ಸರಗೂರು: ಶಿವಾರ್ಚಕರಿಗೆ ಸರಕಾರ ನೀಡುತ್ತಿರುವ ಸಂಭಾವನೆಯು ತುಂಬಾ ಕಡಿಮೆಯಾಗಿದ್ದು, ಇದರಿಂದ ಜೀವನ ನಿರ್ವಹಣೆಯೂ ಕಷ್ಟಕರವಾಗಿರುವುದು ನೋವಿನ ಸಂಗತಿಯಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಬೇಸರವ್ಯಕ್ತಪಡಿಸಿದರು.
ಪಟ್ಟಣದ ಕೋಟೆ-ಸರಗೂರು ಮುಖ್ಯ ರಸ್ತೆಯಲ್ಲಿರುವ ಸೌಜನ್ಯ ಗ್ಯಾಸ್ ಪ್ಯಾಕ್ಟರಿ ಪಕ್ಕದ ತಾಲೂಕು ಶಿವಾರ್ಚಕರ ಸಂಘದ ನಿವೇಶನದಲ್ಲಿ ಬುಧವಾರ ಕೋಟೆ–ಸರಗೂರು ತಾಲೂಕು ಶಿವಾರ್ಚಕರ ಸಂಘದಿಂದ ನಡೆದ ಸಂಘದ ವಾರ್ಷಿಕ ಮಹಾಸಭೆ, ನಾಮಫಲಕ ಅನಾವರಣ, 2023ನೇ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ, ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಾರ್ಚಕರಿಗೆ ಹೆಚ್ಚಿನ ಸಂಭಾವನೆ ಸೇರಿದಂತೆ ಸರಕಾರದಿಂದ ಸಿಗುವ ಮೂಲ ಸೌಲಭ್ಯಗಳು ಸಮರ್ಪಕವಾಗಿ ಸಿಗಬೇಕು. ಈ ನಿಟ್ಟಿನಲ್ಲಿ ಇಲಾಖೆ ಕ್ರಮವಹಿಸಬೇಕು. ಇವರು ದೇವಸ್ಥಾನದ ಆರತಿ ತಟ್ಟೆಯಲ್ಲಿನ ಬಿಡಿಗಾಸಿನಿಂದ ತಕ್ಕಮಟ್ಟಿಗೆ ಜೀವನ ನಡೆಸುತ್ತಿದ್ದು, ಸರಕಾರ ಇತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಮೈಸೂರು ಮಹಾರಾಜ ಸಂಸ್ಕೃತ ಪಾಠಶಾಲೆಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಲ್ಲಣ್ಣ ಪ್ರಸ್ತಾವಿಕವಾಗಿ ಮಾತನಾಡಿ, ಇಲ್ಲಿನ ಶಿವಾರ್ಚಕರ ಸಂಘವೂ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದ್ದು, ಆರ್ಚಕರ ಪುಣ್ಯನಿಧಿಯಿಂದ ಆರ್ಚಕರ ಪಾಠಶಾಲೆ, ಸಮುದಾಯ ಭವನ ನಿರ್ಮಾಣಕ್ಕೆ ಮುನ್ನುಡಿ ಬರೆಯಬೇಕು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರವಿಕುಮಾರ್ ಶಾಸ್ತ್ರಿ ಮಾತನಾಡಿ, ಸಂಘದ ಬೆಳೆವಣಿಗೆಗೆ ಶಿವಾರ್ಚಕರುಸಹಕರಿಸಬೇಕು. ಸಂಘವು ಮುಂದಿನ ದಿನಗಳಲ್ಲಿ ಹೆಮ್ಮರವಾಗಿ ಬೆಳೆಯಲು ಪ್ರೋತ್ಸಾಹ ಅಗತ್ಯವಾಗಿದೆ ಎಂದರು. ಪಡುವಲು ವಿರಕ್ತಮಠದ ಮಹದೇವಸ್ವಾಮೀಜಿ ಆಶೀರ್ವಚನ ನೀಡಿದರು.
ಸಂಘದ ಅಧ್ಯಕ್ಷ ರವಿಕುಮಾರ್ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಶಿವಾರ್ಚಕರ ಸಂಘದ ಅಧ್ಯಕ್ಷ ಕೆ.ಎಂ.ನಂಜುಂಡಪ್ಪ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಬಿಜೆಪಿ ಮುಖಂಡ ಎಂ.ಅಪ್ಪಣ್ಣ, ಬಿಜೆಪಿ ಮುಖಂಡ ಡಾ.ಎಚ್.ವಿ.ಕೃಷ್ಣಸ್ವಾಮಿ, ಆಪ್ತಸಹಾಯಕ ಶಿವಕುಮಾರ್, ಜೆಡಿಎಸ್ ಮುಖಂಡ ಜಯಪ್ರಕಾಶ್, ನಾಯಕ ಸಮಾಜದ ಅಧ್ಯಕ್ಷ ದೊಡ್ಡನಾಯಕ ಮಾತನಾಡಿದರು.
ಸಂಘದ ಗೌರವಾಧ್ಯಕ್ಷರಾದ ನಾಗರಾಜಪ್ಪ, ಸಿ.ನಾಗರಾಜು, ಉಪಾಧ್ಯಕ್ಷ ನಂಜುಂಡಸ್ವಾಮಿ, ಕಾರ್ಯದರ್ಶಿ ಎಂ.ಎಸ್.ಜಗದೀಶ್, ಖಜಾಂಚಿ ಎನ್.ಮಹದೇವಸ್ವಾಮಿ, ನಿರ್ದೇಶಕರಾದ ಎನ್.ಚಂದ್ರಪ್ಪ, ಕೆ.ಜೆ.ಯಶವಂತ್, ಸತೀಶ್, ಗೀತಾಸುಬ್ಬಣ್ಣ, ವೀರಣ್ಣ, ಸುರೇಶ್, ಮಹದೇವಪ್ಪ, ಶಿವಪ್ಪ, ಎನ್.ಎಸ್.ರವಿಕುಮಾರ್, ನಂಜಪ್ಪ, ಶಿವಕುಮಾರ್ ಸೇರಿದಂತೆ ಶಿವಾರ್ಚಕರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಶಿವಾರ್ಚಕ ಸಂಘದ ಹಿರಿಯ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿಯ ಹಾಲಿ, ಮಾಜಿ ಅಧ್ಯಕ್ಷರು, ಸದಸ್ಯರನ್ನು ಸನ್ಮಾನಿಸಲಾಯಿತು. ಸದಸ್ಯರಿಗೆ ನೆನಪಿನ ಕಾಣಿಕೆಯಾಗಿ ಗಡಿಯಾರ ವಿತರಿಸಲಾಯಿತು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy