಗಳಿಂದ ಗಂಭೀರ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡದ ಕಿರುತೆರೆ ನಟಿ ರಶ್ಮಿ ಲೀಲಾ ಸೋಮವಾರ ನಿಧನರಾಗಿದ್ದಾರೆ.
ಶ್ವಾಸಕೋಶದ ಕಾಯಿಲೆಯಾದ ಪಲ್ಮನರಿ ಫೈಬ್ರೋಸಿಸ್ನಿಂದ ಬಳಲುತ್ತಿದ್ದ ಅವರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕೆಲ ದಿನಗಳ ಹಿಂದಷ್ಟೇ ಸೂಕ್ತ ದಾನಿಗಳು ಬಂದ ಹಿನ್ನಲೆಯಲ್ಲಿ ಶ್ವಾಸಕೋಶದ ಟ್ರಾನ್ಸ್ ಪ್ಲಾಂಟ್ ಕೂಡ ಮಾಡಲಾಗಿತ್ತು ಎನ್ನಲಾಗಿದೆ.
ಆ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಿರುತೆರೆ ನಟಿ ರಶ್ಮಿ ಲೀಲಾಗೆ ಚಿಕಿತ್ಸೆ ಮುಂದುವರೆದಿತ್ತು. ಆದರೇ ಇಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಸುದ್ದಿಯನ್ನು ಅವರ ಪತಿ ಸಾರಕ್ಕಿ ಮಂಜು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂದು ಬೆಳಗ್ಗೆ ಒಂದು ಪೋಸ್ಟ್ ಮಾಡಿದ್ದ ಸಾರಕ್ಕಿ ಮಂಜು, ಹೃದಯದ ಬಡಿತ ತೀವ್ರ ಇಳಿಮುಖ ಆಗುತ್ತಿದೆ. ಕೊನೆಯ ಬಾರಿಗೆ ಒಂದು ಸಲ, ಒಂದೇ ಒಂದು ಸಲ ಈ ನನ್ನ ಜೀವ ಉಳಿದು ಬಿಡಲಿ. ಉಳಿಸಿಕೊಡಲೆಂದು ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಬಿಡಿ ಎಂದು ಪೋಸ್ಟ್ ಹಾಕಿದ್ದರು.
ಬಳಿಕ ನಮ್ಮ ಪ್ರಾಣ ಹೊರಟು ಹೋಯ್ತು ಎಂದು ಮತ್ತೊಂದು ಪೋಸ್ಟ್ ಹಾಕಿ ರಶ್ಮಿ ಲೀಲಾ ನಿಧನದ ವಿಚಾರ ತಿಳಿಸಿದ್ದಾರೆ.
2019 ರಿಂದ ಪಲ್ಮನರಿ ಫೈಬ್ರೋಸಿಸ್ನಿಂದ ಬಳಲುತ್ತಿದ್ದ ರಶ್ಮಿ ಲೀಲಾ ಅವರಿಗೆ ಕಳೆದ ಫೆಬ್ರವರಿಯಲ್ಲಿ ಲಂಗ್ ಟ್ರಾನ್ಸ್ ಪ್ಲಾಂಟ್ ಆಗಿತ್ತು ಎನ್ನಲಾಗಿದೆ. ಇದಕ್ಕಾಗಿ ಆರ್ಥಿಕ ಸಹಾಯ ಕೋರಿ ಕಳೆದ ಆಗಸ್ಟ್ ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಚಿಕಿತ್ಸೆಗೆ 19 ಲಕ್ಷ ರೂಪಾಯಿಗಳ ಅಗತ್ಯವಿದೆ ಎಂದು ಬರೆದುಕೊಂಡಿದ್ದರು.
ನಟಿ ರಶ್ಮಿ ಲೀಲಾ ಅವರು ಕನ್ನಡದ ಹಲವು ಸೀರಿಯಲ್ಗಳಲ್ಲಿ ನಟಿಸಿ ಜನಪ್ರಿಯರಾಗಿದ್ರು, ಬಾಂಧವ್ಯ, ಕಾವ್ಯಾಂಜಲಿ, ಕುಸುಮ, ಪಾಪಾ ಪಾಂಡು, ಗೋಧೂಳಿ, ಕವಲುದಾರಿ, ಮಗಳು ಜಾನಕಿ, ‘ಕನ್ನಡಿ’, ‘ಹೊಗ್ಲಿ ಬಿಡಿ ಸರ್’, ‘ಆನಂದ ಸಾಗರ’ ಮುಂತಾದ ಕನ್ನಡ ಸೀರಿಯಲ್ಗಳಲ್ಲಿ ರಶ್ಮಿ ಲೀಲಾ ಅಭಿನಯಿಸಿದ್ದರು. ‘ಪ್ರಾಣ’, ‘ಗ್ರಾಮದೇವತೆ’, ‘ಸಿಹಿ ಮುತ್ತು’, ‘ಕೆಂಪು ದೀಪ’ ಮುಂತಾದ ಸಿನಿಮಾಗಳಲ್ಲಿ ರಶ್ಮಿ ಲೀಲಾ ನಟಿಸಿದ್ದರು.
ರಶ್ಮಿ ಲೀಲಾ ಪತಿ ಸಾರಕ್ಕಿ ಮಂಜು ಕನ್ನಡ ಕಿರುತೆರೆಯಲ್ಲಿ ಬರಹಗಾರರಾಗಿ, ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದಾರೆ. ರಶ್ಮಿ ಲೀಲಾ — ಸಾರಕ್ಕಿ ಮಂಜು ದಂಪತಿಗೆ ಓರ್ವ ಪುತ್ರಿ ಇದ್ದಾಳೆ.
ವರದಿ: ರಾಘವೇಂದ್ರ ಅಡಿಗ ಎಚ್ಚೆನ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


